Thursday, November 24, 2011

ಪುಟ್ಟ ಪುಟ್ಟ ಕತೆಗಳು

ತಿಂಗಳ ಹಿಂದಷ್ಟೇ ಅಜ್ಜನನ್ನ ಕಳೆದುಕೊಂಡ ಅಜ್ಜಿಯ ಬೋಳುಹಣೆ ನೋಡಲಾಗದೆ ಪುಟ್ಟ ಕಪ್ಪು ಸ್ಟಿಕ್ಕರ್ ಅವರ ಹಣೆಗಿಟ್ಟ ಮೊಮ್ಮಗಳು 'ಆಹಾ, ಈಗ ಚೆಂದ ಕಾಣ್ತಾರೆ ಅಜ್ಜಿ' ಎಂದು ಸಂಭ್ರಮಿಸುತ್ತಿರಬೇಕಾದರೆ ಅಜ್ಜಿಯ ಕಂಗಳಿಂದ ಜಾರುತ್ತಿದ್ದ ಹನಿಯೊಂದಕ್ಕೆ "ತಾನು ಹುಟ್ಟಿದ್ದೇಕೆ? ಪುಟ್ಟಿಯ ಖುಷಿ ಕಂಡ ಆನಂದಕ್ಕೋ ಅಥವಾ ಇನ್ನೆಂದೂ ಹಣೆ ತುಂಬ ದೊಡ್ಡ ಕುಂಕುಮ ಇಡಲಾಗದ ಅಜ್ಜಿಯ ದುಃಖಕ್ಕೋ?" ಅನ್ನೋ ಗೊಂದಲ.

**********

"ನನ್ಮಗ್ಳು ಹುಟ್ಟಿದ್ವರ್ಷ ಜೀವನ ನಡೆಸೋಕೆ ಕೈಲಿ ಮಚ್ಚು ಹಿಡೀಬೇಕಾಯ್ತು. ಈಗವಳಿಗೆ ಹತ್ನೇ ಕ್ಲಾಸು ಓದಿಸ್ತಿದ್ದೀನಿ" - ರಸ್ತೆಬದಿಯಲ್ಲಿ ಎಳನೀರು ಮಾರುವ ಹೆಂಗಸು ಹೆಮ್ಮೆಯಿಂದ ಹೇಳಿದ್ದು "ಕೈ ಜೋಪಾನಾಮ್ಮ" ಅಂತ ಕಾಳಜಿ ತೋರಿದ ತಾತಪ್ಪನಿಗೆ.

**********

ಚಲಿಸುತ್ತಿದ್ದ ಕಾರಿನ ಬಾಗಿಲು ಅಚಾನಕ್ ಆಗಿ ಓಪನ್ ಆಗಿ ಸ್ಕೂಟರಲ್ಲಿ ಬರುತ್ತಿದ್ದ ಮಧ್ಯವಯಸ್ಕ ಗಂಡ ಹೆಂಡತಿಗೆ ಡಿಕ್ಕಿ ಹೊಡೆದ ಪರಿಣಾಮ ಹೆಂಡತಿ ಕೆಳಬಿದ್ದರು. ಮಂಡಿಗೆ ಪೆಟ್ಟಾಗಿ ಏಳಲಾಗದೆ ಬಿದ್ದಿದ್ದ ಹೆಂಡತಿಯನ್ನು ಎಬ್ಬಿಸ ಹೋದ ಗಂಡನನ್ನು ಬಿಡದೆ ತಡೆಯುತ್ತಾ ಆಕೆ ಕಾರಿನಲ್ಲಿದ್ದವರ ಬಳಿ ಕೂಗಿ ಅಂದಳು "ನನ್ನ ಗಂಡನ್ನ ನನ್ನ ಎತ್ತೋಕೆ ಬಿಡ್ಬೇಡಿ ಸಾರ್! ನೀವೇ ಯಾರಾದ್ರು ಬನ್ನಿ". ಕಾರಿನಲ್ಲಿದ್ದವರೆಲ್ಲ 'ಇದೇನಪ್ಪ ವರಸೆ! ಗಂಡ ಹೆಂಡತಿ ಜಗಳ ಮಾಡಿಕೊಂಡು ಬಂದಿದಾರೇನೋ' ಅಂದುಕೊಳ್ಳುತ್ತಿರುವಾಗಲೇ ಆಕೆ ಮತ್ತೆ ಅಂದಳು "ನಿಮ್ಮ ದಮ್ಮಯ್ಯ.. ನನ್ನ ಗಂಡನ್ನ ನನ್ನ ಎತ್ತೋಕೆ ಬಿಡ್ಬೇಡಿ ಸಾರ್.. ಆತ ಹಾರ್ಟ್ ಪೇಷೆಂಟ್!". ಈ ಮಾತು ಕೇಳಿದ್ದೇ ದಡಬಡನೆ ಕಾರಿಂದ ಇಳಿದು ಆ ಮಹಿಳೆಯನ್ನು ಎತ್ತ ಬಂದ ಸಿದ್ದುಗೆ ತನ್ನ ಹೊಸ ಸಂಗಾತಿ ನೆನಪಾಗಿ ಕಿವಿಯಲ್ಲಿ ಒಂದೇ ಹಾಡು ರಿಂಗಣಿಸುತ್ತಿತ್ತು ... 'ಆ..ದರ್ರು ಪ್ರೇಮಕ್ಕೆ ಮೈಲೇಜು ಕಮ್ಮಿ.. ಸೆಲ್.....ಫೋನು ಬಂದ್ಮೇಲೆ ಹಿಂಗಾಯ್ತು ಸ್ವಾಮಿ....'

**********

"ಅಯೋಧ್ಯೆ ತೀರ್ಪು ಹಿನ್ನೆಲೆಯಲ್ಲಿ ನಿಷೇಧಾಜ್ಞೆ, ಶಾಲಾ ಕಾಲೇಜುಗಳಿಗೆ ರಜೆ, ಹಲವಾರು ಕಾರ್ಪೋರೇಟ್ ಕಂಪನಿಗಳಿಗೂ ಮುನ್ನೆಚ್ಚರಿಕಾ ಕ್ರಮವಾಗಿ ರಜೆ..." ಎಲ್ಲ ಟಿ.ವಿ. ಚಾನೆಲ್^ಗಳಲ್ಲೂ ಇದೇ ವರದಿಗಳನ್ನ ಕೇಳಿ ಗೊಣಗಿಕೊಂಡೆ, "ಎಲ್ಲ ಕಡೆ ರಜೆ ಕೊಟ್ರೂ ನಮ್ಮ ಕಂಪೆನಿಗೆ ಕೊಡೋದೇ ಇಲ್ಲ. ಏನಾದ್ರು ಗಲಾಟೆ ಆದ್ರೆ ಕೊಡ್ಬೋದೋ ಏನೋ!!"
ರಾಕ್ಷಸ ಬೇರೆಲ್ಲೋ, ಗಲಾಟೆಗಳಾಗುವಲ್ಲಿ ಮಾತ್ರ ಇರುವುದಲ್ಲ. ಸ್ವಾರ್ಥಕ್ಕೋಸ್ಕರ ಕೆಟ್ಟದ್ದನ್ನೇ ಅಪೇಕ್ಷಿಸುವ ನನ್ನಂಥವರ ಮನದೊಳಗೂ ಇದ್ದಾನಲ್ಲ.

**********

"ಚಟ್ನಿ ಖಾರ ಇದೆಯಾ ಪುಟ್ಟೀ?, ಸಕ್ಕರೆ ಹಾಕ್ಕೊಂಡು ತಿಂತೀಯಾ ಇಡ್ಲಿಗೆ? ತರಿಸಲಾ?" ಅಪ್ಪ ಕೇಳಿದಾಗ, "ಅಯ್ಯೋ ಸ್ವಲ್ಪ ಸುಮ್ನಿರೀಪ್ಪ. ಏನೂ ಬೇಡ" ಅಂತ ರೇಗಿದ ಮಗಳು ಪಕ್ಕದಲ್ಲೇ ತನ್ನ ಪಾಡಿಗೆ ತಾನು ಇಡ್ಲಿ-ಚಟ್ನಿ ಮೆಲ್ಲುತ್ತಿದ್ದ ಗಂಡನನ್ನ ತಿವಿಯುತ್ತ, "ನಿಮಗೆ ನನ್ನ ಮೇಲೆ ಸ್ವಲ್ಪವೂ ಪ್ರೀತಿ ಇಲ್ಲ. ಮದ್ವೆ ಆಗಿ ಒಂದು ವರ್ಷ ಆದ್ರೂ, ನಮ್ಮಪ್ಪಂಗೆ ಗೊತ್ತಾಗೋ ಸೂಕ್ಷ್ಮ ನಿಮಗೆ ಗೊತ್ತಾಗಲ್ಲ?!" ಅಂದಳು. ಅವಳ ಬಡಪಾಯಿ ಗಂಡ, "ಅಬ್ಬಾ! ಜನ ಎಷ್ಟೊಂದು ಬಗೆಯಲ್ಲಿ ಪ್ರೀತಿ ತೋರಿಸುತ್ತಾರಪ್ಪಾ! ನಾನಿನ್ನೂ ಪ್ರೀತಿ ಮಾಡೋದರಲ್ಲಿ LKG-ಲಿ ಇದ್ದೀನೇನೋ" ಅಂತ ಮೆತ್ತಗೆ ಗೊಣಗಿಕೊಂಡ.

**********

ಸಣ್ಣ ಹಳ್ಳಿಯ ಪುಟ್ಟ ಅಂಗಡಿಯೊಂದರ ಮುಂದೆ ತನ್ನ ದೊಡ್ಡ ಕಾರು ನಿಲ್ಲಿಸಿದ ಸಿದ್ದು ಕಾರಿನೊಳಗಿದ್ದವರಿಗೆಲ್ಲ ಎಳನೀರು ಆರ್ಡರ್ ಮಾಡಿದ. ಅಂಗಡಿಯಾತ ತನ್ನ ಹೆಂಡತಿಯ ಬಳಿ ಆ ಮೊದಲೇ ಬಂದಿದ್ದ ಗಿರಾಕಿಗೆ ಸಾಮಾನು ಕೊಡಲು ಹೇಳಿ ಹೊರಬಂದು ಎಳನೀರು ಕೆತ್ತಿ ಕೊಡುವುದರಲ್ಲಿ ಮಗ್ನನಾದ. ಎಲ್ಲ ಮುಗಿಸಿ ಮತ್ತೆ ಅಂಗಡಿಯೊಳಕ್ಕೆ ಹೋದಾಗ ಹೆಂಡತಿ ದುಡ್ಡು ಕೊಟ್ಟು ಹೋದ ಗಿರಾಕಿಯ ಲೆಕ್ಕ ಒಪ್ಪಿಸಿದಳು. "ಅಯ್ಯೋ 10 kg ಅಕ್ಕಿಯ ಹಣ ತಗೊಂಡೇ ಇಲ್ಲವಲ್ಲ!?" ಎಂದು ಸಿಟ್ಟಿಂದ ಬೈದ ಗಂಡ ಆ ಗಿರಾಕಿ ಸಿಗುತ್ತಾನೇನೋ ನೋಡಲು ಓಡೋಡಿ ಹೊರ ಬಂದ. ಆ ಗಡಿಬಿಡಿಯಲ್ಲಿ ಅಲ್ಲೇ ಕಾಲ್ಬುಡದಲ್ಲಿ ಆಡುತ್ತಿದ್ದ ತನ್ನ ಸಣ್ಣ ಮಗನ ಪುಸ್ತಕ ಬೀಳಿಸಿದ್ದನ್ನು ಅವ ಗಮನಿಸಲಿಲ್ಲ. ಸೋತ ಮುಖ ಮಾಡಿಕೊಂಡು ವಾಪಸು ಬಂದವನ ಬಳಿ ಆ ಮಗು "ನನ್ನ ಪುಸ್ತ್ಕ ಬೀಳಿಸಿದ್ಯಾಕೆ ನೀನು?" ಅಂತ ಅಳುಮುಖ ಮಾಡಿತು. ಅದನ್ನು ಲೆಕ್ಕಿಸದೆ "ಅವನ್ನ ಕಳಿಸೋಕೆ ಮುಂಚೆ ನನ್ನತ್ರ ಕೇಳೋಕೆ ಆಗ್ಲಿಲ್ವಾ ನಿಂಗೆ?" ಅಂತ ಹೆಂಡತಿಗೆ ಗದರುತ್ತ ಒಳ ಬಂದವನ ಮುಂದೆ ಸಿದ್ದು 1000 ರೂಪಾಯಿಯ ನೋಟು ಹಿಡಿದ. ಮಗು ಮತ್ತೂ ಬಿಡದೆ ಅವನ ಹಿಂದೆಯೇ ಬಂದು "ನನ್ನ ಪುಸ್ತ್ಕ ಯಾಕೆ ಬೀಳಿಸಿದಿ ನೀನು ಹೇಳು.. ಹೇಳು... ಹೇಳೂ... " ಅನ್ನುತ್ತಾ ಅಪ್ಪನಿಗೆ ತನ್ನ ಪುಟ್ಟ ಕೈಗಳಿಂದ ಹೊಡೆಯಲು ಮುಂದಾಯ್ತು. ಈ ಎಲ್ಲ ನಾಟಕ ನೋಡುತ್ತಿದ್ದ ಸಿದ್ದು, ಸುಮಾರು 250 ರೂಪಾಯಿ ಪಂಗನಾಮ ಹಾಕಿ ಹೋದ ಗಿರಾಕಿಯ ಮೇಲಿನ ಸಿಟ್ಟು, ಹೆಂಡತಿಯ ಮೇಲಿನ ಸಿಟ್ಟು, ಅಂಗಡಿಗೆ ಬಂದ ಬೇರೆ ಗಿರಾಕಿಗಳ ಪುಕ್ಕಟೆ ಸಜೆಷನ್, ಇದರ ಜೊತೆಗೆ ತಾನು ಕೊಟ್ಟ ದೊಡ್ಡ ನೋಟಿಗೆ ಚಿಲ್ಲರೆ ಹುಡುಕಬೇಕಾದ ಟೆನ್ಷನ್ ಎಲ್ಲ ಸೇರಿಕೊಂಡು ಅಂಗಡಿಯಾತ ರಗಳೆ ಮಾಡುತ್ತಿರುವ ಮಗನಿಗೆ ಧರ್ಮದೇಟು ನೀಡೋದು ಗ್ಯಾರಂಟಿ ಅಂದುಕೊಂಡು ಮೀಸೆಯಡಿ ಮುಸಿ ನಗೋಕೆ ಶುರು ಮಾಡಿದ. ಆದರೆ ಅವನ ನಿರೀಕ್ಷೆ ಹುಸಿಯಾಗುವಂತೆ ಅಂಗಡಿಯಾತ ಪರಮ ತಾಳ್ಮೆಯಿಂದ "ನಾನು ನೋಡ್ಲಿಲ್ಲ ಪುಟ್ಟಾ ಸಾರಿ" ಅಂದಿದ್ದು ಕೇಳಿ ಸಿದ್ದುವಿನ ಕಣ್ಣು ಅರಿವಿಲ್ಲದೆ ಹನಿಗೂಡಿತು.

