Thursday, April 17, 2008

ಹೊಸ ಹಾದಿಯ ಭಯ


ಈಗ ದಿನದ ಸುಮಾರು ೭-೮ ಗಂಟೆಯಾದರೂ ನನ್ನ ಸಂಗಾತಿಯಾಗುವ ಈ ಕಂಪ್ಯೂಟರ್ ಕೇವಲ ಕೆಲವೇ ವರ್ಷಗಳ ಹಿಂದೆ ತೀರಾ ‘ಅಪರಿಚಿತ’ ಅನ್ನಿಸುತ್ತಿದ್ದುದು ಸುಳ್ಳಲ್ಲ. ‘ಇಲಿ’ ಹಿಡಿಯಲು ಒದ್ದಾಡುತ್ತಿದ್ದುದು, ಕೀಬೋರ್ಡ್‍ನಲ್ಲಿ ಅಕ್ಷರಗಳಿಗಾಗಿ ಹುಡುಕುತ್ತಿದ್ದುದು, ಯಾವ ಕೀ ಒತ್ತಿದರೆ ಏನಾಗುತ್ತದೋ ಅಂತ ಭಯ ಪಡುತ್ತಿದ್ದುದು, ಅದು ‘ಢಣ್’ ಅಂತ ಎರರ್ ತೋರಿಸಿದ ಕೂಡಲೆ ಸಿಕ್ಕಾಪಟ್ಟೆ ಹೆದರಿ ಎಲ್ಲ ಕ್ಲೋಸ್ ಮಾಡುತ್ತಿದ್ದುದು... ಎಲ್ಲ ಈಗ ಎಣಿಸಿಕೊಂಡರೆ ತುಂಬ ನಗು ಬರುತ್ತದೆ, ಖುಶಿಯಾಗುತ್ತದೆ. ಜೊತೆಗೆ ಸಧ್ಯ ಆ ಹಂತದಿಂದ ಇಲ್ಲಿವರೆಗಾದರೂ ಬಂದಿದ್ದೇನಲ್ಲ ಅಂತ ಒಂಥರಾ ಹೆಮ್ಮೆಯೂ ಆಗುತ್ತದೆ! ಕಂಪ್ಯೂಟರ್ ಅಂತಲ್ಲ, ಯಾವುದನ್ನೇ ಆದರೂ ಹೊಸದಾಗಿ ಕಲಿಯುವಾಗ ಉಂಟಾಗುವ ಭಯ, ಸಂದೇಹಗಳು, ನಾವು ಮಾಡುವ ‘ಸಿಲ್ಲಿ’ ತಪ್ಪುಗಳನ್ನೆಲ್ಲ ಕಲಿತಾದ ಮೇಲೆ ನೆನೆಸಿಕೊಂಡರೆ ಆಗುವ ಖುಶಿಯೇ ಬೇರೆ. ಆ ತರ ನನ್ನ ಕೆಲವು ಅನುಭವಗಳನ್ನು ಇಲ್ಲಿ ಬರೆದಿದ್ದೇನೆ. ನೀವೂ ನಿಮ್ಮದನ್ನು ಹಂಚಿಕೊಂಡರೆ ಬಡಜೀವ ತುಂಬ ಸಂತೋಷ ಪಡುತ್ತದೆ!

* * *

ನನಗೆ ಈ-ಮೇಲ್ ನ ಪರಿಚಯ ಮಾಡಿಸಿದ್ದು ನನ್ನ ಗೆಳತಿ. ಆಗಿನ್ನೂ ನನಗೆ ಕಂಪ್ಯೂಟರೇ ಹೊಸತು. ಅವಳು ನನ್ನನ್ನ ಸೈಬರ್‍‍ಗೆ ಕರಕೊಂಡು ಹೋಗಿ ತಾನೇ ನನ್ನ ವಿವರಗಳನ್ನೆಲ್ಲ ಎಂಟ್ರಿ ಮಾಡಿ ಈ-ಮೇಲ್ ಐಡಿಯನ್ನೂ, ಪಾಸ್‍ವರ್ಡನ್ನೂ ಅವಳೇ ಯೋಚಿಸಿ ನನಗೊಂದು ಯಾಹೂ ಐಡಿ ಕ್ರಿಯೇಟ್ ಮಾಡಿಕೊಟ್ಟಳು. ಅದಾದ ನಂತರ ಒಂದೆರಡು ಬಾರಿ ಅವಳೊಂದಿಗೇ ಹೋಗಿ ನನ್ನ ಎಕೌಂಟನ್ನು ತುಂಬ ಅಭಿಮಾನದಿಂದ ಓಪನ್ ಮಾಡಿ ಖಾಲಿ ಇನ್‍ಬಾಕ್ಸನ್ನು ನೋಡಿ ಖುಶಿಪಟ್ಟು ಬರುತ್ತಿದ್ದೆ. ಆಮೇಲೆ ನಮ್ಮ ಮನೆಗೂ ಕಂಪ್ಯೂಟರ್ ಬಂತು, ಇಂಟರ್ನೆಟ್ ಕೂಡ ಬಂತು ಕಾಲಾನುಕ್ರಮದಲ್ಲಿ. ರಾತ್ರಿ ಹೊತ್ತು ನಮ್ಮಣ್ಣ ಇಂಟರ್ನೆಟ್ ಓಪನ್ ಮಾಡಿ ಅದೇನೇನೋ ಪಟಪಟನೆ ಸರ್ಚ್ ಮಾಡುತ್ತಿದ್ದರೆ ನನಗೆ ‘ಅಬ್ಬಾ!, ಇವನಿಗೆ ಏನೆಲ್ಲ ಗೊತ್ತು... ‘ಸರ್ವಜ್ಞ ’ನೇ ಸರಿ!’ ಅನಿಸುತ್ತಿತ್ತು. ಸುಮ್ಮನೆ ಅವನ ಹಿಂದೆ ಕೂತು ಅವ ಮಾಡುತ್ತಿದ್ದುದನ್ನೆಲ್ಲ ನೋಡುತ್ತಿದ್ದೆ. ಒಮ್ಮೆ ಹೀಗೇ ಅವನ ಕೆಲಸವಾದ ಮೇಲೆ ನನ್ನ ಯಾಹೂ ಅಕೌಂಟ್‍ ಓಪನ್ ಮಾಡುವ ಮನಸಾಯ್ತು. ಅಣ್ಣನ ಬಳಿ ಹೇಳಿದರೆ, ‘ಆಯ್ತು, ನೋಡಿ ಶಟ್‍ಡೌನ್ ಮಾಡು’ ಅಂತ ಹೇಳಿ ಹೋಗಿ ಮಲಗಿಯೇ ಬಿಟ್ಟ! ಸರಿ, ಇನ್ನೇನು ಮಾಡುವುದು ಅಂತ ನಾನು ನನ್ನ ಗೆಳತಿ ಹೇಳಿದ್ದನ್ನೆಲ್ಲ ನೆನಪಿಸಿಕೊಂಡು ಹೆದರಿ ಹೆದರಿ ಇನ್‍ಬಾಕ್ಸ್ ಓಪನ್ ಮಾಡಿದೆ. ನೋಡಿದರೆ ಒಂದು ಮೆಸ್ಸೇಜ್ ಇದೆ! ಅಬ್ಬಾ! ಆ ಖುಶಿಯನ್ನು ಪದಗಳಲ್ಲಿ ವರ್ಣಿಸುವುದೇನು ಸಾಧ್ಯವೇ?! ನನ್ನ ಗೆಳತಿಯೇ ಅದನ್ನ ಕಳಿಸಿದ್ದು ಅಂತ ಅವಳ ಹೆಸರನ್ನೂ ತೋರಿಸುತ್ತಿದೆ ಅದು. ಸರಿ, ಏನು ಬರೆದಿದ್ದಾಳೋ ನೋಡೋಣ ಅಂತ ಅವಳ ಹೆಸರ ಮೇಲೆ ಕ್ಲಿಕ್ ಮಾಡಿದರೆ ಏನೂ ಓಪನ್ ಆಗುತ್ತಿಲ್ಲ. ಸುಮಾರು ಹೊತ್ತು ಏನೇನೋ ಮಾಡಿ ತಿಣುಕಾಡಿದರೂ ಆಗುತ್ತಿಲ್ಲ. ಮೆಸ್ಸೇಜ್ ಓದುವುದು ಹೇಗೆ ಅಂತ ಅವಳು ಹೇಳಿಕೊಟ್ಟಿದ್ದರೂ ನನಗದು ಮರೆತುಹೋಗಿತ್ತು. ಈ ಅಣ್ಣ ಬೇರೆ ಮಲಗಿದ್ದಾನೆ. ಎಬ್ಬಿಸಿ ಕೇಳಿದರೆ ‘ಇಷ್ಟೂ ಗೊತ್ತಿಲ್ಲವಾ ನಿನಗೆ?’ ಅಂತ ಕಾಲೆಳೆಯುತ್ತಾನೆ ಖಂಡಿತ. ಬೇಡ, ನಾನೇ ಏನಾದರೂ ಮಾಡಬೇಕು ಅಂತ ತೀರ್ಮಾನಿಸಿ ಮತ್ತಷ್ಟು ಒದ್ದಾಡಿದೆ. ಊಹ್ಞೂ, ಜಗ್ಗುತ್ತಿಲ್ಲ. ಅಷ್ಟರಲ್ಲಿ ಅಲ್ಲೆಲ್ಲೋ ‘ಹೆಲ್ಪ್’ ಅಂತ ಕಾಣಿಸಿತು. ಅದನ್ನ ಕ್ಲಿಕ್ ಮಾಡುವುದೋ, ಬೇಡವೋ ಅಂತ ದ್ವಂದ್ವದಲ್ಲಿ ಬಿದ್ದು, ಕೊನೆಗೆ ಆಗಿದ್ದಾಗಲಿ ಅಂತ ಒತ್ತಿದೆ. ಅದರಲ್ಲೂ ಹುಡುಕಿ ಹುಡುಕಿ ಕೊನೆಗೆ ‘click on the subject to read the message' ಅಂತ ಓದಿಕೊಂಡು ಅದರಂತೆ ಮೆಸ್ಸೇಜ್ ಓದಿದಾಗ ನನಗೆ ಜಗತ್ತನ್ನೇ ಗೆದ್ದ ಸಂತೋಷ! ಮೆಸ್ಸೇಜ್ ಇದ್ದಿದ್ದಾದರೂ ಏನು? hi manga... ಅಂತೇನೋ ಅಷ್ಟೇ! ಆದರೆ ಹೊಸತನ್ನು ನಾನೇ ಹುಡುಕಿ ಕಲಿತ ಸಂತೋಷದಲ್ಲಿ ನನಗದೆಲ್ಲ ಅಷ್ಟು ಮುಖ್ಯವಾಗಿರಲಿಲ್ಲ!