**********

Thursday, September 9, 2010

ವಿಚಿತ್ರ ಬಂಧಗಳು

ಆವತ್ತು ಥರ್ಡ್ ಪಿರಿಯಡ್ಗೆ ಒಂದು ಟೆಸ್ಟ್ ಇತ್ತು. ಪುಸ್ತಕ ಬಿಡಿಸಿಯೂ ನೋಡಿರಲಿಲ್ಲ. ಅದರ ಇಂಟರ್ನಲ್ ಮಾರ್ಕ್ಸ್ ಬೇರೆ ಚೆನ್ನಾಗಿರಲಿಲ್ಲ. ಹಾಗಾಗಿ ಬರೆಯಲೇಬೇಕಿತ್ತು ಟೆಸ್ಟ್. ಸರಿ, ಇನ್ನೇನು ಮಾಡೋದು, ಆರಾಮಾಗಿ ಫರ್ಸ್ಟ್ ಎರಡು ಅವರ್ ಬಂಕ್ ಹೊಡೆದು ಓದಿಕೊಳ್ಳುವ ಪ್ಲಾನ್ ಹಾಕಿ ಲೈಬ್ರರಿಗೆ ಹೋದೆ. ಹಾಗೂ ಹೀಗೂ ಪುಸ್ತಕ ಬಿಡಿಸಿ ಓದಿಕೊಳ್ಳೋಕೆ ಶುರು ಮಾಡಿದರೆ ಏನೇನೂ ಅರ್ಥ ಆಗದೆ ಎಲ್ಲಾ ಬೌನ್ಸ್ ಆಗೋಕೆ ಪ್ರಾರಂಭ ಆಯ್ತು. ಅಷ್ಟರಲ್ಲೇ ಕ್ಲಾಸಲ್ಲಿ ಕೂತಿದ್ದ ಗೆಳತಿಯಿಂದ ಮೆಸೇಜ್ ಬೇರೆ ಬಂತು, ಕ್ಲಾಸ್ ತೆಗೆದುಕೊಳ್ಳುತ್ತಿದ್ದ ಮೇಡಂ ಬಂಕ್ ಮಾಡಿದವರಿಗೆಲ್ಲ ಹಿಗ್ಗಾಮುಗ್ಗಾ ಉಗಿಯುತ್ತಿದ್ದಾರೆ. ನೀನು ಈಗ ಕ್ಲಾಸಿಗೆ ಬರೋದಾದ್ರೆ ಬಂದುಬಿಡು ಅಂತ. ಸಿಕ್ಕಾಪಟ್ಟೆ ಬೇಜಾರಾಯ್ತು ಯಾಕೋ. ಬೈಸಿಕೊಳ್ಳುವುದು ಹೊಸತೇನಲ್ಲವಾದರೂ, ಒಂದು ಕಡೆ ಓದಿದ್ದೂ ತಲೆಗೆ ಹೋಗ್ತಾ ಇಲ್ಲ, ಇನ್ನೊಂದು ಕಡೆ ಸುಮ್ಮಸುಮ್ಮನೆ ಬೈಸಿಕೊಳ್ಳುತ್ತಿದ್ದೀನಲ್ಲ ಅಂತ ದಯನೀಯ ಸೋಲಿನ ಭಾವದಿಂದ ತಲೆಮೇಲೆ ಕೈ ಹೊತ್ತು ಕೂತಿದ್ದೆ ಪೇಲವ ಮುಖ ಮಾಡಿಕೊಂಡು. ಲೈಬ್ರರೀಲಿ ಕಸ ಗುಡಿಸುತ್ತಿದ್ದ ಹೆಂಗಸು ನನ್ನ ಹತ್ತಿರವೇ ಗುಡಿಸುತ್ತಿದ್ದರು. ನನ್ನ ಮುಖ ಕಂಡು ಏನನಿಸಿತೋ, ‘ಯಾಕೆ? ಕಷ್ಟವಾಗ್ತಿದೆಯಾ ಮಗಾ? ನೀವೆಲ್ಲ ಚೆನ್ನಾಗಿ ಓದಬೇಕು..’ ಅಂತ ಸಾಂತ್ವನದ ಮಾತಾಡೋಕೆ ಶುರು ಮಾಡಿದರು. ನಾನೇನೂ ಹೇಳದೆ ಸುಮ್ಮನೆ ಪಿಳಿಪಿಳಿ ಅವರ ಮುಖ ನೋಡಿದೆ. ‘ನನ್ನ ಮಗನೂ ಹೀಗೆ. ಓದ್ತಾ ಇರ್ಲಿಲ್ಲ. ನಾನು ಸ್ವಾಮಿಗಳ ಹತ್ತಿರ ಹೋಗಿ ಬೇಡಿಕೊಂಡೆ. ಅವರು ನಾಲ್ಕೇ ಶಬ್ದದ ಒಂದು ಮಂತ್ರ ಹೇಳಿಕೊಟ್ರು. ಇದನ್ನ ಯಾವಾಗ್ಲೂ ಹೇಳ್ತಿದ್ರೆ ಒಳ್ಳೇದಾಗ್ತದೆ ಅಂದ್ರು. ನನ್ನ ಮಗ ಈ ಮಂತ್ರವನ್ನ ದಿನಾ ಹೇಳ್ತಾನೆ. ಈಗ ಚೆಂದ ಓದ್ತಾನೆ. ನಿಂಗೂ ಆ ಮಂತ್ರ ಹೇಳಿಕೊಡ್ತೇನೆ ಮಗಾ. ದೇವ್ರು ಕೈ ಬಿಡುದಿಲ್ಲ’ ಎಂದೆಲ್ಲ ಬಡಬಡಿಸಿದರು. ಇದರಲ್ಲೆಲ್ಲ ನನಗೆ ಅಂಥಾ ನಂಬಿಕೆ ಇಲ್ಲವಾದರೂ ಅವರ ಅಂತಃಕರಣಕ್ಕೋ, ಕಾಳಜಿಗೋ ಪರವಶಳಾದಂತೆ ಅವರು ಹೇಳಿದ ಹಾಗೇ ಅಲ್ಲೆಲ್ಲೋ ಬಿದ್ದಿದ್ದ ಪೇಪರ್ ಚೂರನ್ನೆತ್ತಿಕೊಂಡು ಹೇಳಿದ್ದೆಲ್ಲ ಬರೆದುಕೊಂಡೆ. ಪುಟ್ಟ ಮಗುವಿಗೆ ಮಾಡುವಂತೆ ಅವರು ನನ್ನ ಕೈ ಹಿಡಿದು ಶಬ್ದಗಳ ಮೇಲೆ ಓಡಿಸುತ್ತಾ ಮಂತ್ರ ಹೇಳಿಕೊಟ್ಟರು. ನನ್ನ ಸ್ವಾಧೀನವನ್ನೇ ಕಳೆದುಕೊಂಡವಳಂತೆ ನಾನು ಅವರು ಹೇಳಿದಂತೆ ಕೇಳುತ್ತಾ, ಮಾಡುತ್ತಾ ಹೋದೆ. ತಲೆಭಾರ ಇಳಿದದ್ದಂತೂ ಸುಳ್ಳಲ್ಲ! ಆಮೇಲೆ ಅವರನ್ನು ಮಾತಾಡಿಸಬೇಕೆಂಬ ಜ್ಞಾನೋದಯವಾದಂತಾಗಿ ಅವರ ಹೆಸರು, ಊರು ಇತ್ಯಾದಿ ಎಲ್ಲ ಕೇಳಲಾರಂಭಿಸಿದೆ. ಕಾಲೇಜು ಸೇರಿದಾಗಿಂದ ಅವರನ್ನು ನೋಡುತ್ತಿದ್ದೆನಾದರೂ ಯಾವತ್ತೂ ಮಾತಾಡಿಸುವ ಗೋಜಿಗೇ ಹೋಗಿರಲಿಲ್ಲ. ಇವತ್ತು ನನ್ನ ಗುರುತು ಪರಿಚಯವೇ ಇಲ್ಲದಿದ್ದರೂ ಪ್ರೀತಿ ತೋರಿದ ಅವರ ಬಗ್ಗೆ ಮನತುಂಬಿ ಬಂದಿತ್ತು. ಮುನ್ನಾಭಾಯಿ ಸಿನೇಮಾದ ಆಸ್ಪತ್ರೆಯ ಕ್ಲೀನರ್ ತಾತಪ್ಪ, ಮುನ್ನಾಭಾಯಿಯ ಜಾದೂ ಕಿ ಝಪ್ಪಿ ಎಲ್ಲ ಮನಃಪಟಲದಲ್ಲಿ ಹಾದುಹೋದವು. ತನ್ನ ವಿವರಗಳನ್ನೆಲ್ಲ ಹೇಳಿದ ಸುಮನಕ್ಕ ತನ್ನ ಕುಟುಂಬ ತೊಂದರೆಗಳು, ಆರೋಗ್ಯ ಸರಿ ಇಲ್ಲದಿದ್ದರೂ ರಜೆ ಸಿಗದಿರುವುದು, ಸರಿಯಾಗಿ ಕೆಲಸ ಮಾಡಿದ್ದರೂ ಕೆಲಸವೇ ಮಾಡಿಲ್ಲ ಅಂತೆಲ್ಲ ಬೈಸಿಕೊಳ್ಳುವುದು ಇವುಗಳ ಬಗ್ಗೆಲ್ಲ ಹೇಳಿ ಮನಸ್ಸು ಹಗುರ ಮಾಡಿಕೊಂಡರು. ಓದಿ ಆಗಿಲ್ಲ ಅನ್ನುವ ನೆನಪೇ ಹಾರಿಹೋಗಿತ್ತು ನನಗೆ! ಆಮೇಲೆ ಅವರೇ ‘ಓದಿಕೋ ಮಗಾ. ನಿನ್ನನ್ನ ತುಂಬಾ ದಿನದಿಂದ ನೋಡುತ್ತಿದ್ದೆ. ನಿನ್ನನ್ನ ನೋಡಿದ್ರೆ ನಂಗೇನೋ ಖುಶಿ. ಬೇಜಾರಲ್ಲಿದ್ಯಲ್ಲ ಇವತ್ತು. ತಡೀಲಿಕ್ಕಾಗ್ಲಿಲ್ಲ. ಅದ್ಕೇ ಮಾತಾಡಿಸಿದೆ. ಚೆನ್ನಾಗಿರು ಮಗಾ’ ಎನ್ನುತ್ತ ತಲೆ ಮೇಲೆ ಕೈಯಿಟ್ಟು ಹರಸಿ ಹೋದರು. ನಂಬಿದ್ರೆ ನಂಬಿ, ಬಿಟ್ರೆ ಬಿಡಿ. ಮನಸ್ಸು ಎಷ್ಟು ಹಗುರವಾಯ್ತು ಅಂದರೆ, ಒಂದೇ ಗಂಟೆಯಲ್ಲಿ ಎಲ್ಲಾ ಚೆನ್ನಾಗಿ ಓದಿಕೊಂಡು ಟೆಸ್ಟ್ ಕೂಡಾ ಚೆನ್ನಾಗಿ ಬರೆದೆ ಆವತ್ತು! ಅವರ್ಯಾರು, ಅವರಿಗೆ ಅಷ್ಟು ಸಾವಿರ ಜನ ವಿದ್ಯಾರ್ಥಿಗಳಲ್ಲಿ ನಾನೇ ಏಕೆ ಅಷ್ಟು ಇಷ್ಟವಾದೆ ಎನ್ನುವ ಪ್ರಶ್ನೆಗಳಿಗೆಲ್ಲ ಇನ್ನೂ ಉತ್ತರ ಸಿಕ್ಕಿಲ್ಲ. ಮುದ್ದೆ ಮುದ್ದೆಯಾದ ಪೇಪರಲ್ಲಿ ಬರೆದುಕೊಂಡಿದ್ದ ಆ ಮಂತ್ರವನ್ನು ಇನ್ನೂ ಜೋಪಾನವಾಗಿ ಎತ್ತಿಟ್ಟುಕೊಂಡಿದ್ದೇನೆ! ನೋಡಿದಾಗೆಲ್ಲ ಅದೇನೋ ಸುಖಾನುಭೂತಿ.

ಈ ಬೆಂಗಳೂರಿಗೆ ವಲಸೆ ಬಂದ ಮೇಲೆ ನನ್ನ ಡ್ರೆಸ್ಗಳನ್ನ ಹೊಲಿಸೋದೇ ದೊಡ್ಡ ಸಮಸ್ಯೆಯಾಗಿಬಿಟ್ಟಿದೆ. ಇಲ್ಲೇನೂ ದರ್ಜಿಗಳ ಕೊರತೆಯಿಲ್ಲ ಬಿಡಿ. ಗಲ್ಲಿ ಗಲ್ಲಿಗಳಲ್ಲಿ ರಾಶಿ ತುಂಬಿಕೊಂಡಿರುವ ಮತ್ತೆಲ್ಲ ಅಂಗಡಿಗಳೊಂದಿಗೆ ಟೈಲರ್ಸ್ ಶಾಪ್ಗಳೂ ಹೇರಳವಾಗಿ ಕಾಣಸಿಗುತ್ತವೆ. ನಮ್ಮ ಮನೆ ಹತ್ತಿರವೇ ಕನಿಷ್ಟ ೪-೫ ಜನ ಆದರೂ ಲೇಡೀಸ್ ಟೈಲರ್ಸ್ಗಳಿದ್ದಾರೆ. ಸಮಸ್ಯೆ ಅದಲ್ಲ. ನಾನು ಖಾಯಂ ಬಟ್ಟೆ ಹೊಲಿಸುವ ನನ್ನೂರಿನ ದರ್ಜಿ ಇಲ್ಲಿಲ್ಲದಿರುವುದೇ ದೊಡ್ಡ ಸಮಸ್ಯೆ! ಊರಲ್ಲಿಯೂ ಹಲವಾರು ಜನ ದರ್ಜಿಗಳಿದ್ದರೂ, ಅವರಲ್ಲಿ ಕೆಲವರು ಇವನಿಗಿಂತ ಚೆನ್ನಾಗಿ, ಕಡಿಮೆ ದರದಲ್ಲಿ ಹೊಲಿದು ಕೊಡುವವರಾದರೂ ನನ್ನ ಮಟ್ಟಿಗೆ ಇವನೊಬ್ಬನೇ ಟೈಲರ್. ಹಾಗಂತ ಅವ ಮಹಾನ್ ಫ್ಯಾಶನ್ ಡಿಸೈನರ್ ಏನೂ ಅಲ್ಲ. ಮಾಮೂಲಿ ಎಲ್ಲ ಲೇಡೀಸ್ ಟೈಲರ್ಸ್ಗಳಂತೆ ಬಟ್ಟೆಗಳನ್ನು ನಾವು ಹೇಳಿದ ರೀತಿಯಲ್ಲಿ ಹೊಲಿದು ಕೊಡುತ್ತಾನೆ ಅಷ್ಟೆ. ಅವನ ಅಂಗಡಿಯಲ್ಲಿ ಥಳ ಥಳ ಹೊಳೆಯುವ ಟೈಲ್ಸ್ಗಳೋ, ಫಳ ಫಳ ಮಿಂಚುವ ಗೋಡೆಗಳೋ, ಕಣ್ಸೆಳೆಯುವ ಭಿತ್ತಿ ಚಿತ್ರಗಳೋ ಒಂದೂ ಇಲ್ಲ. ಅದೊಂದು ಯಕಶ್ಚಿತ್ ಅಂಗಡಿ. ಟ್ರಾಯಲ್ ರೂಮ್, ಮಣ್ಣು-ಮಸಿ ಅಂತೆಲ್ಲ ದೊಡ್ಡ ದೊಡ್ಡ ಬೋಟಿಕ್ಗಳಲ್ಲಿರುವ ಆಕರ್ಷಣೆಗಳೊಂದೂ ಅಲ್ಲಿಲ್ಲ. ರೇಟ್ ಕೂಡ ಅಂಥಾ ಕಮ್ಮಿ ಅಂತೇನಿಲ್ಲ. ಅಥವಾ ನಾನು ಅವನ ಅಂಗಡಿಯ ಖಾಯಂ ಗಿರಾಕಿ ಅಂತ ಅವನೇನು ನಂಗೋಸ್ಕರ ನಯಾಪೈಸೆಯೂ ಕಡಿಮೆ ಮಾಡೋದಿಲ್ಲ ಪುಣ್ಯಾತ್ಮ! ಹೋಗಲಿ ಅಂದರೆ, ಬಟ್ಟೆ ತೀರಾ ಬೇಗ ಹೊಲಿದು ಕೊಡೋದೂ ಇಲ್ಲ ಅವನು. ಸೀಸನ್ ಟೈಮಲ್ಲಂತೂ ಒಂದು ಡ್ರೆಸ್ ಹೊಲಿದು ಕೊಡಲಿಕ್ಕೂ ಅವನಿಗೆ ಮಿನಿಮಮ್ ಮೂರು ವಾರ ಬೇಕು. ಸ್ವಲ್ಪ ಬೇಗ ಕೊಡಲಿಕ್ಕೆ ಆಗುತ್ತಾ ಅಂತ ನಾನು ಹೆದರಿ ಹೆದರಿ ಕೇಳಿದರೆ ಕಣ್ಣೆಲ್ಲ ಕೆಂಪು ಮಾಡಿಕೊಂಡು ಬಯ್ಯೋದಕ್ಕೂ ರೆಡಿ ಆಸಾಮಿ! ಇಷ್ಟೆಲ್ಲ ಆದರೂ ನನ್ನ ಬಟ್ಟೆಗಳನ್ನ ಹೊಲಿಯುವುದಕ್ಕೆ ಅವನೇ ಬೇಕು ನನಗೆ. ಅವನಲ್ಲಿಗೇ ಯಾಕೆ ಹೋಗಬೇಕು, ಬೇರೆ ಕಡೆ ಯಾಕೆ ಹೋಗಬಾರದು ಅನ್ನುವುದಕ್ಕೆ ನನ್ನ ಬಳಿ ಯಾವ ಸೂಕ್ತ ಕಾರಣಗಳಿಲ್ಲದಿದ್ದರೂ ಅವನ ಅಂಗಡಿಯ ಬಗ್ಗೆ ನನ್ನ ಗೆಳತಿಯರಲ್ಲೆಲ್ಲಾ ಶಿಫಾರಸು ಮಾಡುತ್ತೇನೆ. ಅವನು ಹೊಲಿದದ್ದು ಎಲ್ಲೋ ಸ್ವಲ್ಪ ಎಡವಟ್ಟಾಗಿದೆ ಅಂತ ಮನಸಿನ ಮೂಲೆಯಲ್ಲೆಲ್ಲೋ ನನಗೇ ಅನಿಸಿದರೂ ‘ಹೇ ಇಲ್ಲ ತುಂಬ ಚೆನ್ನಾಗಿದೆ. ಇದು ಹೊಸ ಫ್ಯಾಷನ್ ಅಲ್ವಾ?’ ಅಂತ ನನಗೆ ನಾನೇ ಸಮಾಧಾನ ಮಾಡಿಕೊಳ್ಳುತ್ತ ಅದೇ ಅಭಿಪ್ರಾಯವನ್ನು ನನ್ನ ಡ್ರೆಸ್ ಬಗ್ಗೆ ಕಮೆಂಟ್ ಮಾಡಿದವರ ಮೇಲೂ ಹೇರಿ ಬಾಯಿ ಮುಚ್ಚಿಸಿ ಬಿಡುತ್ತೇನೆ. ಅವನ ಅಂಗಡಿಗೆ ಹೋದರೆ ಕನಿಷ್ಟ ಪಕ್ಷ ಒಂದು ಸೌಜನ್ಯದ ನಗೆಯನ್ನಾದರೂ ಬೀರದ ಅವನನ್ನ ನಾನು ಈ ಪರಿ ಹಚ್ಚಿಕೊಂಡಿರುವುದನ್ನ ಎಣಿಸಿಕೊಂಡರೆ ನನಗೇ ಆಶ್ಚರ್ಯ ಅನಿಸುತ್ತೆ.

ಇವರಿಬ್ಬರೇ ಅಂತಲ್ಲ. ಬೆಂಗಳೂರಿಗೆ ಬಂದು ಮಿಸ್ ಮಾಡಿಕೊಳ್ಳುತ್ತಿರೋದು ಇಂಥಾ ಹಲವರನ್ನ. ಅವರೇನೂ ನನ್ನ ಸಹಪಾಠಿಗಳಲ್ಲ, ಒಡನಾಡಿಗಳಲ್ಲ, ಸಂಬಂಧಿಗಳಲ್ಲ. ಅಸಲಿಗೆ ನನ್ನ ಅವರೊಂದಿಗಿನ ಕೆಲಸದ ಹೊರತಾಗಿ ನನಗೆ ಅವರ ಹೆಸರನ್ನೂ ಒಳಗೊಂಡಂತೆ ಅವರ ಬಗೆಗಿನ ಯಾವ ವೈಯಕ್ತಿಕ ವಿವರಗಳೂ ಗೊತ್ತಿಲ್ಲ. ಹೀಗಿದ್ದೂ ಅವರೊಂದಿಗೆ ಅದೆಂಥಾ ವಿಚಿತ್ರ ಬಂಧ ಏರ್ಪಟ್ಟು ಬಿಟ್ಟಿದೆ ಅಂದರೆ ಅವರನ್ನ ಆಗಾಗ ನೆನಪು ಮಾಡಿಕೊಳ್ಳುವಷ್ಟು. ನನ್ನ ಪ್ರೈಮರಿ ಶಾಲೆಯ ಪಕ್ಕ ಚಾಕ್ಲೇಟ್, ಬೋಟಿ, ನಾಕಾಣೆಯ ಹುಳ ಹಿಡಿದ ಉಪ್ಪಿನಕಾಯಿ ಪ್ಯಾಕೆಟ್ ಇತ್ಯಾದಿಗಳನ್ನು ಮಾರುತ್ತಿದ್ದ, ಸಾಯಿಬಾಬಾ ಥರ ಕೂದಲಿದ್ದ ವಾಸಣ್ಣ, ಪದೇ ಪದೇ ಕಿತ್ತೋಗುವ ನನ್ನ ಚಪ್ಪಲಿಗಳನ್ನು ಹೊಲಿಸುತ್ತಿದ್ದ ಅಂಗಡಿಯಾತ, ಕಾಲೇಜಿನ ಫಿಸಿಕ್ಸ್ ಲ್ಯಾಬಲ್ಲಿ ಸದಾ ನನ್ನ ಸಹಾಯಕ್ಕೆ ಬರುತ್ತಿದ್ದ ಲ್ಯಾಬ್ ಅಟೆಂಡರ್, ಹೆಚ್ಚು ಮಾತೇ ಆಡದೆ ಒಟ್ಟಿಗೆ ಕ್ಲೀನಿಂಗ್ ಕೆಲಸ ಮಾಡುತ್ತಿದ್ದ ಕುಳ್ಳ-ಕುಳ್ಳಿ ದಂಪತಿ ಜೋಡಿ, ಫ್ಯಾನ್ಸಿ ಸ್ಟೋರಿನ ಸಿಡುಕು ಮೂತಿಯ ಹುಡುಗಿ, ನನ್ನೂರಿನ ಎಸಿ ಬಸ್ಸಿನ (ಎಸಿ ಅಂದ್ರೆ ವಜ್ರ ಬಸ್ ಅಲ್ಲ. ಈ ಬಸ್ಸಿನ ಕಿಟಕಿಗಳಿಗೆ ಗ್ಲಾಸ್ಗಳೇ ಇರುವುದಿಲ್ಲ. ಚೆನ್ನಾಗಿ ಗಾಳಿಯಾಡಿ ತಂಪಾಗುತ್ತದಾದ್ದರಿಂದ ಎಸಿ ಬಸ್ ಎಂಬ ಅಡ್ಡ ಹೆಸರು. ಈ ಬಸ್ಸಲ್ಲಿ ಹೋಗೋ ಸುಖವೇ ಬೇರೆ. ಆದರೆ ಮಳೆಗಾಲದಲ್ಲಿ ಹೊರಗಿನ ನೀರು ಒಳಬರದಂತೆ ಗಬ್ಬು ನಾತ ಬೀರುವ ಕರ್ಟನ್ ಏರಿಸಿಕೊಂಡಿರುತ್ತವೆ) ಸದಾ ನಗುತ್ತಿರುವ ಚೆಲುವ ಕಂಡಕ್ಟರ್, ಪರಿಚಯದ ನಗು ಬೀರುವ ಆಟೋ ಡ್ರೈವರ್, ಅಪರಿಮಿತ ಜೀವನೋತ್ಸಾಹ ತುಂಬಿಕೊಂಡು ಲಿಫ್ಟ್ಗೆ ಬಂದ ಎಲ್ಲರನ್ನೂ ಪ್ರೀತಿಯಿಂದ ಮಾತಾಡಿಸುವ ಕಾಲೇಜಿನ ಲಿಫ್ಟ್ಮ್ಯಾನ್ ಇವರೆಲ್ಲ ನನ್ನನ್ನ ಕಾರಣವಿಲ್ಲದೆ ಕಾಡುತ್ತಾರೆ.

ನನ್ನಮ್ಮನ ಪ್ರಕಾರ ಅವಳ ತವರೂರಲ್ಲಿರುವ ಅಕ್ಕಸಾಲಿಯನ್ನು ಬಿಟ್ಟು ಉಳಿದೆಲ್ಲರೂ ಚಿನ್ನದ ತೂಕದಲ್ಲಿ ಮೋಸ ಮಾಡುವವರು. ಇವನಾದರೆ ಅಗತ್ಯವಿದ್ದಷ್ಟು ಮಾತ್ರ ಬೇರೆ ಲೋಹ ಮಿಶ್ರ ಮಾಡುತ್ತಾನೆ. ಕೈಯಲ್ಲೇ ಮಾಡುವ ಆಭರಣಗಳಾದ್ದರಿಂದ ಡಿಸೈನ್ ಅಷ್ಟೇನೂ ಚೆನ್ನಾಗಿಲ್ಲದಿದ್ದರೂ ಅದೆಲ್ಲ ಅಪ್ಪಟ ಚಿನ್ನ ಅವಳ ಪಾಲಿಗೆ. ಅವಳ ಮದುವೆ ಸಮಯದಲ್ಲಿ ಅವನಿಂದ ಮಾಡಿಸಿಕೊಂಡ ಬಳೆಗಳನ್ನು ಅಳಿಸಿ ಬೇರೆ ಹೊಸ ಫ್ಯಾಷನ್ದು ಬೇರೆ ಕಡೆ ಮಾಡಿಸಿಕೋ ಅಂತ ನಾವೇನಾದ್ರೂ ಹೇಳಿದ್ರೆ ‘ಮಾಧವನ ಅಂಗಡಿಯಲ್ಲಿ ಮಾಡಿಸಿದ್ದಿದು. ಬೇರೆ ಕಡೆ ಮಾಡಿಸೋಕೆ ಕೊಟ್ರೆ ಅವ್ರೇ ಒಳ್ಳೆ ಚಿನ್ನ ಎಲ್ಲ ಇಟ್ಟುಕೊಂಡು ಬಿಡ್ತಾರೆ. ನಾನು ಮಾಡಿಸುದಾದ್ರೂ ಅವನತ್ರವೇ ಮಾಡಿಸುತ್ತೇನೆ’ ಅಂತೆಲ್ಲ ಕತೆ ಹೊಡೆಯುತ್ತಾಳೆ.