* * *

ಇನ್ನು ಅಡಿಗೆಮನೆ ವಿಷಯಕ್ಕೆ ಬಂದರೆ, ಅಬ್ಬಬ್ಬಾ! ಅಲ್ಲಿ ಸಾವಿರ ಗೊಂದಲಗಳು, ಸಂದೇಹಗಳು. ಏನು ಹಾಕಬೇಕು? ಎಷ್ಟು ಹಾಕಬೇಕು ಎಂಬ ಪ್ರಶ್ನೆಗಳ ಜೊತೆಗೆ, ಯಾವಾಗ, ಹೇಗೆ ಹಾಕಬೇಕು ಅನ್ನುವುದೂ ಕೂಡ ದೊಡ್ಡ ಕನ್‍ಫ್ಯೂಷನ್ ಇಲ್ಲಿ. ನನಗೆ ಮೊದ ಮೊದಲು ಬರುತ್ತಿದ್ದ ಸಂದೇಹಗಳೆಂದರೆ ಯಾವುದನ್ನೆಲ್ಲ ತೊಳೆದು ಬೇಯಲಿಕ್ಕೆ ಹಾಕಬೇಕು (ಉದಾಹರಣೆಗೆ: ಬೇಳೆ, ಅಕ್ಕಿ), ಯಾವುದನ್ನು ಹಾಗೇ ಹಾಕಬಹುದು (ಉದಾಹರಣೆಗೆ: ರವೆ, ಹೆಸರುಕಾಳು ಇತ್ಯಾದಿ) ಅಂತ. ಇದರಲ್ಲಿ ಕೆಲವು ಎರಡೂ ಕೆಟಗರಿಗಳಿಗೆ ಸೇರುತ್ತವಾದ್ದರಿಂದ (ಉದಾಹರಣೆಗೆ: ಅವಲಕ್ಕಿ) ಪಾಪ, ನನ್ನಮ್ಮ ನನಗೆ ಅರ್ಥ ಮಾಡಿಸೋಕೆ ತುಂಬ ಕಷ್ಟ ಪಟ್ಟಿದ್ದಂತೂ ಸತ್ಯ!

ಅದೂ ಅಲ್ಲದೇ, ಅವಳು ಹೇಳಿಕೊಡುವಾಗೆಲ್ಲ ಬಾರದ ಸಂದೇಹಗಳು ಅವಳ ಅನುಪಸ್ಥಿತಿಯಲ್ಲಿ ಹಾಳಾದ್ದು ಧುತ್ತಂತ ಬಂದು ಬಿಡುತ್ತವೆ. ಒಗ್ಗರಣೆಗೆ ಎಣ್ಣೆ ಹಾಕುವುದೋ, ತುಪ್ಪವೋ.. ಹುರಿದು ಅರೆಯಬೇಕೋ, ಅರೆದು ಹುರಿಯಬೇಕೋ ಅಂತೆಲ್ಲ ಗೊಂದಲಕ್ಕೆ ಬಿದ್ದು, ನನ್ನದೇ ತೀರ್ಮಾನ ಮಾಡಿ ಏನೋ ಒಂದು ಮಾಡಿ ಕೊನೆಗದು ‘ಮಾಡಿದ್ದುಣ್ಣೋ ಮಹಾರಾಯ’ ಎಂಬಂತಾದದ್ದು ಅದೆಷ್ಟು ಸಲವೋ!

ಹೊಸ ರುಚಿ ಮಾಡುವಾಗಂತೂ ಕೇಳುವುದೇ ಬೇಡ, ಆ ರೆಸಿಪಿ ನನ್ನ ಕಣ್ಣ ಮುಂದೇ ಇರಬೇಕು, ಎಲ್ಲ ರೆಡಿ ಆಗುವವರೆಗೆ. ಅದರಲ್ಲಿದ್ದ ವಿವರಣೆಗಳನ್ನೆಲ್ಲ ಚಾಚೂ ತಪ್ಪದೆ ಪಾಲಿಸಿ ತಯಾರಿಸಿದ ಮೇಲೆ ಅದನ್ನ ನನ್ನ ‘ಬಲಿಪಶುಗಳು’ ಟೇಸ್ಟ್ ಮಾಡುವಾಗ ಒಳಗೊಳಗೇ ಹೆದರಿಕೆಯಾಗುತ್ತಿರುತ್ತದೆ. ಓರೆಗಣ್ಣಿನಿಂದ ತಿನ್ನುವವರ ಮುಖವನ್ನೇ ನೋಡುತ್ತ ಹೇಗಾಗಿರಬಹುದು ಅನ್ನುವ ಕಲ್ಪನೆ ಮಾಡುತ್ತೇನೆ. ಅವರೇನಾದರೂ ನನ್ನನ್ನು ನೋಡುತ್ತ ಪೆಚ್ಚುಪೆಚ್ಚಾಗಿ ನಕ್ಕರೆ ಎಲ್ಲೋ ಏನೋ ಎಡವಟ್ಟು ಖಂಡಿತ ಆಗಿದೆ ಅಂತ ನನಗೆ ಕನ್ಫರ್ಮ್ ಆಗುತ್ತೆ!

ನನ್ನ ಗೆಳತಿಯೊಬ್ಬಳು ಪಾಪ, ಮೊದಲ ಬಾರಿ ಅನ್ನ ಮಾಡುವಾಗ, ಅಕ್ಕಿಯನ್ನ ತೊಳೆಯದೇ, ನೀರೂ ಹಾಕದೇ ಬರಿಯ ಅಕ್ಕಿಯನ್ನು ಕುಕ್ಕರ್ ಒಳಗೆ ಇಟ್ಟು ಬೇಯಿಸಿದ್ದಳಂತೆ! ಅನ್ನ(?) ಹೇಗಾಗಿದ್ದಿರಬಹುದು ಅನ್ನುವುದು ನಿಮ್ಮ ಊಹೆಗೆ ಬಿಟ್ಟದ್ದು.

* * *

ಟೂ ವೀಲರೋ, ಕಾರೋ ಕಲಿಯುವಾಗ ಖಂಡಿತ ನೀವೂ ನನ್ನ ತರ ಗೊಂದಲಕ್ಕೆ ಬಿದ್ದಿರುತ್ತೀರಿ ಅನ್ನೋದು ನನ್ನ ನಂಬಿಕೆ. ಸ್ಟಾರ್ಟ್ ಯಾವುದು, ಬ್ರೇಕ್ ಯಾವುದು, ಎಕ್ಸ್‍ಲರೇಟರ್ ಯಾವುದು ಅಂತೆಲ್ಲ ಅರೆದು ಕುಡಿದು, ನಾವು ಮೊದಲ ಬಾರಿ ರಸ್ತೆಯಲ್ಲಿ ಗಾಡಿ ತೆಗೆದುಕೊಂಡು ಹೋಗುವಾಗ ಅದೇನಾಗುತ್ತದೋ ಈ ಗಾಡಿಗೆ?! ಎದುರಲ್ಲಿ ತಮ್ಮ ಪಾಡಿಗೆ ಬರುತ್ತಿರುವವರನ್ನೆಲ್ಲ ತನ್ನ ಆಜನ್ಮವೈರಿಗಳೆಂದು ತೀರ್ಮಾನಿಸಿ, ಅವರನ್ನ ಗುದ್ದಿಯೇ ಸಿದ್ಧ ಅಂತ ರಸ್ತೆಯ ಈ ಬದಿ ಅಷ್ಟು ಜಾಗವಿದ್ದರೂ ರಾಂಗ್ ಸೈಡ್‍ಗೇ ಓಡುತ್ತಿರುತ್ತದೆ. ಗಾಡಿ ಅಷ್ಟೆಲ್ಲ ಹುಚ್ಚಾಪಟ್ಟೆ ಆಡುತ್ತಿರುವಾಗ ಅದರ ಮೇಲೆ ಆಸೀನಳಾಗಿ ಜವಾಬ್ದಾರಿ ಹೊತ್ತ ನಾನು ಸುಮ್ಮನಿರಲು ಸಾಧ್ಯವೇ? ತಕ್ಷಣಕ್ಕೆ ಹೊಳೆಯುವ ಉಪಾಯ ಬ್ರೇಕ್ ಹಾಕಿ ಗಾಡಿ ನಿಲ್ಲಿಸುವುದೊಂದೇ. ಆದರೆ ಆ ಟೆನ್ಷನಲ್ಲಿ ‘ಬ್ರೇಕ್ ಹಾಕುವಾಗ ಎಕ್ಸ್‍ಲರೇಟರ್ ಕೊಡಬಾರದು’ ಅಂತ ಕಲಿಸುವಾಗ ಹೇಳಿಕೊಟ್ಟ ಮೂಲ ಪಾಠ ಗಾಳಿಗೆ ತೂರಿಹೋಗಿರುತ್ತದೆ. ಪರಿಣಾಮ.......