ಪ್ರಾಯಶಃ ನಾವು ಹೆಣ್ಣುಮಕ್ಕಳೇ ಹೀಗೆ. ಕಾರಣವಿಲ್ಲದೆ ನಮ್ಮ ಮನಸ್ಸನ್ನು ಯಾರೋ ತಟ್ಟಿಬಿಡುತ್ತಾರೆ. ಸುಖಾಸುಮ್ಮನೆ ಕಾಡುತ್ತಾರೆ. ಯಾವುದೋ ಬಳೆ ಅಂಗಡಿಯಾತನನ್ನ ನೆಚ್ಚಿಕೊಂಡು ಬಿಟ್ಟರೆ ಮತ್ತೆ ಆ ಅಂಗಡಿ ಬಿಟ್ಟು ಬೇರೆಯದನ್ನು ಸುಮ್ಮನೆ ಕುತೂಹಲಕ್ಕಾದರೂ ಹೊಕ್ಕಬೇಕು ಅನಿಸುವುದಿಲ್ಲ. ಅಪ್ಪಿತಪ್ಪಿ ಹೋದರೂ ಎಲ್ಲವನ್ನೂ ಹೋಲಿಸುತ್ತಾ, ‘ಇಲ್ಲ, ಇದೇ ರೇಟಿಗೆ ಇದಕ್ಕಿಂತ ಚೆನ್ನಾಗಿರೋ ಬಳೆ ಅಲ್ಲಿ ಸಿಗುತ್ತೆ.’ ‘ಅಲ್ಲಿ ಸಿಗೋ ಕ್ವಾಲಿಟಿ ಇಲ್ಲೆಲ್ಲಿ ಸಿಕ್ಕೀತು?’ ಅಂತೆಲ್ಲ ನಮಗೆ ನಾವೇ ಕಾರಣಗಳನ್ನು ಸೃಷ್ಟಿಸಿಕೊಂಡು ಇಡೀ ಭೂಲೋಕದಲ್ಲೇ ಅಂಥದೊಂದು ಶ್ರೇಷ್ಠ ಅಂಗಡಿ ಬೇರೆಲ್ಲೂ ಇಲ್ಲ ಎನ್ನುವ ಭ್ರಮೆಯಲ್ಲೇ ಬದುಕುತ್ತೇವೆ. ನನ್ನ ಗೆಳತಿಯೊಬ್ಬಳು ಒಳ್ಳೆಯ ಗುಣಮಟ್ಟದ ಬುಕ್ಗಳು ಎಂಬ ಕಾರಣಕ್ಕೆ ನೋಟ್ಬುಕ್ಗಳನ್ನ ತೆಗೆದುಕೊಳ್ಳಲಿಕ್ಕೆಂದೇ ೩೫ ಕಿ.ಮೀ. ದೂರ ಜಾಸ್ತಿ ಕ್ರಮಿಸುತ್ತಿದ್ದಾಗ ಅವಳನ್ನ ಇನ್ನಿಲ್ಲವೆಂಬಂತೆ ಆಡಿಕೊಂಡು ನಕ್ಕಿದ್ದೆವು. ಈಗ ನಾನು ಡ್ರೆಸ್ ಹೊಲಿಸಲಿಕ್ಕೆಂದೇ ೪೫೦ ಕಿ.ಮೀ.ಗಳಷ್ಟು ದೂರದ ನನ್ನೂರಿಗೆ ಬಟ್ಟೆಗಳನ್ನು ಇಲ್ಲಿಂದ ಹೊತ್ತೊಯ್ಯುವಾಗ ಭ್ರಮೆ ಅನಿಸುವುದೇ ಇಲ್ಲ!!

ಊರಿನ ನೆಚ್ಚಿನ ವ್ಯಕ್ತಿಗಳು ಇಲ್ಲಿಲ್ಲ ಎಂಬ ತಳಮಳ ಇದ್ದರೂ, ಈ ಐದಾರು ತಿಂಗಳಲ್ಲಿ ಬೆಂಗಳೂರಲ್ಲೂ ನೆಚ್ಚಿನ ವ್ಯಕ್ತಿಗಳು ಹುಟ್ಟಿಕೊಂಡು ಬಿಟ್ಟಿದ್ದಾರೆ. ಪ್ರತೀ ಮಂಗಳವಾರ ಬರುವ ಇಸ್ತ್ರಿಯ ಅಜ್ಜ ಒಂದು ಮಂಗಳವಾರ ಬರದಿದ್ದರೆ ಸಾಕು, ಮನಸ್ಸು ಚಡಪಡಿಸಿಬಿಡುತ್ತದೆ. ಎಡೆಬಿಡದೆ ಸಿಗರೇಟು ಸೇದುವ ಅವನಿಗೆ ಏನಾದರೂ ಆಯಿತೇನೋ, ಹುಷಾರಿಲ್ಲವೇನೋ ಅಂತ ಸಣ್ಣ ಗಾಬರಿಯೂ ಹುಟ್ಟಿಬಿಡುತ್ತದೆ. ಮಠದ ಬಳಿ ಹೂಮಾರುತ್ತಿರುವ, ಬಾಯ್ತುಂಬ ಮಾತನಾಡುವ ಹೆಂಗಸಿನ ಬಳಿಯಲ್ಲದೆ ಬೇರೆ ಯಾರ ಬಳಿಯಲ್ಲೂ ಸುಮ್ಮನಾದರೂ ಹೂ ಕೊಳ್ಳಬೇಕು ಅನಿಸುವುದಿಲ್ಲ. ‘ನಮ್ಮ ಏರಿಯಾದಲ್ಲಿ ಅರ್ಧ ಮೊಳ ಹೂಗೆ ೧೦ ರೂ. ಏನ್ ಕೇಳ್ತೀರಿ?’ ಅಂತ ಯಾರಾದ್ರೂ ಗೊಣಗುತ್ತಿದ್ದರೆ ‘ನಮ್ಮ ಕಡೆ ಹಾಗಿಲ್ಲಪ್ಪ. ಒಂದೊಳ್ಳೆ ಹೆಂಗ್ಸಿದೆ. ಸೀಸನ್ ಟೈಮಲ್ಲಿ ಸ್ವಲ್ಪ ಜಾಸ್ತಿ ಅನ್ನೋದು ಬಿಟ್ರೆ ಬೇರೆ ಟೈಮಲ್ಲಿ ಸಂಪಿಗೆ ಹೂ ಫ್ರೀ ಕೊಡ್ತಾಳೆ ಅವ್ಳು’ ಎಂಬ ಶಿಫಾರಸು ಬೇರೆ ಮಾಡ್ತೇನೆ!

ಗುರುತು ಪರಿಚಯವೇ ಇರದ ನನ್ನ ಇವರೆಲ್ಲರ ನಡುವಿನ ಆ ವಿಚಿತ್ರ ಬಂಧ ಯಾವುದಿರಬಹುದು ಎಂಬ ಗೊಂದಲಕ್ಕೆ ಬೀಳುತ್ತೇನೆ ಒಮ್ಮೊಮ್ಮೆ. ತೀರ ಹತ್ತಿರದ ಸಂಬಂಧಿಗಳನ್ನೇ ಕೆಲವೊಮ್ಮೆ ನಂಬಬೇಕು, ನೆಚ್ಚಿಕೊಳ್ಳಬೇಕು ಅನಿಸುವುದಿಲ್ಲ. ವರ್ಷಾನುಗಟ್ಟಲೆ ಪರಿಚಯ ಇದ್ದರೂ ಸುಮಧುರ ಬಾಂಧವ್ಯ ಬೆಳೆಯುವುದಿಲ್ಲ. ಅಂಥಾದ್ದರಲ್ಲಿ ಕೇವಲ ವ್ಯಾವಹಾರಿಕ ಸಂಬಂಧ ಮಾತ್ರ ಇರುವವರು ಒಂದೇ ಸಲದ ಪರಿಚಯ ಮಾತ್ರಕ್ಕೆ ನಮ್ಮ ನಂಬಿಕಸ್ಥರೆನಿಸಿಕೊಂಡು ಬಿಡುತ್ತಾರಲ್ಲ, ಸರಿಯಾಗಿ ಅವರ ವೈಯಕ್ತಿಕ ವಿವರಗಳನ್ನೂ ತಿಳಿದುಕೊಳ್ಳದೆ, ಎಲ್ಲ ಸದ್ಗುಣಗಳನ್ನು ಅವರಿಗೆ ನಾವೇ ಆರೋಪಿಸಿ ನಮ್ಮ ಆಪ್ತರೆನ್ನುವಂತೆ ಬಿಂಬಿಸಿಕೊಂಡು ಬಿಡುತ್ತೀವಲ್ಲ! ನನ್ನಮ್ಮ ಹೇಳುವ ಹಾಗೆ ಪೂರ್ವ ಜನ್ಮದಲ್ಲಿ ಅವರಿಗೂ ನಮಗೂ ಹತ್ತಿರದ ಸಂಬಂಧವೇನಾದ್ರೂ ಇರುತ್ತಾ?!

Sunday, June 20, 2010

ನನ್ನ ಎಂ.ಎ. ಪದವಿ ಮತ್ತು ಅಪ್ಪನ ಕವನ

ಅಂತೂ ಇಂತೂ ಸೋಂಬೇರಿತನವನ್ನ (ಸ್ವಲ್ಪ ಕಾಲ) ಹೊರಗೋಡಿಸಿ, 'ಪುರುಸೊತ್ತಿಲ್ಲ', 'ಮನಸಿಲ್ಲ' ಅನ್ನೋ ನೆಪಗಳನ್ನೆಲ್ಲ ಬದಿಗೆ ಸರಿಸಿ ನನ್ನ ಬ್ಲಾಗ್ ಅಪ್ಡೇಟ್ ಮಾಡೋ ದೊಡ್ಮನಸ್ಸು ಮಾಡಿದ್ದೀನಿ. ಲಾಸ್ಟ್ ಬ್ಲಾಗ್ ಪೋಸ್ಟ್ ಹಾಕೋ ವೇಳೆಗೆ ನಂಗಿನ್ನೂ ಮದ್ವೆನೇ ಆಗಿರ್ಲಿಲ್ಲ. ಆದ್ರೆ ಈಗ ನಾನು ಶ್ರೀಮತಿ ಮಾತ್ರ ಅಲ್ಲ, ಎಂ.ಎ. (ಮಗುವಿನ ಅಮ್ಮ) ಕೂಡ! :-)

ಮಗುವೊಂದು ಬುವಿಗಿಳಿಯುವಾಗ ತನ್ನ ಜೊತೆಗೆ ಲೋಡುಗಟ್ಟಲೆ ಸಂಭ್ರಮ, ಉಲ್ಲಾಸ, ಜೀವನೋತ್ಸಾಹ ಎಲ್ಲವನ್ನೂ ಹೊತ್ತುಕೊಂಡೇ ಬರುತ್ತದೆ ಅನಿಸುತ್ತೆ. ತಾನತ್ತರೂ, ನಕ್ಕರೂ ನೋಡುವವರಿಗೆ ಸಂತೋಷವನ್ನೇ ಕೊಡುವ ಆ ಪುಟ್ಟ ಜೀವಿ ಮನೆಯವರಿಗೆಲ್ಲ ಜವಾಬ್ದಾರಿಯನ್ನೂ ತನ್ನಿಂತಾನೇ ಹಂಚಿಬಿಡುವ ಪರಿಯೇ ಸೋಜಿಗ.

ಮಗು ಹುಟ್ಟುವ ಮೊದಲು, ಹುಟ್ಟಿದ ನಂತರ ಅಪ್ಪ ಅಮ್ಮ ಅದೇನೇನು ಕನಸು ಕಾಣುತ್ತಾರೆ, ಮಗು ಬೆಳೆಯುವವರೆಗೆ ಅದೆಷ್ಟು ಕಷ್ಟ ಪಡುತ್ತಾರೆ ಎಂಬುದನ್ನೊಮ್ಮೆ ಅರ್ಥಮಾಡಿಕೊಂಡರೆ ಸಾಕು, ಅಪ್ಪ ಅಮ್ಮನನ್ನು ಚಿಲ್ಲರೆ ಕಾರಣಗಳಿಗೋಸ್ಕರ ದೂರುವ ಮಕ್ಕಳಿಗೆ ತಾವೆಂತ ತಪ್ಪು ಮಾಡುತ್ತಿದ್ದೇವೆ ಎನ್ನುವುದು ಅರಿವಾಗಬಹುದು. 'ಅಮ್ಮ ಮನೆಯನ್ನು ಕ್ಲೀನಾಗಿ ಇಡ್ತಿಲ್ಲ, ಅಡಿಗೆ ಬೇಗ ಮುಗಿಸ್ಲಿಲ್ಲ, ಸೂಕ್ಷ್ಮಗಳೇ ಗೊತ್ತಾಗೋಲ್ಲ, ಅತಿಯಾಗಿ ಮಾತಾಡ್ತಾಳೆ' ಅನ್ನೋ ಕ್ಷುಲ್ಲಕ ಕಾರಣಗಳಾಗಲಿ ಅಥವಾ ಅದೆಂಥ ದೊಡ್ಡ ತಪ್ಪೇ ಆಗಿರಲಿ, ಅವಳನುಭವಿಸೋ ಹೆರಿಗೆ ನೋವು, ನಿದ್ದೆ ಇಲ್ಲದ ರಾತ್ರಿಗಳಷ್ಟೇ ಸಾಕು, ಅವಳನ್ನ ಧಾರಾಳವಾಗಿ ಕ್ಷಮಿಸಿಬಿಡೋದಕ್ಕೆ. ಮಗುವಿಗೆ ಸದ್ಬುದ್ಧಿ, ಸನ್ನಡತೆ, ಶಿಸ್ತು ಕಲಿಸುವಲ್ಲಿ ಅಪ್ಪ ತೋರುವ ತಾಳ್ಮೆಯೊಂದೇ ಸಾಕು, ಮಾಡಲೇಬೇಕಾದ ಇಂಪಾರ್ಟೆಂಟ್ ಕೆಲಸವನ್ನ ಅವರು ವಯಸ್ಸಿನ ಕಾರಣದಿಂದಾಗಿ ಮರೆತುಬಿಟ್ಟ ಅಪರಾಧವನ್ನ ಕ್ಷಮಿಸೋಕೆ. ಬೆಳೆದ ಮೇಲಾದರೂ ಅಷ್ಟೆ, ಅಪ್ಪ ಅಮ್ಮ ಮಕ್ಕಳಿಗೆ ಒಂಥರಾ ಒತ್ತಡವನ್ನ ಕಳೆದುಕೊಳ್ಳಲು ಇರೋ ಸ್ಟ್ರೆಸ್ ಬಸ್ಟರ್ಸ್! ಎಲ್ಲೇ ಏನೇ ಲೋಪವಾದರೂ ಅಪ್ಪ ಅಮ್ಮನ ಮೇಲೆ ಕೂಗಾಡಿಬಿಟ್ಟರೆ ಮುಗೀತು, ಟೆನ್ಷನ್ ಮಂಗಮಾಯ! ಅವರೋ, ಸ್ವಲ್ಪ ಹೊತ್ತು ಬೇಜಾರು ಮಾಡಿಕೊಂಡರೂ ಪಾಪ, ಆಮೇಲೆ ತಾವೇ ಮಾತಾಡಿಸುತ್ತಾರೆ, 'ಏನಾಯ್ತು?' ಅಂತ ಕೇಳುತ್ತ. ಅಷ್ಟಕ್ಕೂ ಅವರದೆಷ್ಟೇ ದೊಡ್ಡವರಾದರೂ, ಅಸಡ್ಡೆ ತೋರಿದರೂ ಅಪ್ಪ ಅಮ್ಮನಿಗೆ ಮಕ್ಕಳು ಪ್ರೀತಿಯ ಮಕ್ಕಳೇ. 'ರಸ್ತೆ ದಾಟೋವಾಗ ಜಾಗ್ರತೆ' 'ಯಾಕಿಷ್ಟು ಲೇಟಾಗಿ ಮನೆಗೆ ಬರ್ತೀಯ?', 'ಬೈಕ್ ಸ್ಪೀಡಾಗಿ ಓಡಿಸ್ಬೇಡ', ಅಂತೆಲ್ಲ ಪ್ರತಿನಿತ್ಯವೆಂಬಂತೆ ಅವರು ಚೊರೆ ಮಾಡುವಾಗ 'ಯಾಕಿಷ್ಟು ಕಟ್ಟಿ ಹಾಕೋಕೆ ಪ್ರಯತ್ನ ಮಾಡ್ತಿದ್ದಾರಿವರು? ನಾನೇನು ಚಿಕ್ಕ ಮಗೂನಾ?' ಅನಿಸಿದರೂ ಇವೆಲ್ಲ ಸ್ವಾತಂತ್ರ್ಯ ಹರಣದ ಪ್ರಯತ್ನ ಅಲ್ಲ, ಬದಲಿಗೆ ಅವರಿಗೆ ನಮ್ಮ ಮೇಲಿರೋ ಅಪ್ಪಟ ಕಾಳಜಿಯಿಂದ ಹೇಳ್ತಿರೋದು ಅಂತ ಅರ್ಥ ಆಗೋದು ಸ್ವತಃ ಅಪ್ಪ ಅಮ್ಮ ಆದ್ಮೇಲೇ ಇರಬೇಕು.

ಖಂಡಿತ ಹೌದು, ನನಗೂ ಮಗ ಹುಟ್ಟಿದ್ಮೇಲೆಯೇ ಇವೆಲ್ಲ ಅರ್ಥ ಆಗ್ತಿರೋದು ;-) ಮಗು ಸಂತೋಷ, ಜವಾಬ್ದಾರಿಗಳ ಜೊತೆಗೇ ಒಳ್ಳೆ ಬುದ್ಧಿಯನ್ನೂ ಕೊಡುತ್ತೆ! ಹುಟ್ಟಿದ ಎರಡು ತಿಂಗಳಲ್ಲೇ ನನಗಿಷ್ಟು ಅರಿವು ಮೂಡಿಸಿದ ಪುಟ್ಟ 'ಪ್ರಣವ'ನಿಗೆ ತಿಂಗಳು ತುಂಬಿದ ಸಂದರ್ಭದಲ್ಲಿ ನಮ್ಮಪ್ಪ ಅವನಿಗೆ ಉಡುಗೊರೆಯಾಗಿ ನೀಡಿದ ಕವನವನ್ನ ಇಲ್ಲಿ ಪೋಸ್ಟ್ ಮಾಡ್ತಿದ್ದೀನಿ.

ಪುಟ್ಟ ಕಂದಗೆ ಶುಭ ಹರಕೆ

ನಮ್ಮ ಮನೆಯ ಸೂರಿನಲ್ಲಿ
ಅರಳಿದಂಥ ಪುಷ್ಪವೇ
ದಿನವೂ ಮೊಗದಿ ನಗೆಯ ಚೆಲ್ಲಿ
ವರವ ಕೊಡುವ ದೈವವೇ!

ನಿನ್ನ ಆಟ, ಚೆಲುವ ನೋಟ
ನೋಡಲದು ವಿಚಿತ್ರವೇ
ಮಲಗಿದಲ್ಲೆ ಗಮನ ಸೆಳೆದು
ಕಿಸಿದುಬಿಡುವೆಯಲ್ಲವೆ?

ಕೈಯನೇಕೆ ಹಾರಿಸುತಿಹೆ?
ಜಯದ ಹುರುಪು ನಿನ್ನದೆ?
ಅಳುವೆಯೊಮ್ಮೆ, ನಗುವೆಯೊಮ್ಮೆ
ಮನದ ಒಳಗೆ ಏನಿದೆ?

ಊಟ-ಗೀಟ ಏನೂ ಬೇಡ
ಎದೆಯ ಹಾಲು ಶ್ರೇಷ್ಠವೆ?
ಒಮ್ಮೆ ಅತ್ತುಬಿಟ್ಟರಾಯ್ತು
ಮಮ್ಮು ಸಿಗುವುದಲ್ಲವೆ?

ರಚ್ಚೆ-ಗಿಚ್ಚೆ ಮಾಡಿಕೊಂಡು
ಮಿಣ್ಣಗಿರುವೆಯೇತಕೆ?
ಅಮ್ಮ ನೋಡಿಬಿಡುವಳೆಂದೆ?
ಏಕೆ ನಿನಗೆ ನಾಚಿಕೆ?

ನೀನು ಬಂದು ತಿಂಗಳೊಳಗೆ
ನಮಗೆ ಶಿಸ್ತು ಕಲಿಸಿದೆ
ಮನೆಯ ಒಳಗೂ ಹೊರಗೂ ಏನೋ
ಬೆಳಕು ಮೂಡಿ ಹರಿದಿದೆ!

ಪುಟ್ಟ ಕಂದ, ನಿನಗೆ ನಿತ್ಯ
ನಮ್ಮ ಹರಕೆ ಮಾಲಿಕೆ
ಜೋಜೋ ಲಾಲೀ... ಹಾಡು ಕೇಳು,
ಸುಖವ ತರಲಿ ನಾಳೆಗೆ
- ನ.ಭ.ನೆಂಪು

ಎಲ್ಲರಿಗೂ ಅಪ್ಪಂದಿರ ದಿನದ ಹಾರ್ದಿಕ ಶುಭಾಶಯಗಳು

Thursday, November 6, 2008

ಕಾಯಕವೇ ಕೈಲಾಸ

ಚಿಕ್ಕಂದಿನಿಂದಲೂ ನನಗೆ ದಿನವೂ ಕೆಲಸಕ್ಕೆ ಹೋಗುವವರನ್ನು ನೋಡುತ್ತಿದ್ದಾಗೆಲ್ಲ ಅನಿಸುತ್ತಿದ್ದುದು ಒಂದೇ - ನಾನೂ ಬೇಗ ಬೇಗ ಓದಿ ಮುಗಿಸಿ ಕೆಲಸಕ್ಕೆ ಸೇರಬೇಕು, ಆಮೇಲೆ ಈ ಶಾಲೆ, ಕಾಲೇಜು, ಓದೋದು - ಬರೆಯೋದು, ಮೇಷ್ಟ್ರ ಹತ್ರ ಕೊರೆಸಿಕೊಳ್ಳೋದು, ಬೈಸಿಕೊಳ್ಳೋದು, ತಿಂಗಳಿಗೊಮ್ಮೆ ಬರೋ ಪರೀಕ್ಷೆಗಳು... ಇವುಗಳ ಜಂಜಾಟ ಇರೋದಿಲ್ಲ, ಹಾಯಾಗಿರಬಹುದು ಅಂತ! ಆದರೆ ಕೆಲಸಕ್ಕೆ ಸೇರಿದ ಸ್ವಲ್ಪ ದಿನಗಳಲ್ಲಿ ಭಯಾನಕವಾಗಿಯೇ ಜ್ಞಾನೋದಯ ಆಯ್ತು - ಅಸಲಿಗೆ ವೃತ್ತಿಜೀವನದಲ್ಲಿ ಪ್ರತಿಯೊಂದು ದಿನವೂ ಪರೀಕ್ಷೆಯೇ ಅನ್ನೋದು. ಮಾಡುವ ಕೆಲಸವನ್ನು ಪ್ರೀತಿಸಬೇಕು, ಯಾವುದೇ ಕೆಲಸವಾದರೂ ಸರಿ, ಶ್ರದ್ಧೆ, ಪ್ರಾಮಾಣಿಕತೆ ಇರಬೇಕು ಅನ್ನುವ ಮಾತುಗಳನ್ನು ಕೇಳುವಾಗೆಲ್ಲ ನನಗೆ ಸಾಮಾನ್ಯರಲ್ಲಿ ಸಾಮಾನ್ಯರೆನಿಸುವ, ಆದರೂ ತಮ್ಮ ವೃತ್ತಿಗೌರವವನ್ನು ನಿಷ್ಠೆಯಿಂದ ಕಾಪಾಡಿಕೊಂಡು ಬರುತ್ತಿರುವ ಕೆಲವು ವ್ಯಕ್ತಿಗಳು ನೆನಪಾಗುತ್ತಾರೆ.

***

ಹುಡುಗಿಯರು ತೆಗೆದುಕೊಳ್ಳುವ ಚಪ್ಪಲಿಗಳೇ ಹಾಗಿರುತ್ತವೋ ಅಥವಾ ಅವುಗಳ ತಯಾರಿಕೆಯೇ ಹಾಗೋ (ಅಥವಾ ನಮ್ಮ ಪಾದಗಳೇ ಹಾಗೋ!).. ಅಂತೂ ನನಗನಿಸುವಂತೆ ನಮ್ಮ - ಹುಡುಗಿಯರ ಚಪ್ಪಲಿಗಳು ಹಾಳಾಗುವುದು ಬಲುಬೇಗ. ತೀರ ನಾಜೂಕಾಗಿದ್ದು ಸ್ವಲ್ಪ ಕಾಲು ಕೊಂಕಿಸಿದರೂ, ಬಸ್ಸಿಗೆ ಲೇಟಾಯ್ತೆಂದು ಸ್ವಲ್ಪ ಓಡಿದರೂ ಸರಿಯಾದ ಸಮಯದಲ್ಲಿ ಕೈ (ಕಾಲು?) ಕೊಟ್ಟುಬಿಡುತ್ತವೆ. ಆಮೇಲೆ ಆ ಬಾರು ಕಟ್ಟಾದ ಸುಂದರ ಚಪ್ಪಲಿಯನ್ನ ಕಷ್ಟಪಟ್ಟು ಪಾದಕ್ಕೆ ಅಂಟಿ ನಿಲ್ಲುವಂತೆ ಕಾಲೆಳೆಯುತ್ತಾ ಚಪ್ಪಲಿ ಹೊಲಿಯುವ ಅಂಗಡಿಯನ್ನು ಹುಡುಕುತ್ತಾ ಅಲೆಯುವ ಪಾಡು ದೇವರಿಗೇ ಪ್ರೀತಿ. ಹೊಸ ಚಪ್ಪಲಿ ಕೊಳ್ಳಲು ಸಮಯ, ವ್ಯವಧಾನ, ಹಣದ ಅಭಾವ, ಜೊತೆಗೆ ಈ ಕಾಲೆಳೆಯುವ `ಕ್ಯಾಟ್‌ವಾಕ್'ಅನ್ನು ಅದೆಷ್ಟು ಜನ ನೋಡಿ ಮನಸಲ್ಲೇ ನಗುತ್ತಿದ್ದಾರೋ ಅನ್ನುವ ಅವಮಾನ ಆ ಕ್ಷಣಕ್ಕೆ ಚಪ್ಪಲಿ ಹೊಲಿಯುವವರ ಅನಿವಾರ್ಯತೆಯನ್ನು ಸೃಷ್ಟಿ ಮಾಡಿಬಿಡುತ್ತವೆ. ಇಂತಹ ಹಲವು ಸಂದರ್ಭಗಳಿಗೆ ಆಪದ್ಬಾಂಧವನಂತೆ ನನಗೆ ನೆರವಾಗುತ್ತಿದ್ದವರು ನಮ್ಮ ಕಾಲೇಜೆದುರಿಗೆ ಚಪ್ಪಲಿ ಹೊಲಿಯುವ ಅಂಗಡಿ ಇಟ್ಟುಕೊಂಡಿದ್ದ ವ್ಯಕ್ತಿ. ಅವರ ಕೈಗೆ ಚಪ್ಪಲಿ ಒಪ್ಪಿಸಿದ್ದೇ ನನ್ನ ಮನಸ್ಸು ನಿರಾಳವಾಗಿಬಿಡುತ್ತಿತ್ತು. ಅಂಗ ಊನವಾದ ಆ ಚಪ್ಪಲಿಯನ್ನು ತನ್ನ ಮಗುವೇನೋ ಎಂಬಂತೆ ಕಾಳಜಿಯಿಂದ ಕೈಗೆತ್ತಿಕೊಂಡು ಶ್ರದ್ಧೆಯಿಂದ ಹೊಲಿಗೆ ಹಾಕಿ, ಅಗತ್ಯ ಬಿದ್ದರೆ (ಅಂದರೆ ಚಪ್ಪಲಿ ನೋಡಲಾಗದಷ್ಟು ಬಣ್ಣ ಕಳೆದುಕೊಂಡಿದ್ದರೆ) ಪಾಲಿಶ್ ಕೂಡ ಮಾಡಿ ಅವರು ಚಪ್ಪಲಿ ವಾಪಸ್ ಕೊಡುವುದನ್ನ ನೋಡುವುದೇ ಒಂದು ಸೊಗಸು! ಆ ಶ್ರದ್ಧೆ ಪ್ರಾಯಶಃ ತಮ್ಮ ಕೆಲಸವನ್ನು ತುಂಬ ಪ್ರೀತಿಸುವವರಿಗೆ ಮಾತ್ರ ಇರಲು ಸಾಧ್ಯವೇನೋ. ಆತ ಹೊಲಿಗೆ ಹಾಕಿದ ಜಾಗ ಮತ್ತೆ ಯಾವತ್ತೂ ತುಂಡಾದದ್ದಿಲ್ಲ. ಅಪ್ಪಿತಪ್ಪಿ ಅವರ ಹೆಂಡತಿಯೋ, ಮಗನೋ ಹೊಲಿಗೆ ಹಾಕಿ ಮತ್ತದೇ ಕಡೆ ಚಪ್ಪಲಿ ಬಾರ್ ಕಟ್ಟಾದರೂ ಪುನಃ ಹೊಲಿಗೆ ಹಾಕೋದಕ್ಕೆ ದುಡ್ಡು ತೆಗೆದುಕೊಳ್ಳುತ್ತಿರಲಿಲ್ಲ ಅವರು. ರಿಪೇರಿಯಾದ ಚಪ್ಪಲಿಯನ್ನು ಹಾಕಿಕೊಂಡು ಸ್ಟೈಲ್ ಹೊಡೆಯುವಾಗೆಲ್ಲ ಅವರ ನೆನಪೇ ಇರುತ್ತಿರಲಿಲ್ಲ ನನಗೆ. ಮತ್ತೆ ಪುನಃ ಅವರ ನೆನಪಾಗುತ್ತಿದ್ದುದು ಪುನಃ ಚಪ್ಪಲಿ ಕಟ್ಟಾದಾಗಲಷ್ಟೇ. ಆ ಪುಟ್ಟ ಕೆಲಸದಲ್ಲೂ ಇದ್ದ ಅವರ ಪರಿಶ್ರಮ, ಶ್ರದ್ಧೆಯ ಅರಿವು ನನಗಾದುದು ನಾನು ಬೇರೆಯವರ ಬಳಿ ಚಪ್ಪಲಿ ಹೊಲಿಸಿಕೊಂಡು ಕೈಸುಟ್ಟುಕೊಂಡಾಗ! ಒಳ್ಳೆಯತನದ ಅರಿವಾಗುವುದು ಕೆಡುಕಿನ ಅನುಭವ ಆದಾಗ ಮಾತ್ರ ಅಲ್ಲವೇ?