* * *

ಇನ್ನು ಕ್ರೀಡೆಯ ವಿಷಯಕ್ಕೆ ಬಂದರೆ, ಆಡುವುದಕ್ಕಿಂತ ನೋಡುವುದು ಜಾಸ್ತಿ ಅನ್ನೋ ಜಾತಿಯವಳು ನಾನು. ನೋಡುವಾಗಲೂ ಸಂದೇಹಗಳು ಬಂದೇ ಬರುತ್ತವೆ. ಟೆನಿಸ್, ಕ್ರಿಕೆಟ್, ಎಫ್ ೧ ಇತ್ಯಾದಿಗಳ ರೂಲ್ಸುಗಳನ್ನ ನನಗೆ ಅರ್ಥ ಮಾಡಿಸಲಿಕ್ಕೆ ಸಿಕ್ಕಾಪಟ್ಟೆ ಬುದ್ಧಿ ಖರ್ಚು ಮಾಡಿದ್ದಾರೆ ನನ್ನ ಅಣ್ಣಂದಿರು. ಇಷ್ಟಾಗಿಯೂ, ಕ್ರಿಕೆಟಲ್ಲಿ LBW ಔಟನ್ನು ಅದು ಹೇಗೆ ತೀರ್ಮಾನ ಮಾಡುತ್ತಾರೋ ನನಗಿನ್ನೂ ಅರ್ಥವಾಗಿಲ್ಲ!

ಕ್ರಿಕೆಟ್‍ನ ನೋಬಾಲ್, ವೈಡ್‍ಬಾಲ್ ಇತ್ಯಾದಿಗಳ ಬಗ್ಗೆ ತೀರ ಕನ್‍ಫ್ಯೂಸ್ ಆಗುತ್ತಿದ್ದ ಸಮಯದಲ್ಲಿ ನನ್ನ ಪ್ರಶ್ನೆಯೊಂದು ಹೀಗಿತ್ತು: ವೈಡ್‍ಬಾಲ್‍ಗೆ ಬೋಲ್ಡ್ ಔಟ್ ಆದರೆ, ಔಟೋ ನಾಟೌಟೋ?!!! ಮಿಲಿಯನ್ ಡಾಲರ್ ಪ್ರಶ್ನೆ! ಉತ್ತರಿಸಲು ನೀವೂ ಪ್ರಯತ್ನ ಪಡಬಹುದು.

* * *

ನನ್ನ ಅಜ್ಞಾನದಿಂದಾಗುವ ತಪ್ಪುಗಳಿಂದ ಇತರರಿಗೆ ತೊಂದರೆಯಾಗಿದೆಯೇ ಅಂತ ಕೇಳ್ತೀರಾದರೆ ಅಂಥವು ತುಂಬ ಇವೆ ಬಿಡಿ! ಕೆಲವು ಸ್ಯಾಂಪಲ್‍ಗಳನ್ನ ನೋಡಿ:

ಒಮ್ಮೆ ಉಡುಪಿಯ ಕಲ್ಸಂಕ ಬಸ್ ಸ್ಟ್ಯಾಂಡಿನ ಬಳಿ ನಡೆದುಕೊಂಡು ಬರುತ್ತಿದ್ದಾಗ ವ್ಯಾನಲ್ಲಿ ಬರುತ್ತಿದ್ದವರು ಯಾರೋ ಗಾಡಿ ನಿಲ್ಲಿಸಿ, ಮಲ್ಪೆ ಬೀಚಿಗೆ ಹೋಗುವ ದಾರಿ ಕೇಳಿದರು. ಜೀವಮಾನದಲ್ಲಿ ನನ್ನ ಬಳಿ ರೂಟ್ ಕೇಳಿದ ಮೊದಲಿಗರಿರಬೇಕು ಅವರು! ನನ್ನ ಬಳಿ ಕೇಳದೆ, ಬರುತ್ತಿದ್ದ ದಾರಿಯಲ್ಲೇ ಸೀದಾ ೨-೩ ಕಿ.ಮೀ. ಮುಂದೆ ಹೋಗಿದ್ದರೆ ಸೀದಾ ಮಲ್ಪೆ ಬೀಚಿಗೇ ಹೋಗಿ ಬೀಳುತ್ತಿದ್ದರು ಪಾಪ, ನನ್ನ ಬಳಿ ಕೇಳಿ ಸಿಕ್ಕಿ ಹಾಕಿಕೊಂಡರು. ನನಗೆ ಆ ರಾಜಮಾರ್ಗದ ಬಗ್ಗೆ ಆವಾಗ ದೇವರಾಣೆ ಗೊತ್ತಿರಲಿಲ್ಲ. ನಾನು ಸ್ಟೈಲಾಗಿ, ಭಾರೀ ಉಪಕಾರ ಮಾಡುತ್ತಿರುವವರ ಪೋಸಿನಲ್ಲಿ ಅವರಿಗೆ ‘ರೈಟ್ ಟರ್ನ್’ ಅಂದೆ. ಅದರ ಮೂಲಕವೂ ಹೋಗಬಹುದಿತ್ತಾದರೂ ಅದು ಸುತ್ತು ಬಳಸು ದಾರಿ. ಮೇಲಾಗಿ ರಸ್ತೆ ಚೆನ್ನಾಗಿಲ್ಲದ, ಕಿಷ್ಕಿಂಧೆಯಂತ ಇಕ್ಕಟ್ಟಿನ ದಾರಿ. ೬-೭ ಕಿ.ಮೀ. ಆದರೂ ಬೇಕು ಅಲ್ಲಿಂದ ಮಲ್ಪೆಗೆ! ಆ ರಸ್ತೆಯಲ್ಲಿ ಆ ದೊಡ್ಡ ವಾಹನವನ್ನು ಅದು ಹೇಗೆ ತೆಗೆದುಕೊಂಡು ಹೋದರೋ ಪಾಪ! ಒಟ್ಟಾರೆ, ಅವರಿಗೆ ಸತ್ಯದ ಅರಿವಾಗಿದ್ದರೆ ನನ್ನ ಎಷ್ಟು ಬೈದುಕೊಂಡಿರುತ್ತಾರೋ, ಇನ್ಯಾವತ್ತೂ ಹುಡುಗಿಯರ ಬಳಿ ರೂಟ್ ಕೇಳುವ ಸಾಹಸ ಮಾಡಲಾರರು ಅಂತ ಅನಿಸಿತು ಅಮೇಲೆ ನಂಗೆ.

ಪ್ರೈಮರಿ ಸ್ಕೂಲಲ್ಲಿ ಇದ್ದಾಗ ಗೆಳತಿಯೊಬ್ಬಳು ಇನ್ನೊಬ್ಬಳ ದೂರುಗಳೊಂದಿಷ್ಟನ್ನು ನನ್ನ ಬಳಿ ಊದಿದಳು. ‘ಚಾಡಿ ಹೇಳಬಾರದು’ ಅನ್ನೋ ಕನಿಷ್ಟ ಜ್ಞಾನವೂ ಆಗ ಇಲ್ಲದಿದ್ದ ನಾನು (ಈಗ ಖಂಡಿತ ಇದೆ. ನನ್ನ ನಂಬಿ, ಪ್ಲೀಸ್) ಆ ‘ಇನ್ನೊಬ್ಬಳ’ ಬಳಿ ಹೋಗಿ ಚಾಚೂ ತಪ್ಪದೆ ವರದಿ ಒಪ್ಪಿಸಿ, ಅವರಿಬ್ಬರ ನಡುವೆ ಕಲಹಕ್ಕೆ ಕಾರಣಳಾಗಿ ‘ನಾರದ’ ಅನ್ನಿಸಿಕೊಂಡೆ.