***


ಯಾವುದೇ ಕಂಪೆನಿ ಅಥವಾ ಕಾಲೇಜಿನ ಸೆಕ್ಯುರಿಟಿ ಗಾರ್ಡ್ ಕೆಲಸ, ಲಿಫ್ಟ್ ಆಪರೇಟರ್ ಕೆಲಸಗಳೆಲ್ಲ ಎಷ್ಟೊಂದು ಏಕತಾನತೆಯ, ಬೋರಿಂಗ್ ಕೆಲಸಗಳಲ್ಲವಾ ಅಂತ ನಾನು ಯಾವಾಗಲೂ ಅಂದುಕೊಳ್ಳುವುದಿತ್ತು. ದಿನಾ ಅವವೇ ಮುಖಗಳನ್ನ ಹತ್ತಾರು ಬಾರಿ ನೋಡಬೇಕು. ನೋಡುತ್ತಿದ್ದರೂ ಪರಸ್ಪರ ಸಂವಹನಕ್ಕೆ ವಿಷಯಗಳೇ ಇರುವುದಿಲ್ಲ. ಆ ಕೆಲಸದಲ್ಲಿರುವವರು ಹೇಗೆ ಇದನ್ನ ಸಹಿಸಿಕೊಳ್ಳುತ್ತಾರೋ ಅಂದುಕೊಳ್ಳುತ್ತಿದ್ದೆ. ಆದರೆ ನಮ್ಮ ಕಾಲೇಜಿನ ಲಿಫ್ಟ್ ಆಪರೇಟರನ್ನು ನೋಡಿದ ನಂತರ ಇಂತಹ ಕೆಲಸಗಳನ್ನೂ ಎಷ್ಟೊಂದು ಖುಷಿಯಿಂದ ಮಾಡಬಹುದು, ಏಕತಾನತೆ ದೂರ ಮಾಡಿಕೊಳ್ಳಬಹುದು ಅನ್ನುವುದಕ್ಕೆ ನಿದರ್ಶನ ಸಿಕ್ಕಿತು. ಸದಾ ಹಸನ್ಮುಖಿಯಾಗಿರುತ್ತಿದ್ದ ನಮ್ಮ ಲಿಫ್ಟ್ ಮ್ಯಾನ್ (ನಾವವರನ್ನ ಕರೆಯುತ್ತಿದ್ದುದೇ ಹಾಗೆ) ಲಿಫ್ಟ್ ಹತ್ತಿದ ಎಲ್ಲರನ್ನೂ ತಾವೇ ಮಾತನಾಡಿಸುತ್ತಿದ್ದರು ಸ್ವಲ್ಪವೂ ಕಿರಿಕಿರಿಯೆನಿಸದಂತೆ. ಕನ್ನಡ, ಕೊಂಕಣಿ, ತುಳು ಅಷ್ಟೇ ಅಲ್ಲದೆ ಇಂಗ್ಲಿಷ್ ಮಾತ್ರ ಉಲಿಯಬಲ್ಲವರನ್ನು ಸಂಭಾಳಿಸುವಷ್ಟು ಇಂಗ್ಲಿಷ್ ಕೂಡ ಬರುತ್ತಿತ್ತು ಅವರಿಗೆ. ದಿನವೂ ಲಿಫ್ಟ್ ಶುಚಿಗೊಳಿಸಿ, ಊದುಬತ್ತಿ ಹಚ್ಚಿ ಅಲ್ಲೊಂದು ಆಹ್ಲಾದಕರ ವಾತಾವರಣ ನಿರ್ಮಾಣ ಮಾಡಿ, ಲಿಫ್ಟಿನ ಸಕಲ ಮೇಲ್ವಿಚಾರಣೆ ನೋಡಿಕೊಳ್ಳುತ್ತ, ಜೊತೆಗೆ ಲಿಫ್ಟಿನ ಮಿತಿ ಮೀರಿದ್ದರೂ ಅದರಲ್ಲಿ ಹತ್ತಿಕೊಂಡು ರೂಲ್ಸ್ ಬ್ರೇಕ್ ಮಾಡಲು ಹವಣಿಸುವ ನಮ್ಮಂಥ ವಿದ್ಯಾರ್ಥಿಗಳನ್ನು ಮೃದು ಮಾತುಗಳಿಂದಲೇ ನಿಯಂತ್ರಿಸುತ್ತ ತಮ್ಮ ಕೆಲಸವನ್ನು ಸಂಪೂರ್ಣ ಸಂತೋಷದಿಂದ ನಿರ್ವಹಿಸುವ ಅವರ ವೈಖರಿ ನನಗಂತೂ ಯಾಕೋ ತುಂಬ ಇಷ್ಟವಾಯಿತು. `ಆಲ್‌ಕೆಮಿಸ್ಟ್'ನಲ್ಲಿ ವರ್ಣಿಸಿರುವ ಮನುಷ್ಯನ ನಿಯತಿಯ ರೀತಿಯಲ್ಲಿ ಇವರು ತಮ್ಮ ಪಾಲಿನ ನಿಯತಿಯನ್ನು ಕಂಡುಕೊಂಡಿದ್ದಾರೇನೋ ಅಂತ ಅವರನ್ನು ನೋಡಿದಾಗೆಲ್ಲ ಅಂದುಕೊಂಡಿದ್ದೇನೆ.

***

ಇನ್ನಿದು ಮೊನ್ನೆ ಮೊನ್ನೆಯಷ್ಟೇ ನಡೆದ ಘಟನೆ. ಟೆಲಿಫೋನ್ ಬಿಲ್ ಕಟ್ಟುವ ಅವಧಿ ಮೀರಿತ್ತಾದ್ದರಿಂದ ಬಿಲ್ ಕಟ್ಟೋಕೆ ಬಿಎಸ್‌ಎನ್‌ಎಲ್ ಆಫೀಸ್‌ಗೇ ಹೋಗಿದ್ದೆ. ಅಲ್ಲಿಗೆ ಹೋಗಿದ್ದು ಅದೇ ಮೊದಲ ಬಾರಿ. ಹಣ ಕಟ್ಟಿ, ಅವರು ವಾಪಸ್ ಕೊಟ್ಟ ಬಿಲ್ ಮತ್ತು ಚಿಲ್ಲರೆಯನ್ನು ಎಣಿಸೋಕೆ ಹೋಗದೆ ಹಾಗೇ ತೆಗೆದುಕೊಂಡು ಬಂದೆ. ಮರುದಿನ ಪರ್ಸ್ ನೋಡುವಾಗ ೨೦೦ ರೂ. ಕಡಿಮೆ ಇದೆಯಲ್ಲ ಅನಿಸಿತಾದರೂ ಬಹುಶಃ ೫೦೦ ರೂ. ಕೇಳಿದ ಸ್ನೇಹಿತೆಗೆ ೨೦೦ ರೂ. ಹೆಚ್ಚುವರಿ ನೀಡಿದೆನೇನೋ, ಆಮೇಲೆ ಕೇಳಿದರಾಯಿತು ಅಂದುಕೊಂಡು ಸುಮ್ಮನಾದೆ. ೪ ದಿನಗಳ ನಂತರ, ಸೋಮವಾರ ಬೆಳಿಗ್ಗೆ ೯ ಗಂಟೆಯ ಸುಮಾರಿಗೆ ಆಫೀಸಿಗೆ ಹೊರಡುತ್ತಿರಬೇಕಾದರೆ ನಮ್ಮ ಲ್ಯಾಂಡ್‌ಲೈನ್ ಫೋನ್‌ಗೆ ಕರೆ ಬಂತು. "ಮೊನ್ನೆ ಬಿಎಸ್‌ಎನ್‌ಎಲ್ ಆಫೀಸಲ್ಲಿ ಬಿಲ್ ಕಟ್ಟಿದ್ದೀರಾ" ಅಂತ. ಹೌದು ಅಂದೆ. "೨೦೦ ರೂ. ಜೊತೆಗೆ ಬಿಲ್ ಕಟ್ಟಿದ ರಶೀದಿ ಕೂಡಾ ಹಾಗೇ ಬಿಟ್ಟುಹೋಗಿದ್ದೀರಲ್ಲ" ಅಂದರು ಆ ಕಡೆಯಿಂದ. " ಅಯ್ಯೋ ಹೌದಾ? ನನಗೆ ಗೊತ್ತೇ ಆಗಲಿಲ್ಲ. ನೀವೀಗ ಫೋನ್ ಮಾಡಿ ಹೇಳಿದ್ದೇ ಗೊತ್ತಾಯಿತು" ಅಂದೆ. ಆ ಕಡೆಯ ವ್ಯಕ್ತಿ "ಹ್ಮ್. ನಾನೂ ಹಾಗೇ ಅಂದುಕೊಂಡೆ. ನಾನು ೩ ದಿನ ರಜೆ ಹಾಕಿ ಊರಿಗೆ ಹೋಗಿದ್ದೆ. ನಿಮ್ಮ ಹಣ ಮತ್ತು ರಶೀದಿಯನ್ನು ಬೇರೆ ಸ್ಟಾಫ್ ಬಳಿ ಕೊಟ್ಟು ಹೋಗಿದ್ದೆ, ನೀವೇನಾದರೂ ಬಂದು ಕೇಳಿದರೆ ಕೊಡಿ ಅಂತ. ಇವತ್ತು ಬೆಳಿಗ್ಗೆಯಷ್ಟೇ ವಾಪಸ್ ಬಂದೆ. ಆದ್ರೆ ನೀವಿನ್ನೂ ಬಂದಿಲ್ಲ ಇಲ್ಲಿಗೆ ಅಂತ ಗೊತ್ತಾಯ್ತು. ಬಹುಶಃ ನಿಮ್ಮ ಗಮನಕ್ಕೆ ಬಂದಿಲ್ಲ ಅನ್ನಿಸಿ ಫೋನ್ ಮಾಡಿ ಹೇಳೋಣ ಅಂದುಕೊಂಡೆ" ಅಂದರು. ನನಗೆ ಏನು ಹೇಳಲೂ ತೋಚಲಿಲ್ಲ. ಇದರಲ್ಲಿ ಸಂಪೂರ್ಣ ಬೇಜವಾಬ್ದಾರಿ ನನ್ನದೇ ಆಗಿತ್ತು. ನಾನೇ ಅವರ ಬಳಿ ಹೋಗಿ ಹಣ ವಾಪಸ್ ಕೇಳಿದ್ದರೂ ಅವರು ತನಗೆ ಗೊತ್ತಿಲ್ಲ ಅಂದಿದ್ದರೆ ನಾನೇನೂ ಮಾಡುವಂತಿರಲಿಲ್ಲ. ಹೀಗಿದ್ದರೂ ತಾವೇ ನನಗೆ ಫೋನ್ ಮಾಡಿ ನನ್ನ ಜವಾಬ್ದಾರಿ ನೆನಪಿಸಿದ ಅವರಿಂದ ಹಣ ವಾಪಸ್ ಪಡೆಯುವಾಗ "ತುಂಬಾ ಥ್ಯಾಂಕ್ಸ್" ಎನ್ನುವ ಸವಕಲು ಪದಗಳನ್ನಷ್ಟೇ ಹೇಳಲು ಸಾಧ್ಯವಾಯ್ತು ನನಗೆ. ತಾನು ತುಂಬಾ ಪ್ರಾಮಾಣಿಕ, ಹಾಗೆ ಹೀಗೆ ಅಂತ ದೊಡ್ಡ ವರ್ಣನೆಗಳೇನೂ ಬರಲಿಲ್ಲ ಅವರ ಬಾಯಿಂದ. "ಬೇರೆಯವರ ಹಣ ನಮ್ಗ್ಯಾಕೆ ಬಿಡಿಯಮ್ಮ" ಅಂತಷ್ಟೇ ಹೇಳಿದರು. ಅವರ ಪ್ರಾಮಾಣಿಕತೆ ತುಂಬ ಅಚ್ಚರಿ ಕೊಟ್ಟಿತು ನನಗೆ. ಅಷ್ಟಕ್ಕೂ ನಾನೊಬ್ಬಳು ಮಾತ್ರ ಪ್ರಾಮಾಣಿಕತೆಯ, ಇನ್ನಿತರ ಎಲ್ಲ ಸದ್ಗುಣಗಳ ಅಪರಾವತಾರ. ಉಳಿದೆಲ್ಲ ಹುಲುಮಾನವರು ದುಷ್ಟರು ಅಂತ ಭಾವಿಸುವುದು, `ಬೆಳ್ಳಗಿರುವುದೆಲ್ಲ ಹಾಲು' ಅಂತ ನಂಬಿಕೊಂಡಷ್ಟೇ ಮೂರ್ಖತನ ಅಲ್ವಾ?

Monday, September 8, 2008

ಕೆಮ್ಮಿನ ಕೊರೆತ

ಸುಮಾರು ಒಂದು ತಿಂಗಳಿಂದ ಸಖತ್ತಾಗಿ ಕಾಡಿಸುತ್ತಾ ಇದೆ ಈ ಕೆಮ್ಮು. ಹೋದಲ್ಲಿ, ಬಂದಲ್ಲಿ, ಕೂತಲ್ಲಿ, ನಿಂತಲ್ಲಿ, ಮಲಗಿದಲ್ಲಿ ಎಲ್ಲ ಕಡೆ ನನಗಿಂತ ಮೊದಲೇ ಹೋಗಿ, `ಖೊಕ್... ಖೊಕ್...' ಅಂತ ನನಗೆ ನಾನೇ ಬಹುಪರಾಕು ಹೇಳಿಕೊಳ್ತಾ ಇದ್ದೀನಿ ಅನ್ನೋ ಅನುಭವ ಕೊಡುತ್ತಿತ್ತು! ಹಾಗಂತ ಶೀತ, ನೆಗಡಿ, ಕಫ ಒಂದೂ ಇಲ್ಲ! ಬರೀ ಕೆಮ್ಮು. ಅಮ್ಮನ ಮೆಣಸಿನ ಕಾಳು ಕಷಾಯ, ಅರಸಿನ ಹಾಕಿದ ಹಾಲು, ಆಗಾಗ ತಿಂದ ಕಲ್ಲುಸಕ್ಕರೆ, ಜೇನುತುಪ್ಪ ಇದ್ಯಾವುದಕ್ಕೂ ಕೆಮ್ಮು ಜಗ್ಗದೇ ಹೋದಾಗ ಆಯುರ್ವೇದಕ್ಕೆ ಮೊರೆಹೋದೆ. ಡಾಕ್ಟರು ಥೇಟ್ `ಜೆಮ್ಸ್' ಚಾಕ್ಲೇಟ್ ಹಾಗಿರುವ ಮಾತ್ರೆಗಳನ್ನು ಮುಷ್ಟಿ ತುಂಬ ಕೊಟ್ಟು `ಬಹುಶಃ ಎಸಿ ಪ್ರಭಾವದಿಂದ ಬರ್ತಿರೋ ಕೆಮ್ಮು ಇದು. ಈ ಮಾತ್ರೆ ತಗೊಂಡು ನೋಡಿ' ಅಂದರು. `ಜೆಮ್ಸ್'ಗಳೆಲ್ಲ ಮುಗಿದುವಾದರೂ ಕೆಮ್ಮೇನೂ `ಜಪ್ಪಯ್ಯ' ಅನ್ನಲಿಲ್ಲ.