ಇನ್ನು, ಪಿಯುಸಿಯಲ್ಲಿದ್ದಾಗ, ನನ್ನ ಗೆಳತಿಯೊಬ್ಬಳಿಗೆ ‘ಮದ್ರಾಸ್ ಐ’ (ಕೆಂಗಣ್ಣು) ಪ್ರಾರಂಭವಾಯ್ತು. ಕೆಂಗಣ್ಣು ಇರುವವರ ಕಣ್ಣನ್ನು ನೋಡಿದ ಕೂಡಲೆ ಆ ಕ್ರಿಮಿ ಅಲ್ಲಿಂದ 'ತುಪುಕ್' ಅಂತ ಹಾರಿ ನಮ್ಮ ಕಣ್ಣಿಗೆ ಬರುತ್ತದೆ ಅಂತ ನಂಬಿಕೊಂಡಿದ್ದ ನಾವು ಅವಳನ್ನು ದೂರ ಇಟ್ಟೆವು. ಪಾಪ, ದಿನವೂ ನಮ್ಮ ಜತೆಗೇ ಓಡಾಡುವ ಹುಡುಗಿ. ಎಷ್ಟೆಂದು ಒಬ್ಬಳೇ ಇದ್ದಾಳು? ನಾವು avoid ಮಾಡಿದರೂ ತಿಳಿಯದಂತೆ ನಮ್ಮೆದುರೇ ಬರತೊಡಗಿದಳು. ಅಷ್ಟರಲ್ಲಿ ನಾನು ‘ನಮ್ಮೆದುರು ಬಂದು ಹಾಗೆ ನೋಡ್ಬೇಡ ಮಾರಾಯ್ತಿ’ ಅಂತೇನೋ ಸ್ವಲ್ಪ ಖಾರವಾಗಿಯೇ ಹೇಳಿಬಿಟ್ಟೆ. ಆಗೇನೂ ಹೇಳದ ಅವಳು, ೨-೩ ದಿನ ಬಿಟ್ಟು, ‘ನಾನು ನಿನ್ನ ತುಂಬ ಹಚ್ಚಿಕೊಂಡಿದ್ದೆ. ಅವರೆಲ್ಲ ಏನು ಹೇಳಿದರೂ ನಂಗೆ ಬೇಜಾರಾಗ್ಲಿಲ್ಲ. ನೀನೂ ಹೇಳಿದಿಯಲ್ಲ ನನ್ನ ನೋಡ್ಬೇಡ ಅಂತ. ತುಂಬ ಬೇಜಾರಾಯ್ತು’ ಅನ್ನುತ್ತ ಅತ್ತೇಬಿಟ್ಟಳು. ನನಗೆ ಯಾವ ರೀತಿ ಅವಳಿಗೆ ಸಾಂತ್ವನ ಹೇಳಬೇಕೋ ತಿಳಿಯಲಿಲ್ಲ. ‘ಸಾರಿ, ಹಾಗಲ್ಲ ನಾನು ಹೇಳಿದ್ದು’ ಅಂತೇನೋ ವ್ಯರ್ಥ ಸಮಜಾಯಿಷಿ ನೀಡತೊಡಗಿದೆ. ‘ಕೆಂಗಣ್ಣಿರುವವರ ಕಣ್ಣನ್ನು ನೋಡುವುದರಿಂದ ಅದು ಹರಡುವುದಿಲ್ಲ, ಬದಲಿಗೆ ಅವರ ಕಣ್ಣು ತಾಕಿದ ವಸ್ತುಗಳನ್ನು ನಾವು ನಮ್ಮ ಕಣ್ಣಿಗೆ ತಾಕಿಸಿದರೆ ಮಾತ್ರ ಬರುವ ಸಾಧ್ಯತೆ ಇದೆ’ ಎನ್ನುವ ಸತ್ಯ ನನಗೆ ಅರಿವಾಗುವ ವೇಳೆಗೆ ನಮ್ಮಿಬ್ಬರ ಜೀವನದ ಹಾದಿಯೇ ಬದಲಿಸಿ ನಾವು ಬೇರಾಗಿದ್ದರಿಂದ ಅವಳಲ್ಲಿ ಸರಿಯಾಗಿ ಕ್ಷಮೆ ಕೇಳಲೂ ಸಾಧ್ಯವಾಗಿಲ್ಲ ಅನ್ನುವ ಕೊರಗು ನನಗಿನ್ನೂ ಇದೆ. ಪ್ರಾಯಶಃ ನನ್ನ ಅಜ್ಞಾನದಿಂದಾದ ದೊಡ್ಡ ಪ್ರಮಾದಗಳಲ್ಲಿ ಇದೊಂದು ಅನಿಸುತ್ತದೆ ನನಗೆ.

* * *

ಅದೆಲ್ಲ ಏನೇ ಇರಲಿ. ತಪ್ಪು ಮಾಡದೆ, ಸಂದೇಹಗಳಿಗೆ ಉತ್ತರ ಹುಡುಕುವ ಪ್ರಯತ್ನ ಮಾಡದೆ ಮನುಷ್ಯ ಏನೂ ಹೊಸತನ್ನು ಕಲಿಯಲಾರ ಅನ್ನುವುದು ಮಾತ್ರ ಸಾರ್ವಕಾಲಿಕ ಸತ್ಯ.
 

Sunday, March 23, 2008

ಯಶಸ್ವೀ ಪುರುಷನ ವೃತ್ತಾಂತ

ಮೊನ್ನೆ ಸಂಜೆ ಬೆಂಗಳೂರಲ್ಲಿ ‘ಧೋ’ ಅಂತ ಜೋರು ಮಳೆ! ‘ಇದೇನಪ್ಪಾ, ಮಾರ್ಚಲ್ಲೇ ಮಳೆ? ಆಯ್ತು, ಇನ್ನು ಬೆಂಗಳೂರಲ್ಲಿ ಪ್ರವಾಹ ಶುರು!’ ಅಂತ ಅಂದುಕೊಳ್ಳುತ್ತಿರಬೇಕಾದರೆ BESCOMನವರೂ ಕೈಕೊಟ್ಟರು. ಬೆಂಗಳೂರಲ್ಲಿ ಕರೆಂಟ್ ಹೋದರೆ (ಅದೂ ಮಳೆ ಬರುತ್ತಿರಬೇಕಾದರೆ!) ಭಯಂಕರ ಬೋರಾಗುತ್ತದಾದ್ದರಿಂದ ಮಳೇಲಿ ಯಾರಿಗೂ ಕೇಳಿಸದು ಅಂತ ಧೈರ್ಯದಲ್ಲಿ ಸ್ವಲ್ಪ ಗಟ್ಟಿಯಾಗೇ ‘ಕರುಣಾಳು ಬಾ ಬೆಳಕೆ, ಮುಸುಕಿದೀ ಮಬ್ಬಿನಲಿ...’ ಅಂತ ಆರ್ತನಾದ ಮಾಡುತ್ತಿದ್ದೆ! ನನ್ನ ಅರಚಾಟ ಪಕ್ಕದ ಮನೆಯವರಿಗಾಗಲೀ, BESCOMನವರಿಗಾಗಲೀ ಕೇಳಿಸಿತೋ ಇಲ್ಲವೋ, ಆದರೆ ಭಗವಂತ ಮಾತ್ರ ಕೇಳಿಯೇ ಕೇಳಿದ. ದೀನಳ ಮೊರೆಯನ್ನು ಆಲಿಸಿದಂತವನಾಗಿ ಮಿಂಚಿನ ರೂಪದಲ್ಲಿ ಬೆಳಕನ್ನೂ, ಗುಡುಗಿನ ರೂಪದಲ್ಲಿ ನನ್ನ ಹಾಡಿಗೆ ಸಾಥಿಯನ್ನೂ ದಯಪಾಲಿಸುವಂತವನಾದ! ವಿಷಯ ಇದಲ್ಲ, ಆ ಹಾಡಿನ ಪ್ರಭಾವವೋ, ಅಥವಾ ಭಗವಂತನ ದಯೆಯೋ, ಅಂತೂ ಆ ಕತ್ತಲಲ್ಲಿ ನನಗೆ ಯಾವತ್ತೋ ಓದಿದ ಲೇಖನವೊಂದರಲ್ಲಿದ್ದ ‘ಯಶಸ್ವೀ ಪುರುಷನ ವೃತ್ತಾಂತ’ ಥಟ್ಟಂತ ಫ್ಲಾಷ್ ಆಯ್ತು, ಥೇಟ್ ಆಗಸದಲ್ಲಿ ಮಿಂಚಾದಂತೆ.

ಅವನ ಕಥೆ ಹೇಳುವ ಮೊದಲು, ನನ್ನ ಅದ್ಭುತ ಸ್ಮರಣಶಕ್ತಿಯ ಬಗ್ಗೆ ನಿಮಗೆ ಹೇಳಿಬಿಡುವುದು ವಾಸಿ. ನಾನು ಸಿಕ್ಕಾಪಟ್ಟೆ ಓದುತ್ತೇನಾದರೂ ಅದೆಲ್ಲ ಬಹುಷ: ನನ್ನ ಕ್ಯಾಶ್ ಮೆಮೊರಿ ಎಂಬ ಟೆಂಪರರಿ ಸ್ಮರಣ ಕೋಶದಲ್ಲಿ ಮಾತ್ರ ಸೇವ್ ಆಗುತ್ತದಾದ್ದರಿಂದ, ಸಿಕ್ಕಾಪಟ್ಟೆ ವೇಗದಲ್ಲಿ ಅದನ್ನ ಮರೆತೂಬಿಡುತ್ತೇನೆ. ಹಾಗಾಗಿ ಆ ಲೇಖನದ ಪೂರ್ತಿ ವಿವರಗಳನ್ನು ಕೊಡಲಾರೆ. ಆ ಲೇಖನ ಬರೆದವರಾರು, ಯಾವ ವಿಷಯವಾಗಿ ಬರೆಯುತ್ತಾ ಈ ವೃತ್ತಾಂತವನ್ನು ಉಲ್ಲೇಖಿಸಿದರು ಎಂಬಿತ್ಯಾದಿ ವಿವರಗಳು ನನಗೆ ಸ್ವಲ್ಪವೂ ನೆನಪಿಲ್ಲ. ಹೋಗಲಿ ಎಂದರೆ, ಆ ಯಶಸ್ವಿ ಪುರುಷನ ಕಥೆಯೂ ಪೂರ್ತಿಯಾಗಿ ನೆನಪಾಗುತ್ತಿಲ್ಲ. ಹಾಗಾಗಿ ಸಾರಾಂಶವನ್ನಷ್ಟೇ ಇಲ್ಲಿ ಕೊಡಬಲ್ಲೆ. ನೀವೂ ಓದಿರಬಹುದು, ಆ ಲೇಖನವನ್ನ. ಪ್ರಾಯಶಃ ೫-೬ (ತೀರ ಹೆಚ್ಚೆಂದರೆ ೭-೮) ವರ್ಷಗಳ ಹಿಂದೆ ಉದಯವಾಣಿಯಲ್ಲಿ ಪ್ರಕಟವಾದ ಲೇಖನ ಪ್ರಾಯಶಃ ಅದು. (ಅಗೈನ್, ನನ್ನ ನೆನಪಿನ ಬಗ್ಗೆ ಯಾವ ಭರವಸೆ ಕೊಡಲಾರೆ!). ನಿಮಗೆ ನೆನಪಿದ್ದಲ್ಲಿ, ಅಥವಾ ಬರೆದವರೇ ನೀವಾಗಿದ್ದಲ್ಲಿ ದಯವಿಟ್ಟು ನನ್ನ ಉದ್ಧಟತನವನ್ನು ಮನ್ನಿಸಿ ಆ ಲೇಖನದ ವಿವರಗಳನ್ನು ನನ್ನ ಜೊತೆಗೂ ಹಂಚಿಕೊಳ್ಳಿ. ಆ ವೃತ್ತಾಂತದ ಸಾರಾಂಶ ಹೀಗಿದೆ:

ಆತ ಚಿಕ್ಕ ವಯಸ್ಸಿನಲ್ಲೇ ಹಲವಾರು ಅಪ್ರತಿಮ ಸಾಧನೆಗಳನ್ನು ಮಾಡಿದ ಪ್ರತಿಭಾವಂತ (ಇಷ್ಟೆಲ್ಲ ಮರೆತಿರೋಳು ಇನ್ನು ಅವ್ನ ಹೆಸರನ್ನ ನೆನಪಿಟ್ಕೊಂಡಿರ್ತೀನಾ? ;-)). ಅವನ ಸಾಧನೆಗಳಿಗಾಗಿ ಅವನನ್ನು ಗೌರವಿಸುತ್ತಾ ಅವನ ಸಾಧನೆಗಳ ಹಿಂದಿನ ಸ್ಫೂರ್ತಿಯ ಸೆಲೆ ಯಾವುದು ಅಂತ ಕೇಳಿದಾಗ ಆತ ತನ್ನ ಅಜ್ಜಿಯ ಕುರಿತು ಹೇಳುತ್ತಾನೆ. ಬಾಲ್ಯದಲ್ಲಿ ಆತ ಇಳಿವಯಸ್ಸಿನ ತನ್ನ ಅಜ್ಜಿ ಅಲವತ್ತುಕೊಳ್ಳುವುದನ್ನು ಕೇಳುತ್ತಾನೆ. ‘ನನ್ನ ಹರೆಯದಲ್ಲಿ ನಾನು ಏನೇನೋ ಕನಸುಗಳನ್ನ ಕಂಡಿದ್ದೆ. ಹಲವಾರು ಆಸೆಗಳನ್ನ, ಗುರಿಗಳನ್ನ ಸಾಧಿಸಬೇಕೆಂದುಕೊಂಡಿದ್ದೆ. ಆದರೆ ಸಮಯದ ಕಾರಣದಿಂದಲೋ, ಆರ್ಥಿಕ ಕಾರಣಗಳಿಂದಲೋ, ಅಥವಾ ಉದಾಸೀನತೆಯಿಂದಲೋ ಎಲ್ಲವನ್ನೂ ಮುಂದೂಡುತ್ತಾ ಬಂದೆ. ಈಗ ನನ್ನಲ್ಲಿ ಸಮಯ, ಹಣ, ಆಸೆ ಎಲ್ಲವೂ ಇದೆ. ಆದರೆ ಅದನ್ನೆಲ್ಲ ಸಾಧಿಸುವ ಶಕ್ತಿಯಾಗಲೀ, ಉತ್ಸಾಹವಾಗಲೀ ಇಲ್ಲ. ಅವನ್ನು ಸಾಧಿಸಲಾಗಲಿಲ್ಲವೆಂಬ ಕೊರಗು ಮಾತ್ರ ಇದೆ’. ಅಜ್ಜಿಯ ಈ ದುಃಖವನ್ನು ಮನಗಂಡ ಹುಡುಗ ಆ ಕ್ಷಣದಲ್ಲೇ ‘ತನ್ನ ಜೀವನದಲ್ಲಿ ಹೀಗಾಗಲು ಬಿಡಲಾರೆ’ ಎಂದು ನಿರ್ಧಾರ ಮಾಡುತ್ತಾನೆ. ತನ್ನ ಆಸೆಗಳು, ಗುರಿಗಳು ಏನೇನಿವೆಯೋ ಅವನ್ನೆಲ್ಲ ಪಟ್ಟಿ ಮಾಡಲಾರಂಭಿಸುತ್ತಾನೆ. ಸಣ್ಣ ಪುಟ್ಟ ಕೆಲವು ಆಸೆಗಳಿಂದ ಆರಂಭಗೊಂಡ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ದಿನವೂ ಆ ಪಟ್ಟಿಯನ್ನು ಪರಿಶೀಲಿಸುವ ಅಭ್ಯಾಸ ಬೆಳೆಸಿಕೊಂಡದ್ದರಿಂದ ಹುಡುಗನಿಗೆ ಆ ಗುರಿಗಳನ್ನು ಸಾಧಿಸಲು ಅಗತ್ಯವಾದ ಯೋಜನೆಗಳನ್ನು ಪರಿಪೂರ್ಣವಾಗಿ ರೂಪಿಸಲು ಸಾಧ್ಯವಾಗುತ್ತದೆ. ಹುಡುಗ ಸಫಲನಾಗುತ್ತಾನೆ. ಹೇಳಲೇಬೇಕಾದ ವಿಷಯವೆಂದರೆ ಅವನ ಪಟ್ಟಿಯೇನೂ ತೀರ ಸರಳ ಆಸೆಗಳಿಂದ ಕೂಡಿದ್ದಾಗಿರಲಿಲ್ಲ. ಅತ್ಯಂತ ಕ್ಲಿಷ್ಟ, ಅಸಾಧ್ಯವೆನಿಸುವಂತ ಆಸೆಗಳೂ ಅದರಲ್ಲಿದ್ದುವು (ಉದಾಹರಣೆಗೆ, ಮೌಂಟ್ ಎವರೆಸ್ಟ್ ಏರುವುದು, ಪ್ರಪಂಚ ಪರ್ಯಟನ ಇತ್ಯಾದಿ). ಆದರೂ ತನ್ನ ಸಮಯ, ಸಂಪನ್ಮೂಲಗಳನ್ನು ಸದುಪಯೋಗ ಮಾಡಿದ್ದರಿಂದಾಗಿ ಅವನಿಗೆ ಚಿಕ್ಕ ವಯಸ್ಸಿನಲ್ಲೇ, ಕ್ಲಿಷ್ಟ ಗುರಿಗಳಲ್ಲೂ ಹಲವನ್ನು ಸಾಧಿಸಲು ಸಾಧ್ಯವಾಗುತ್ತದೆ.

ಈ ಲೇಖನವನ್ನೋದಿದಾಗ ಎಷ್ಟು ಪ್ರಭಾವಿತಳಾಗಿದ್ದೆನೆಂದರೆ, ಲೇಖನವನ್ನು ಓದಿ ಮುಗಿಸಿದವಳೇ ನನ್ನದೊಂದು ಆಸೆಗಳ ಪಟ್ಟಿಯನ್ನು ಬರೆಯಲು ಪ್ರಾರಂಭಿಸಿದ್ದೆ. ಅದನ್ನು ಕೆಲ ದಿವಸಗಳ ಕಾಲ ಪ್ರತಿನಿತ್ಯ ಓದುತ್ತ, ಪಟ್ಟಿಯನ್ನು ಬೆಳೆಸುತ್ತ ಹೋಗಿದ್ದೆ. ನಂಬಿದರೆ ನಂಬಿ, ಬಿಟ್ಟರೆ ಬಿಡಿ, ಈ ಅಭ್ಯಾಸ ನನಗೆ ಬಹಳ ಸಹಕಾರಿಯಾಗಿತ್ತು ಕೂಡ! ಆದರೆ ಆಮೇಲೆ ಅದೇನಾಯ್ತೋ, ಪ್ರಾಯಶಃ ಪರೀಕ್ಷಾ ಸಮಯದಲ್ಲಿ ಬುದ್ಧಿ ಡೈವರ್ಟ್(!) ಆಗುತ್ತದೆ ಅಂತಲೋ ಏನೋ ನಿಲ್ಲಿಸಿದ್ದು ಆಮೇಲೆ ಬಿಟ್ಟೇ ಹೋಯ್ತು. ಮತ್ತೆ ನೆನಪಾಗಿದ್ದು ಮೊನ್ನೆಯೇ! ಥ್ಯಾಂಕ್ಸ್ ಟು ಬೆಂಗಳೂರು ಮಳೆ! ನನ್ನಂತೆ ದಿನವಿಡೀ ಭಾರೀ ‘ಬಿಜಿ ’ ಎಂಬಂತೆ ಏನೂ ಮಾಡದೆ ಪೋಸು ಕೊಡುತ್ತಿರುವವರಿಗೆ ಇದೊಂದು ಅಭ್ಯಾಸ ಉಪಕಾರಿಯೇನೋ ಅನಿಸಿತು. ನನ್ನ ಇನ್ನೊಂದು ಪಟ್ಟಿಯನ್ನೂ ಬೆಳೆಸಬೇಕು. ಮತ್ತೆ ಊರಲ್ಲಿ ಅದೆಲ್ಲೋ ಅಟ್ಟದಲ್ಲಿ ಧೂಳು ತಿನ್ನುತ್ತಿರಬಹುದಾದ ನನ್ನ (ಹಳೆಯ) ಕನಸುಗಳನ್ನು ಹುಡುಕಿ ತೆಗೆದು ಜೀವ ತುಂಬಬೇಕು ಅಂದುಕೊಳ್ಳುವಷ್ಟರಲ್ಲಿ ಟ್ಯೂಬ್‍ಲೈಟ್ ಬೆಳಗಿತು! ಶುಭಸೂಚನೆ ಅನಿಸಿ ಖುಷಿಯಾಯ್ತು.