ಇಷ್ಟಾಗುವಾಗ ಕೆಮ್ಮಿ ಕೆಮ್ಮಿ ನನ್ನ ಸ್ವರ ಅಕ್ಷರಶಃ ಬಿದ್ದುಹೋಯಿತು! ಮಾತಾಡಹೋದರೆ ಪಾತಾಳದಾಳದಿಂದ ಸ್ವರ ಬರುತ್ತಿದೆಯೇನೋ ಅನಿಸುತ್ತಿತ್ತು. ಕಲೀಗೊಬ್ಬ `ಅರೇ! ಡಿಟ್ಟೋ ರಾಣಿ ಮುಖರ್ಜಿ ಥರಾ ಆಗಿದೆ ನಿನ್ನ ವಾಯಿಸ್' ಅಂತ ಕಾಲೆಳೆಯೋಕೆ ಶುರು ಮಾಡಿದ. ಅವನ ಹೋಲಿಕೆಗೆ ಖುಶಿಯಾಯಿತಾದರೂ, ಇನ್ನೊಬ್ಬಳು `ನೋಡು, ಸ್ವರ ಬಿದ್ದು ಹೋದಾಗಲೂ ತುಂಬ ಮಾತಾಡ್ತಾ ಇದ್ರೆ ಆ ವಾಯಿಸ್ಸೇ ಪರ್ಮನೆಂಟ್ ಆಗುತ್ತಂತೆ!' ಅಂತ ಹೆದರಿಸಿದಾಗ ಸ್ವಲ್ಪ ಸಮಯ ಮಾತಾಡದೇ ಸುಮ್ಮನಿರೋದಕ್ಕೆ ವ್ಯರ್ಥ ಪ್ರಯತ್ನ ಮಾಡಿ ಕೈಬಿಟ್ಟೆ.

ಇವಿಷ್ಟು ಸಾಲದು ಅಂತ ಸಿಕ್ಕಾಪಟ್ಟೆ ಕಿವಿ ನೋವು, ಕಣ್ಣುರಿ ಎಲ್ಲ ಪ್ರಾರಂಭವಾಯಿತು. ಏನೋ ಸೀರಿಯಸ್ ಪ್ರಾಬ್ಲೆಮ್ ಇರಬಹುದು ಅಂತ ಪುಕುಪುಕು ಶುರುವಾಗಿ ಕಿವಿ-ಮೂಗು-ಗಂಟಲು ತಜ್ಞರ ಹತ್ತಿರ ಕೇಳಿದರೆ ವಾಸಿಯೇನೋ ಅನಿಸಿ ಅವರ ಬಳಿ ಹೋದೆ. `ಮೂಗಿನದ್ದೇನೂ ಸಮಸ್ಯೆ ಇಲ್ಲ. ಕಿವಿ ಮತ್ತು ಗಂಟಲು ನೋವು' ಅಂತ ನಾನಂದರೆ ಅವರು ನನ್ನ ಮೂಗನ್ನೂ ಪರೀಕ್ಷಿಸಿ `ಏನಿದು ನಿಮ್ಮ ಮೂಗು ಹೀಗಿದೆ? ಮಧ್ಯದ ಗೋಡೆ ಎಡ ಬದಿ ಜಾಸ್ತಿ ವಾಲಿಕೊಂಡಿದೆ?' ಅಂದರು. ನಾನೇನನ್ನಲಿ? ಮ್ಯಾನುಫ್ಯಾಕ್ಚರಿಂಗ್ ಡಿಫೆಕ್ಟ್ ಅಂತ ಹೇಳಿ ಮರ್ಯಾದೆ ಕಳಕೊಳ್ಳೋದು ಯಾಕೆ ಸುಮ್ಮನೆ ಅಂತ ಅನಿಸಿದ್ದರಿಂದ ಏನೂ ಹೇಳದೆ ಸುಮ್ಮನೆ ಹಲ್ಕಿರಿದೆ. `ಮೂಗಿನಿಂದಲೇ ನಿಮಗೆ ಸಮಸ್ಯೆ ಆಗ್ತಿರೋದು. ಅಲ್ಲಿಂದ ವೆಂಟಿಲೇಷನ್ ಸರಿಯಾಗಿ ಆಗ್ತಿಲ್ಲ. ತೀರಾ ಪ್ರಾಬ್ಲೆಮ್ ಆದರೆ ಒಂದು ಸಣ್ಣ ಆಪರೇಶನ್ ಮಾಡೋಣ. ಸಧ್ಯಕ್ಕೆ ಈ ಮಾತ್ರೆ ತಗೊಳ್ಳಿ. ಮತ್ತೆ ಎಸಿ ಆದಷ್ಟು ಅವಾಯಿಡ್ ಮಾಡಿ' ಅಂದರು. ಎಸಿ ಅವಾಯಿಡ್ ಮಾಡುವ ದಾರಿ ನನಗ್ಯಾವುದೂ ತೋಚಲಿಲ್ಲ. ಆದರೆ ಮೂಗಿಗೆ `ಪ್ಲಾಸ್ಟಿಕ್ ಇಲ್ಲದ ಸರ್ಜರಿ' ಮಾಡಿಸಿಕೊಂಡು ನಾನೂ ಮೈಕೆಲ್ ಜಾಕ್ಸನ್, ಶ್ರೀದೇವಿ ಸಾಲಿಗೆ ಸೇರುವ ಕನಸು ಕಾಣುತ್ತಾ ಬಿಲ್ ತೆತ್ತು ಹೊರ ಬಂದೆ.

ಅವರ ಮಾತ್ರೆಗಳ ಪ್ರಭಾವ ನಿಮಗೆ ಹೇಳಲೇಬೇಕು. ತಗೊಳ್ತಾ ಇದ್ದಿದ್ದು ಬೆಳಿಗ್ಗೆ ಮತ್ತು ರಾತ್ರಿ ಕೇವಲ ಅರ್ಧ ಮಾತ್ರೆ ಮಾತ್ರ. ಏನು ಪರಿಣಾಮ ಬೀರಿತು ಅಂತೀರಿ? ಹಗಲಿನಲ್ಲೂ ಪೊಗದಸ್ತಾದ ನಿದ್ದೆ ತರಿಸಿತು! ಸಾಲದ್ದಕ್ಕೆ ನನ್ನ ಜೀರ್ಣಾಂಗವ್ಯೂಹವನ್ನೂ ಸಂಪೂರ್ಣವಾಗಿ ಹದಗೆಡಿಸಿತು!! ಮತ್ತೆ ಕೆಮ್ಮು?? ಅದು ಇದ್ಯಾವುದಕ್ಕೂ ಹೆದರದೆ, `ನೀನಂದ್ರೆ ನಂಗೆ ತುಂಬಾ ಇಷ್ಟ ಕಣೇ' ಅನ್ನುತ್ತ ನನ್ನ ಅಮರಪ್ರೇಮಿಯೇನೋ ಎಂಬಂತೆ ಗಟ್ಟಿಯಾಗಿ ಅಂಟಿಕೊಂಡು ಕುಳಿತುಬಿಟ್ಟಿತ್ತು.

ಅವತ್ತು ನಮ್ಮ ಟೀಮ್ ಲೀಡರ್ `ಏನ್ರೀ? ನೀವು ಒಳ್ಳೆ ಮಾಧುರಿ ದೀಕ್ಷಿತ್ ಥರ ಆಗಿಬಿಟಿದ್ದೀರಿ?!' ಅಂದಾಗ ಖುಷಿಯಿಂದ ತೀರಾ ಉಬ್ಬಿಹೋಗಿ `ಯಾಕೆ ಸರ್?' ಅಂತ ಕೇಳಿದೆ. `ಅಲ್ಲ ಮತ್ತೆ? `ಹಮ್ ಆಪ್ಕೆ ಹೇ ಕೌನ್' ನಲ್ಲಿ ಮಾಧುರಿ ನಿಮ್ಮ ಹಾಗೇ ಅಲ್ವಾ ಕೆಮ್ಮುತ್ತಾ ಇದ್ದಿದ್ದು?' ಅಂತ ಅವರಂದಾಗ ಪಿಚ್ಚೆನಿಸಿದರೂ ಈ ನೆವದಲ್ಲಾದರೂ ನಾನು ಮಾಧುರಿ ದೀಕ್ಷಿತ್ ಆದ್ನಲ್ಲಾ ಅಂತ ಖುಶಿಯೇ ಆಯಿತು. ನಾನೆಲ್ಲಿ? ಅವಳೆಲ್ಲಿ?!

ಈ ವೇಳೆಗೆ ನಾನು ಮತ್ತು ನನ್ನ ಕೆಮ್ಮು ಇಬ್ಬರೂ ಸಿಕ್ಕಾಪಟ್ಟೆ ಜನಪ್ರಿಯವಾಗಿಬಿಟ್ಟಿದ್ದೆವು. ತಲೆಗೊಂದೊಂದು ಉಪಾಯ ಸಿಗುತ್ತಿತ್ತು, ಕೆಮ್ಮು ದೂರ ಮಾಡೋಕೆ. ಅನುಸರಿಸೋಕೆ ಸಾಧ್ಯವಾಗಿದ್ದನ್ನೆಲ್ಲ ಅನುಸರಿಸಿದ್ದೂ ಆಯಿತು. ಕೆಮ್ಮು ಕ್ಯಾರೇ ಅನ್ನಲಿಲ್ಲ. ಎಸಿ ತೊಂದರೆಗಳಿಗೆ ರಾಮಬಾಣ ಅನಿಸಿಕೊಂಡ ಅದೆಂಥದೋ ಆಯುರ್ವೇದದ ಹುಡಿ ಮತ್ತು ಪಿಪ್ಪಲ್ಯಾಸವ ಕಷಾಯ ತಕ್ಕ ಮಟ್ಟಿಗೆ ಕೆಮ್ಮು ನೀಗುತ್ತಿತ್ತು. ಆದರೆ ಅದರ ಪ್ರಭಾವ ಇರುತ್ತಿದ್ದುದು ಸ್ವಲ್ಪ ಸಮಯ ಮಾತ್ರ. ಕೆಮ್ಮು ಸ್ವಲ್ಪ ಹೊತ್ತು ರೆಸ್ಟ್ ತೆಗೆದುಕೊಂಡಂತೆ ಮಾಡಿ ಮತ್ತೆ ಪುನಃ `ನಿನ್ನ ತುಂಬ ಮಿಸ್ ಮಾಡಿಕೊಂಡೆ ಕಣೇ' ಎಂಬಂತೆ ನನಗೆ ಜೋತುಬೀಳುತ್ತಿತ್ತು.

ನಾನು ಹೋದಲ್ಲೆಲ್ಲ ಕೆಮ್ಮು ನನಗೆ ವಿಐಪಿ ಟ್ರೀಟ್‌ಮೆಂಟ್ ಕೊಡಿಸುತ್ತಿತ್ತಾದರೂ ನನ್ನ ಪಾಡಿಗೆ ನಾನು ಗುನುಗಿಕೊಳ್ಳಲಾಗದಂತೆ, ಸರಿಯಾಗಿ ಮಾತಾಡಲೂ ಆಗದಂತೆ ಮಾಡಿ ಸ್ವಾನುಕಂಪಕ್ಕೆ ದೂಡಿಬಿಟ್ಟಿತು. ತೆಪ್ಪಗೆ ಕುಳಿತು, ಕಷ್ಟ ಪಟ್ಟು `ಕಣ್ಣನು ಮುಚ್ಚಬಹುದು ಚಂದಮಾಮ? ಕನಸನು ಬಚ್ಚಿಡಬಹುದೆ ಚಂದಮಾಮ...' ಅಂತ ಪಾತಾಳದಾಳದಿಂದ ಬರುವ ಸ್ವರದಲ್ಲಿ ಗೊಣಗುತ್ತಿರಬೇಕಾದರೆ ಹಾಡಿನೊಂದಿಗೇ ನಾಗಾಭರಣರ `ನೀಲಾ' ನೆನಪಾದಳು. ಮಾತು ಬಾರದ (ಎಲ್ಲರಿಂದ ಪಾತಿ ಅಂತ ಕರೆಸಿಕೊಳ್ಳಲ್ಪಡುವ) ಪಾರ್ವತಿ ದೊಡ್ಡಮ್ಮನೂ ನೆನಪಾದರು. ಅವರಂತವರೆಲ್ಲ ತಮ್ಮ ಅಸಹಾಯಕತೆಯನ್ನು ಮೆಟ್ಟಿ ನಿಂತಿರುವಾಗ ನಾನೊಂದು ಯಕಶ್ಚಿತ್ ಕೆಮ್ಮಿಗೆ ಹೆದರುವುದೇ ಅಂತ ನಾಚಿಕೆಯಾಗಿ `ಛೀ ತೊಲಗಾಚೆ' ಅಂದೆ. ಅಷ್ಟಂದಿದ್ದೇ ಕೆಮ್ಮಿಗೆ ಸಿಕ್ಕಾಪಟ್ಟೆ ಅವಮಾನವಾಗಿ ಹೊರಡುವ ಸನ್ನಾಹದಲ್ಲಿದೆ! ಈಗೀಗ ತೀರಾ ನನ್ನ ನೆನಪಾದಾಗ ಮಾತ್ರ ಬರುತ್ತದಷ್ಟೇ!