ಇವಿಷ್ಟು ನನ್ನ ಕತ್ತಲ ಯೋಚನೆ. ನನ್ನ ಯೋಜನೆ ಮರುದಿನವೇ ಕಾರ್ಯಗತವಾಗಿ, ನನ್ನ ಹೊಸ ಲಿಸ್ಟ್ ತಯಾರಾಗಿದ್ದರಿಂದಾಗಿ ಮತ್ತು ಆ ಲಿಸ್ಟಲ್ಲಿ ಈ ವಿಷಯದ ಬಗ್ಗೆ ಬ್ಲಾಗಲ್ಲಿ ಬರೆಯಬೇಕೆಂಬ ಆಸೆ ಮೊದಲಿದ್ದುದರಿಂದಾಗಿ ಈ ಬರಹ ನಿಮ್ಮ ಮುಂದಿದೆ. ನಿಮಗೆ ಇಷ್ಟವಾಗಿರದಿದ್ದಲ್ಲಿ, ಮಾರ್ಚಲ್ಲೇ ಅಚಾನಕ್ ಮುಖ ತೋರಿದ ಮಳೆಗೆ, ಮನೆ ಕತ್ತಲಾಗಿಸಿದ ಇಲಾಖೆಯವರಿಗೆ, ನನ್ನ ಪ್ರಾರ್ಥನೆಗೆ ಓಗೊಟ್ಟು ಬೆಂಗಳೂರಲ್ಲೂ ಅಪರೂಪಕ್ಕೆ ಆಗಮಿಸಿದ ಮಿಂಚು-ಗುಡುಗಿಗೆ(!) ಧಾರಾಳವಾಗಿ ಬೈದು ಬಿಡಿ. ನಾನಂತೂ ನಿರಪರಾಧಿ! :-)

ಬರೆಯುತ್ತಿರಬೇಕಾದರೆ ಮತ್ತೆ ಅನಿಸಿತು. ಅದು ಆ ಯಶಸ್ವಿ ಪುರುಷನ ಅಜ್ಜಿಯ ಬಗ್ಗೆ. ಆಕೆ ಅಷ್ಟು ಕೊರಗಬೇಕಾದ ಅಗತ್ಯವಿತ್ತೇ ಅಂತ ಅನಿಸುತ್ತಿದೆ. ವಯೋವೃದ್ಧರ ಮನಸ್ಥಿತಿಯ ಬಗ್ಗೆ ಕಲ್ಪಿಸಲೂ ನಮಗೆ ಅಸಾಧ್ಯ ಎಂಬುದು ವಾಸ್ತವವಾದರೂ, ನನ್ನ ದೊಡ್ಡಮ್ಮನ (ಅಪ್ಪನ ಅಮ್ಮ) ಬದುಕನ್ನು ನೋಡಿದ ನನಗೆ ಯಶಸ್ವೀ ಪುರುಷನ ಅಜ್ಜಿ ಅಷ್ಟು ದುಃಖಿಸಬೇಕಾದ್ದಿರಲಿಲ್ಲ ಅಂತ ತೀವ್ರವಾಗಿ ಅನಿಸಿತು. ೯೩ರ ಇಳಿಹರೆಯದ ನಮ್ಮ ದೊಡ್ಡಮ್ಮ ತುಂಬು ಜೀವನೋತ್ಸಾಹದ ಪ್ರತೀಕ. ಈಗಲೂ ತಮ್ಮಿಂದಾದಷ್ಟು ಕೆಲಸವನ್ನು ಮಾಡುತ್ತ, ಕನ್ನಡಕವಿಲ್ಲದೆ ಪುಸ್ತಕಗಳನ್ನು ಓದುತ್ತ, ಭಜನೆಗಳನ್ನು ಹಾಡುತ್ತ ತಮ್ಮ ದೈಹಿಕ ತೊಂದರೆಗಳನ್ನು ಮರೆಯುವ, ಸದಾ ಹಸನ್ಮುಖಿಯಾಗಿರುವ ದೊಡ್ಡಮ್ಮ ನಮಗೂ ಉತ್ಸಾಹ ತುಂಬುತ್ತಾರೆ. ಅವರ ನೆನಪಿನ ಭಂಡಾರದಿಂದ ಆಯ್ದ ಹಲವು ಸಾಂಪ್ರದಾಯಿಕ ಹಾಡುಗಳನ್ನು, ರಂಗೋಲಿಗಳನ್ನು ಸಂಗ್ರಹಿಸಿ ೨ ವರ್ಷಗಳ ಹಿಂದೆ ಪುಸ್ತಕ ರೂಪದಲ್ಲೂ ಪ್ರಕಟಿಸಲಾಯ್ತು. ಕೇವಲ ಬಾಯ್ದೆರೆಯಾಗಿ ಬಂದ ಆ ಹಾಡುಗಳನ್ನೆಲ್ಲ ಈಗಲೂ ನೆನಪಿಟ್ಟುಕೊಂಡಿರುವ ದೊಡ್ಡಮ್ಮನ ನೆನಪಿನ ಶಕ್ತಿ ನನ್ನದಕ್ಕಿಂತ ಎಷ್ಟೋ ವಾಸಿ ಅಂತ ಏನೂ ನಾಚಿಕೆಯಿಲ್ಲದೆ ಒಪ್ಪಿಕೊಂಡುಬಿಡುತ್ತೇನೆ! ಅವರ ಬಗ್ಗೆ ಇನ್ನಷ್ಟು ಮಾಹಿತಿಗಳನ್ನ ನೆಂಪು.ಗುರು ಮುಂದೆ ತಮ್ಮ ಬ್ಲಾಗಲ್ಲಿ ನೀಡಲಿದ್ದಾರೆ. ಅವರನ್ನ ನೋಡಿದಾಗೆಲ್ಲ ವಯಸ್ಸಿನ ಭೇದವಿಲ್ಲದೆ, ತಮ್ಮಿಂದಾದಷ್ಟು ಸಾಧನೆಗಳನ್ನು ಯಾರು ಬೇಕಾದರೂ ತಮ್ಮ ತಮ್ಮ ಮಿತಿಯಲ್ಲೇ ಮಾಡಬಹುದು ಅಂತ ನನಗನಿಸುತ್ತದೆ. ಈ ಬಗ್ಗೆ ನಿಮಗೇನು ಅನಿಸಿತು?

Sunday, March 9, 2008

ರಸ್ತೆ ದಾಟುವಾಗ...

ಹಾಗಂತ ನನಗೆ ರಸ್ತೆ ದಾಟುವಾಗ ಭಯವೇನೂ ಆಗುವುದಿಲ್ಲ. ಆದರೂ ರಸ್ತೆ ದಾಟುವಾಗೆಲ್ಲ ನನ್ನ ಕೈ ಪಕ್ಕದಲ್ಲಿರುವವರ ಕೈ ಹಿಡಿದುಕೊಳ್ಳಲು ಹವಣಿಸುತ್ತಿರುತ್ತದೆ! (ಬಹುಶಃ ಬಾಲ್ಯದಲ್ಲಿ ಅಪ್ಪ ರಸ್ತೆ ದಾಟಿಸುವಾಗ ಕಿರು ಬೆರಳನ್ನು ಹಿಡಿದುಕೊಳ್ಳುತ್ತಿದ್ದುದರ ಪ್ರಭಾವ ಇರಬೇಕು). ನನ್ನ ಆತ್ಮೀಯ ಬಂಧುಗಳೊಂದಿಗೆ ಹೋಗುವಾಗಂತೂ ಯಾವುದೇ ಮುಲಾಜಿಲ್ಲದೆ ಅವರ ಕೈ (ಕೊಕ್ಕೆ ಹಾಕಿ!) ಹಿಡಿದುಕೊಂಡಿರುತ್ತೇನೆ. ನನ್ನ ಈ (ಕೆಟ್ಟ) ಅಭ್ಯಾಸ ಗೊತ್ತಿರುವ ಗೆಳತಿಯರು ತಾವೇ ನನ್ನ ಕೈ ಎಳೆದು, ‘ರಸ್ತೆ ದಾಟಬೇಕಲ್ಲ, ಕೈ ಹಿಡಿದುಕೋ ಪುಟ್ಟಾ..’ ಅಂತ ತಮಾಷೆ ಮಾಡುತ್ತಾರೆ. ನನಗೇನೂ ಬೇಜಾರಿಲ್ಲ ಬಿಡಿ, ಸಧ್ಯ, ಕೈ ಹಿಡಿದುಕೊಂಡರಲ್ಲ ಅಂತ ಸಮಾಧಾನವಾಗುತ್ತೆ!

ಹಾಗಂತ ಒಬ್ಬಳೇ ರಸ್ತೆ ದಾಟುವಾಗ ಯಾರದೋ ಕೈ ಹಿಡಿಯ ಹೋಗುವುದಿಲ್ಲ ಬಿಡಿ. ಎಡ, ಬಲ, ಹಿಂದೆ, ಮುಂದೆ ಎಲ್ಲ ನೋಡಿ, (ಒನ್ ವೇ ಆಗಿದ್ದರೂ ಎರಡೂ ಬದಿ ನೋಡಿಕೊಂಡು) ಅವಸರದಲ್ಲಿರುವ ಸವಾರರಿಗೆಲ್ಲ ಹೋಗ ಬಿಟ್ಟು ಆಮೇಲೆ ಜಾಗ್ರತೆಯಾಗಿ ರಸ್ತೆ ದಾಟಿ ನಿಟ್ಟುಸಿರೆಳೆಯುತ್ತೇನೆ.

ಒಮ್ಮೆ ಹೀಗಾಯಿತು. ನಾನು ತಾತ್ಕಾಲಿಕ ನೆಲೆಯಲ್ಲಿ ಪ್ರೌಢ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಸಂದರ್ಭ. ಮಕ್ಕಳ ಪ್ರತಿಭಾ ಕಾರಂಜಿ ಸ್ಪರ್ಧೆಗಳು ನಡೆಯುತ್ತಿದ್ದುವು. ಅವರನ್ನು ಸ್ಪರ್ಧಾ ಸ್ಥಳಗಳಿಗೆ ಕರೆದುಕೊಂಡು ಹೋಗುವ ಜವಾಬ್ದಾರಿಯನ್ನು ತಾತ್ಕಾಲಿಕ ಶಿಕ್ಷಕಿಯರಾಗಿದ್ದ ನನಗೆ ಹಾಗೂ ನನ್ನ ಗೆಳತಿಗೆ ಒಪ್ಪಿಸಿದರು. ನಾವೂ ಖುಶಿಯಿಂದಲೇ ಒಪ್ಪಿಕೊಂಡೆವು. ನಮಗಿಂತ ಹೆಚ್ಚೆಂದರೆ ೫-೬ ವರ್ಷ ಚಿಕ್ಕವರಾಗಿದ್ದ ಮಕ್ಕಳೊಂದಿಗೆ ಚೆನ್ನಾಗಿ ಹರಟೆ ಹೊಡೆಯುತ್ತಾ ಪಿಕ್‍ನಿಕ್ ಹೋಗುವ ಅವಕಾಶ ಇದು ಅಂತ.

ಜಿಲ್ಲಾ ಮಟ್ಟದ ಸ್ಪರ್ಧೆಗಳು ಸ್ವಲ್ಪ ದೂರದ ಸ್ಥಳದಲ್ಲಿದ್ದುದರಿಂದ ಬಸ್ಸಲ್ಲಿ ಹೋಗಬೇಕಾಯಿತು. ಬಸ್ಸಿಳಿದದ್ದೇ ರಸ್ತೆ ದಾಟಬೇಕಿತ್ತು. ಯಥಾಪ್ರಕಾರ ನನ್ನ ಕೈ ಪಕ್ಕದಲ್ಲಿದ್ದ ಯೂನಿಫ಼ಾರ್ಮ್ ಹಾಕಿದ್ದ ಹುಡುಗಿಯ ಕೈಯನ್ನ ಹಿಡಿದುಕೊಂಡಿತು. ಯಾಕೋ ಆ ಹುಡುಗಿ ಕೈ ಜಗ್ಗುವುದಕ್ಕೆ ಶುರು ಮಾಡಿದಂತಾಯಿತು. ರಸ್ತೆಯಲ್ಲಿದ್ದ ವಾಹನಗಳನ್ನೇ ಗಮನಿಸುತ್ತ ರಸ್ತೆ ದಾಟಲು ಹವಣಿಸುತ್ತಿದ್ದ ನನಗೆ ಇದರಿಂದ ಸಿಟ್ಟು ಬಂತು. ‘ಅಲ್ಲ, ಈ ಮಕ್ಕಳಿಗೆ ಸ್ವಲ್ಪ ಸಲಿಗೆ ಕೊಟ್ಟರೆ ತಲೆ ಮೇಲೇ ಕೂತುಕೊಂಡು ಬಿಡ್ತಾರೆ. ನಾನಿವಳ ಟೀಚರ್, ಕೈ ಹಿಡಿದುಕೊಂಡರೆ ಕೈ ಜಗ್ಗುತ್ತಾಳಲ್ಲ, ಎಷ್ಟು ಧೈರ್ಯ?!’ ಅಂತ ಮನಸ್ಸಲ್ಲೇ ಬಯ್ಯುತ್ತ ಅವಳನ್ನ ದರದರನೆ ಎಳೆದುಕೊಂಡು ಈ ಕಡೆ ಬಂದು ಬಿಟ್ಟೆ.

ಬಂದ ಮೇಲೆ ನೋಡುವುದೇನು? ನಮ್ಮ ಮಕ್ಕಳೆಲ್ಲ ನಗು ತಾಳಲಾಗದೆ ಇನ್ನೂ ರಸ್ತೆಯ ಆ ಬದಿಯಲ್ಲೆ ನಿಂತು ನನ್ನ ಗೆಳತಿಯೊಂದಿಗೆ ನಗುತ್ತಿದ್ದಾರೆ! ಪಾಪ, ನಾನು ಕರೆದುಕೊಂಡು ಬಂದ (ಎಳೆದುಕೊಂಡು ಬಂದ), ನಮ್ಮ ಮಕ್ಕಳಂತದೇ ಯೂನಿಫ಼ಾರ್ಮ್ ಹಾಕಿದ್ದ ಯಾವುದೋ ಬೇರೆ ಶಾಲೆಯ ಹುಡುಗಿ ನಗು-ಭಯ ಎರಡೂ ಮಿಶ್ರಿತವಾದ ದೃಷ್ಟಿಯಿಂದ ನನ್ನನ್ನೇ ಪಿಳಿಪಿಳಿ ನೋಡುತ್ತಿದ್ದಾಳೆ! ಅತ್ತ ಅವಳ ಟೀಚರ್ ಕೂಡ ನಮ್ಮಿಬ್ಬರನ್ನ ನೋಡಿ ನಗುತ್ತಿದ್ದಾರೆ. ನನಗೋ ಅವಮಾನದ ಜೊತೆಗೇ, ಅವಳೂ ಆ ಸ್ಪರ್ಧೆಗೇ ಹೋಗುವವಳು ಅಂತ ಖಾತ್ರಿಯಾಗಿ, ಅವಳನ್ನ ಪುನಃ ರಸ್ತೆ ದಾಟಿಸಬೇಕಾಗಿಲ್ಲವಲ್ಲ ಎಂಬ ವಿಚಿತ್ರ ಸಮಾಧಾನ!!! ಸ್ಪರ್ಧೆ ಮುಗಿಸಿ ವಾಪಸ್ ಬರಬೇಕಾದರೆ, ಪುನಃ ರಸ್ತೆ ದಾಟಬೇಕಾದಾಗ ಮಕ್ಕಳು ‘ಟೀಚರ್ ಟೀಚರ್, ಕೈ ಹಿಡ್ಕೊಳ್ಳಿ. ರಸ್ತೆ ದಾಟಬೇಕಲ್ಲ?!’ ಅಂತ ಗೋಳು ಹೊಯ್ಕೊಳ್ಳುತ್ತಿದ್ದರೆ, ಅದೇನೋ ಅಂತಾರಲ್ಲ, ‘ಭೂಮಿ ಬಾಯಿ ಬಿಡಬಾರದೇ ಅಂತ ಅನಿಸೋದು’ ಅಂತ. ಹಾಗೇ ಅನಿಸಿತು ನೋಡಿ.

ಹ್ಮ್. ಇಷ್ಟಾದ ಮೇಲೆ ಆ ಕೆಟ್ಟ ಅಭ್ಯಾಸ ಬಿಟ್ಟು ಹೋಗಿರಬಹುದು ಅಂತ ಅಂದುಕೊಂಡಿರೇನೋ.. ಖಂಡಿತ ಇಲ್ಲ ಬಿಡಿ. ಬದಲಿಗೆ ಕೈ ಹಿಡಿಯುವ ಮೊದಲು ಅವರ ಮುಖ ನೋಡುವ ಅಭ್ಯಾಸ ಮಾಡಿಕೊಂಡಿದ್ದೇನೆ!

ಇಂತಿಪ್ಪ ನಾನು ಬೆಂಗಳೂರೆಂಬ ಬೆಂಗಳೂರಿಗೆ ವಲಸೆ ಬರುವಾಗ ಮುಖ್ಯವಾಗಿ ಹೆದರಿದ್ದು ಇದೇ ವಿಷಯಕ್ಕೆ. ಇಲ್ಲಿನ ವಾಹನ ದಟ್ಟಣೆಯ ರಸ್ತೆಯಲ್ಲಿ ಯಾರ ಕೈಯೂ ಹಿಡಿಯದೆ ರಸ್ತೆ ದಾಟುವುದು ಹೇಗಪ್ಪಾ ಎಂಬ ಚಿಂತೆ ನನ್ನನ್ನು ಬಲವಾಗಿಯೇ ಕಾಡುತ್ತಿತ್ತು. ಆಮೇಲೆ ಇಲ್ಲಿನ ಕ್ರಾಸ್ ಓವರ್‍‍ಗಳನ್ನ, ಸಿಗ್ನಲ್‍ಗಳನ್ನ ನೋಡುವಾಗ ಕೊಂಚ ಸಮಾಧಾನವಾಯಿತು. ನನ್ನ ಕಾರ್ಯಕ್ಷೇತ್ರಕ್ಕೆ ಹೋಗುವಾಗ ಕ್ರಾಸ್‍ಓವರ್‍‍ನಲ್ಲೇ ಆರಾಮಾಗಿ ಹೋಗುತ್ತಿದ್ದೆ. ಯಾರ ಹಂಗೂ ಇಲ್ಲದಂತೆ, ಕಾಲಡಿ ಹೋಗುತ್ತಿರುವ ಎಲ್ಲ ವಾಹನಗಳನ್ನು ತುಚ್ಛವಾಗಿ ಕಾಣುತ್ತ ‘ನಾನೇ.... ರಾಜಕುಮಾರಿ’ ಅಂತ ಹಾಡುತ್ತ ಕ್ರಾಸ್‍ಓವರ್‍‍ನಲ್ಲಿ ನಡೆಯಬೇಕಾದರೆ ತುಂಬ ಹೆಮ್ಮೆ ಅನಿಸುತ್ತಿತ್ತು!

ಆದರೆ ಗ್ರಹಚಾರ ನೋಡಿ! ಒಬ್ಬಳೇ ಬರುತ್ತಿದ್ದವಳು ಅಂದೊಮ್ಮೆ ಹೊಸದಾಗಿ ಪರಿಚಿತಳಾದ ಗುಜರಾತಿ ಗೆಳತಿಯೊಂದಿಗೆ ಬರಬೇಕಾಯಿತು. ನಡೆಯುತ್ತಾ ಕ್ರಾಸ್ ಓವರ್ ಹತ್ತಿರ ಬಂದಾಗ ಅದನ್ನು ಹತ್ತಹೊರಟೆ. ನನ್ನನ್ನ ವಾಪಸು ಎಳೆದ ಅವಳು ‘ಹ್ಮ್? ಎಲ್ಲಿಗೆ’ ಅಂತ ಪ್ರಶ್ನಾರ್ಥಕವಾಗಿ ನನ್ನನ್ನ ನೋಡಿದಳು. ‘ರಸ್ತೆ ದಾಟಬೇಕಲ್ಲ?’ ಅಂದೆ. ಅದೇನು ಅಂದೆನೋ ಎಂಬಂತೆ ನನ್ನನ್ನ ಆಪಾದಮಸ್ತಕ ನೋಡಿದ ಹುಡುಗಿ ಪಕಪಕನೆ ನಗಲಾರಂಭಿಸಿದಳು. ‘ಅಲ್ಲ, ಇದೇನು ಮಹಾ ಟ್ರಾಫಿಕ್ ಅಂತ ಹೀಗೆ ಹೇಳ್ತಿದ್ದಿಯಾ? ಈಗ ಪೀಕ್ ಅವರ್ ಕೂಡ ಅಲ್ಲ. ಪಾಪ, ಅಷ್ಟು ಹೆದರ್ತೀಯಾ? ಬಾ ನಾನು ನಿನ್ನ ರಸ್ತೆ ದಾಟಿಸ್ತೀನಿ’ ಅನ್ನುತ್ತಾ, ನಾನು ‘ಅಲ್ಲ, ಭಯ ಏನೂ ಅಲ್ಲ’ ಅಂತ ಗೊಣಗುತ್ತಿದ್ದರೂ ಕೇಳದಂತೆ, ನನ್ನ ಅಭ್ಯಾಸ ಗೊತ್ತೇನೋ ಎಂಬಂತೆ ಕೈ ಹಿಡಿದುಕೊಂಡು ಕರಕೊಂಡು ಹೋದಳು. ಈಗ ದಿನವೂ ಅವಳೊಂದಿಗೇ ಹೋಗಿ ಬರುತ್ತಿದ್ದೇನೆ. ಅಲ್ಲಿಗೆ, ನನ್ನ ಕೈ ಹಿಡಿಯುವ ಅಭ್ಯಾಸ ಇಲ್ಲಿಯೂ ನಿರ್ವಿಘ್ನವಾಗಿ ಮುಂದುವರಿಯುತ್ತಿದೆ...

ಆದರೂ ನಿಜವಾಗಲೂ ನೀವೀಗ ಅಂದುಕೊಂಡಿರುವಂತೆ ನನಗೆ ರಸ್ತೆ ದಾಟುವಾಗ ಭಯವೇನೂ ಆಗುವುದಿಲ್ಲ. ನಂಬಿ!!

ಬರೆಯುವ ಮುನ್ನ...

ಪ್ರಾಮಾಣಿಕವಾಗಿ ಒಪ್ಪಿಕೊಂಡು ಬಿಡುತ್ತೇನೆ, ನಾನು ಖಂಡಿತಾ ಬರಹಗಾರ್ತಿ ಅಲ್ಲ. ಆದರೆ ಬರೆಯಬೇಕೆಂಬ ಆಸೆ ಚಿಕ್ಕಂದಿನಿಂದಲೂ ನನಗೆ ಬಲವಾಗಿ ಇದೆ. ಬಾಲ್ಯದಿಂದಲೂ ಕನ್ನಡ ಪುಸ್ತಕಗಳನ್ನು ಓದುವ ಹವ್ಯಾಸವಿರುವ ನನಗೆ, ಅವನ್ನು ಓದುವಾಗೆಲ್ಲ ನಾನೂ ಮುಂದೆ ಲೇಖಕಿಯಾಗಬೇಕು ಅನಿಸುತ್ತಿತ್ತು. ಬರೆಯಲು ಪ್ರಯತ್ನ ಪಟ್ಟುದೂ ಇತ್ತು. ಆದರೆ ಬರೆದಾದ ಮೇಲೆ ಓದ ಹೋದರೆ ಅವು ನನಗೇ ರುಚಿಸದೆ, ಬೇರೆಯವರಿಗೆ ತೋರಿಸಲು ಕಿಂಚಿತ್ತೂ ಧೈರ್ಯ ಬಾರದೆ ನೇರ ಕಸದ ಬುಟ್ಟಿಯಲ್ಲಿ ಮೋಕ್ಷ ಪಡೆದವು. ಆಮೇಲೆ ಆ ರೀತಿ ಬರೆಯುವ ಪ್ರಯತ್ನ ಮಾಡಲೂ ಧೈರ್ಯ ಬರದಾಯಿತು. ಈಗ ಬ್ಲಾಗ್ ಜಗತ್ತಿನ ಬರಹಗಳನ್ನೆಲ್ಲ ನೋಡುವಾಗ ಮತ್ತೆ ಆ ತುಡಿತ ಹೆಚ್ಚುತ್ತಿದೆ. ಹಾಗಾಗಿ ಬ್ಲಾಗ್ ಆರಂಭಿಸಿ ಆರಂಭ ಶೂರತ್ವವನ್ನೇನೋ ತೋರಿಸಿದೆ. ಆದರೆ, ಮತ್ತೆ ಅಳುಕು ಕಾಡತೊಡಗಿತು. ನನ್ನ ಬರಹಗಳನ್ನು ಯಾರಾದರೂ ಮೆಚ್ಚಬಹುದೇ? ಮೆಚ್ಚುವುದಿರಲಿ, ಓದಿ ಎಂಥಾ ಬಾಲಿಶ ಬರಹಗಳು ಅಂತ ಬಯ್ದು ಬಿಟ್ಟರೆ? ಅಂತೆಲ್ಲ ಮನಸ್ಸು ಪ್ರಶ್ನೆಗಳನ್ನು ಹಾಕುವುದಕ್ಕೆ ಪ್ರಾರಂಭ ಮಾಡಿತು. ಈಗ ತುಂಬ ಕಷ್ಟ ಪಟ್ಟು ಅದನ್ನು ಕೊಂಚ ಸಮಾಧಾನಿಸಿ ಬರೆಯುವ ಪ್ರಯತ್ನಕ್ಕೆ ಕೈ ಹಾಕುತ್ತಿದ್ದೇನೆ. ಏನೇ ಆಗಲಿ, ಈ ಬರಹಗಳನ್ನು ಓದಿ, ವಿಮರ್ಶಿಸಿ, ಕಟು ಟೀಕೆ ಮಾಡಿಯಾದರೂ ನೀವು ನನ್ನನ್ನು ಪ್ರೋತ್ಸಾಹಿಸುತ್ತೀರಿ, ಮತ್ತದು ನನ್ನನ್ನು ನಾನು ತಿದ್ದಿಕೊಳ್ಳಲು ಸಹಕರಿಸುತ್ತದೆ ಎಂಬ ಆತ್ಮವಿಶ್ವಾಸ ನನ್ನದು.

ಪ್ರಾರಂಭಕ್ಕೆ ಲಘು ಹರಟೆಯೇ ಒಳ್ಳೆಯದು ಅಂತ ಅನಿಸಿ ಅದನ್ನೇ ನಿಮ್ಮ ಮುಂದಿಡುತ್ತಿದ್ದೇನೆ. ಖಂಡಿತಾ ಓದಿ ನೋಡಿ (ಬೈದಾದರೂ ಸರಿ!) ಕಮೆಂಟಿಸುತ್ತೀರಲ್ಲ??