ಇಷ್ಟು ಸಾಹಸ ಪಟ್ಟು (!?) ಕೆಮ್ಮನ್ನು ಓಡಿಸಿ ನನ್ನ ಸ್ವರ ಹುಡುಕಿಕೊಂಡೆನಲ್ಲ ಅಂತ ಖುಷಿಯೇನೋ ಇದೆ ತುಂಬಾ. ಒಂದೇ ಒಂದು ಬೇಜಾರು ಅಂದರೆ ಈಗ ಯಾರೂ ನನ್ನ ಮಾಧುರಿ ದೀಕ್ಷಿತ್‌ಗೆ, ರಾಣಿ ಮುಖರ್ಜಿಗೆ ಹೋಲಿಸುತ್ತಿಲ್ಲವಲ್ಲಾ ಅಂತ :-)

Monday, July 7, 2008

ಚವಣೆ ಪುರಾಣ!!


ಆವತ್ತು ಬೆಳಿಗ್ಗೆ ಅಮ್ಮ ಬೆಂಗಳೂರಿಗೆ ಬಂದಿಳಿದವಳು, ‘ಬಸ್ಸಲ್ಲಿ ಚವಣೆ (ಅರ್ಥಾತ್ ತಿಗಣೆ) ಇತ್ತೇನೋ... ರಾತ್ರಿಯೆಲ್ಲ ಏನೋ ಕಚ್ತಿತ್ತು. ತುರಿಸ್ಕೊಂಡು ಸಾಕಾಯ್ತು’ ಅನ್ನುತ್ತಿದ್ದಳು. ಅದಕ್ಕೆ ಅಪ್ಪಯ್ಯ, ‘ಚವಣೆಯಾ? ಮತ್ತೆಂತದಾ? ನೀನು ಕಿಟಕಿ ಚೂರು ಓಪನ್ ಮಾಡಿ ಕೂತ್ಕಂಡಿದ್ಯಲ್ಲ, ಸೊಳ್ಳೆ ಗಿಳ್ಳೆ ಬಂದಿಪ್ಕೂ ಸಾಕ್. ಚವಣೆ ಎಲ್ಲ ಈಗ ಎಲ್ಲಿತ್ತ್? ಅದ್ರ ಸಂತತಿಯೇ ನಾಶ ಆಯಿತ್ತೇನೋ! ನಿಂಗೆ ಭ್ರಮೆ, ಬಸ್ಸಲ್ಲಿ ಚವಣೆ ಇತ್ತಂತ’ ಅಂತ ಅಮ್ಮನ ಕಾಲೆಳೆದರು. ಅಷ್ಟರಲ್ಲಿ ನಾನು ‘ಚವಣೆ ಅಂದ್ರೆ ಹ್ಯಾಂಗಿರ್‍‍ತ್ತಮ್ಮ?’ ಅಂತ ಯಾವತ್ತಿನ ನನ್ನ ಅಜ್ಞಾನದ ಪ್ರದರ್ಶನ ಮಾಡಿಕೊಂಡೆ. ಅಮ್ಮ, ‘ಚವಣೆ ಸಾ ಕಾಣ್ಲಿಲ್ಯಾ ಮಾರಾಯ್ತಿ ನೀನು? ನೆಂಪಿನ ನಮ್ಮ ಮನೇಲಿ ಆ ಪಾಟಿ ಇದ್ದಿತ್ತಲ್ಲ?!’ ಅಂತ ಛೇಡಿಸಿ, ಚವಣೆಯ ಗುಣಲಕ್ಷಣಗಳನ್ನೆಲ್ಲ ಕಣ್ಣಿಗೆ ಕಟ್ಟುವ ಹಾಗೆ ಹೇಳಿ, ನೆಂಪಿನ ಮನೆಯಲ್ಲಿನ ಹಾಸಿಗೆ, ಹೊದೆಸ್ತ್ರ (ಹೊದೆಯುವ ವಸ್ತ್ರ), ತಲ್ದಿಂಬು(ತಲೆದಿಂಬು)ಗಳಲ್ಲಿ ಸಾಮ್ರಾಜ್ಯ ಕಟ್ಟಿಕೊಂಡಿರುತ್ತಿದ್ದ ತಿಗಣೆಗಳು, ರಾತ್ರಿಯೆಲ್ಲ ಮನೆಯವರ ರಕ್ತಹೀರುತ್ತಾ, ಒಂದೊಮ್ಮೆ ಬಿಸಿಲಿಗೆ ಹಾಕಿದ ಕೂಡಲೇ ಬುಳಬುಳನೆ ಪರಿವಾರ ಸಮೇತ ಹೊರಬರುತ್ತಿದ್ದುದನ್ನೆಲ್ಲ ನನ್ನ ಮೈಮೇಲೆ ಮುಳ್ಳೇಳುವ ಹಾಗೆ ವರ್ಣಿಸಿದಳು! ಮನೆಯೊಳಗೆ ಒಂದು ಸೇರಿಕೊಂಡರೂ ಸಾಕು, ತನ್ನ ಸಂತಾನವನ್ನು ಲಕ್ಷಗಟ್ಟಲೆ ವೃದ್ಧಿಗೊಳಿಸಿಕೊಳ್ಳುವ ಸಾಮರ್ಥ್ಯ ಇರುವಂಥದ್ದು ಅಂತ ಹೆದರಿಸಿದಳು. ಈ ವರ್ಣನೆಗಳನ್ನೆಲ್ಲ ಕೇಳಿದ ಮೇಲೆ ನನಗೆ ‘ಛೇ! ಇಂತ ಸಂತತಿ ನನ್ನ ಕಣ್ಣಿಗೆ ಬೀಳುವ ಮೊದಲೇ ಅವಸಾನ ಕಾಣಬಾರದಿತ್ತು’ ಅಂತ ಅದೇನೋ ಒಂಥರಾ ಬೇಜಾರಾಯ್ತು! ಯಾಕೋ ಕರ್ವಾಲೋ ಕೂಡ ನೆನಪಾಗಿಬಿಟ್ಟರು! ಅಷ್ಟೆಲ್ಲ ಫೀಲಿಂಗ್ ಮಾಡಿಕೊಂಡದ್ದೇ ತಪ್ಪಾಗಿಹೋಯ್ತು ಬಿಡಿ.


ಚಿಕ್ಕಂದಿನಿಂದಲೂ ನನಗೆ ರಾತ್ರಿ ಬಸ್ಸಿನಲ್ಲಿ ಬೆಂಗಳೂರಿಗೆ ಹೋಗೋದೆಂದರೆ ಇಷ್ಟ. ಬೆಂಗಳೂರಿಗೆ ಹೊರಡುವ ಒಂದು ವಾರ ಮೊದಲೇ ಶುರುವಾಗುವ ಪ್ಯಾಕಿಂಗ್, ಆ ಕತ್ತಲ ಪ್ರಯಾಣ, ಕೆ‍ಎಸ್ಸಾರ್ಟಿಸಿಯ ಹಸಿರು ಬಣ್ಣದ, ಕಲ್ಲಿನಷ್ಟು ಮೃದುವಾದ ಸೀಟುಗಳು, ಒಂದೇ ಸೀಟಿನಲ್ಲಿ ಇಬ್ಬರು ಕೂತು ವಿಂಡೋ ಸೀಟಿಗಾಗಿ ಬಡಿದಾಡೋದು, ದಾರಿಯುದ್ದಕ್ಕೂ ಕಂಗೊಳಿಸುವ ರಸ್ತೆ ದೀಪಗಳು, ದಾರಿ ಮಧ್ಯ ಬಸ್ಸು ನಿಲ್ಲಿಸಿದಾಗ ಅಪ್ಪಯ್ಯ ತಂದು ಕೊಡುವ ಹಾಲು, ಬ್ರೆಡ್ಡು, ಅರೆ ನಿದ್ದೆ, ಮಂಪರು, ರಾತ್ರಿ ಕಳೆದು ಬೆಳಕಾಗುವುದರೊಳಗೆ ಮಾಯಾನಗರಿಯನ್ನು ತಲುಪಿಸುತ್ತಿದ್ದ ಮ್ಯಾಜಿಕ್ ಬಸ್ಸು, ಪ್ರಯಾಣದ ಮರುದಿನದ ಹಗಲಿನ ಸಿಹಿನಿದ್ದೆ ಎಲ್ಲ ತುಂಬ ಖುಷಿ ಕೊಡುತ್ತಿತ್ತು. ಈ ಎಲ್ಲ ಸಂಭ್ರಮದಲ್ಲಿ ಆ ಬಸ್ಸಲ್ಲಿ ತಿಗಣೆಯೇನು, ಹೆಗ್ಗಣವೇ ಇದ್ದಿದ್ದರೂ ನನಗಂತೂ ಗೊತ್ತಾಗುತ್ತಿರಲಿಲ್ಲ.


ಆಗೆಲ್ಲ ಸಾಮಾನುಗಳನ್ನು ಸೀಟಿನ ಮೇಲಿರುತ್ತಿದ್ದ ‘ನಾಗವಂದಿಗೆ’ಯ (ಅದಕ್ಕೆ ನಿಜವಾಗಲೂ ಏನನ್ನುತ್ತಾರೋ, ನನಗಂತೂ ತಿಳಿಯದು! ನಮ್ಮೂರ ಕಡೆ ತಮಾಷೆಗಾಗಿ ಈ ಪದವೇ ಬಳಕೆಯಾಗುತ್ತದೆ) ಮೇಲೆ ತುರುಕಿ ‘ದುಡ್ಡಿನ ಚೀಲ’ಗಳನ್ನು ಮಾತ್ರ ಕೈಲಿ ಹಿಡಿದುಕೊಂಡು ಹಾಯಾಗಿರುತ್ತಿದ್ದೆವು. ಈಗಿನ ಪ್ರೈವೇಟು ಬಸ್ಸುಗಳಲ್ಲಿ ಈ ನಾಗವಂದಿಗೆಗಳೆಲ್ಲ ಸ್ಲೀಪರ್‍‍ಗಳಾಗಿ ಮಾರ್ಪಟ್ಟಿವೆ! ಮಲಗಿದವರು ಕೆಳಬೀಳದ ಹಾಗೆ ದಪ್ಪ ದಪ್ಪ ಸರಳುಗಳೇನೋ ಇವೆ. ಆದರೆ ನನ್ನಂಥವರಿಗೆ ನಿದ್ದೆ ಮಂಪರಲ್ಲಿ ಬಸ್ಸಿನ ತೂರಾಟಕ್ಕೆ ಈ ಸರಳುಗಳ ಸ್ಕ್ರೂ ಸಡಿಲಾಗಿ ಈ ಜೀವ ಇನ್ನೇನು ಕೆಳಬಿದ್ದು ಹಲ್ಲು ಮುರಿದರೇನು ಗತಿ ಅನ್ನುವ ವಿಚಿತ್ರ ಭಯ! ಜೊತೆಗೆ, ಸೀಸನ್ ಟೈಮಲ್ಲಿ ಈ ಸ್ಲೀಪರ್‍‍ಗಳು ಸಿಕ್ಕಾಪಟ್ಟೆ ರೇಟ್ ಏರಿಸಿಕೊಂಡು ಪಕ್ಕಾ ಫೋರ್‍‍ಟ್ವೆಂಟಿಗಳಾಗೋದರಿಂದ ನಾನು ಸೀಟುಗಳನ್ನ ಪ್ರಿಫರ್ ಮಾಡೋದೇ ಹೆಚ್ಚು.


ಆವತ್ತೂ ಅಷ್ಟೇ, ಗಡಿಬಿಡಿಯಲ್ಲಿ ಸೀಟ್ ರಿಸರ್ವ್ ಮಾಡಿಸಿ ಊರಿಗೆ ಹೊರಟೆ. ಬಸ್ಸು ಹತ್ತಿ ನೋಡಿದರೆ ನನ್ನಿಷ್ಟದ ವಿಂಡೋ ಸೀಟ್ ಆಗಿರಲಿಲ್ಲ. ಪಾಲಿಗೆ ಬಂದಿದ್ದು ಪಂಚಾಮೃತ ಅಂತಂದುಕೊಂಡು ಸುಮ್ಮನೆ ಕಿವಿಗೆ ಇಯರ್‍‍ಫೋನ್ ಸಿಕ್ಕಿಸಿಕೊಂಡು, ಬ್ಯಾಗನ್ನ ಕಾಲ ಮೇಲಿಟ್ಟುಕೊಂಡು ನನ್ನ ಸೀಟಲ್ಲಿ ಕೂತಿದ್ದೆ. ಅಲ್ಲೀವರೆಗೆ ಎಲ್ಲ ಸರಿಯಿತ್ತು ನೋಡಿ. ಮುಂದೊಂದು ಗಂಟೆ ಬಿಟ್ಟು ಬಸ್ ಹತ್ತಿದ ಪಕ್ಕದ ಸೀಟಿನ ಆಂಟಿ ಅದೇನು ಕಾರಣವೋ ನನ್ನ ಬಳಿ ‘ನೀನು ವಿಂಡೋ ಸೀಟಲ್ಲಿ ಕೂತ್ಕೋತಿಯಾಮ್ಮ?’ ಅಂತ ಕೇಳಿದ್ದೇ ತಡ, ನನಗೆ ಸ್ವರ್ಗಕ್ಕೆ ಮೂರೇ ಗೇಣು ಅನ್ನಿಸೋಷ್ಟು ಖುಷಿಯಾಗಿ ಈಚೆ ಬಂದೆ! ಆಮೇಲೆ ಎಲ್ಲ ಶುರುವಾಗಿದ್ದು.


ಪಿಟೀಲಿನಲ್ಲಿ ಅದ್ಭುತವಾಗಿ ಮೂಡಿಬರುತ್ತಿದ್ದ ಗೋರಖ್ ಕಲ್ಯಾಣ ರಾಗಕ್ಕೆ ಮನಸೋಲುತ್ತಿದ್ದ ಹಾಗೆ ಅದೇನೋ ತುರಿಕೆಯಾಗೋಕೆ ಶುರುವಾಯ್ತು. ಜೊತೆಗೆ ಕಾಲ ಮೇಲೆ, ಬೆನ್ನ ಮೇಲೆಲ್ಲ ಏನೋ ಹರಿಯುತ್ತಿದ್ದ ಹಾಗೆ ಬೇರೆ ಅನಿಸಿತು. ಸಂಗೀತಕ್ಕೆ ರೋಮಾಂಚನವಾಗುತ್ತಿದೆ ಅಂದುಕೊಂಡೆ! ಆದರೆ ಮಲಗೋಣ ಅಂದುಕೊಂಡು ಹಾಡು ನಿಲ್ಲಿಸಿದರೂ ಸ್ವಲ್ಪ ಹೊತ್ತು ಬಿಟ್ಟು ಮತ್ತೆ ನವೆಯಾಗೋಕೆ ತೊಡಗಿತು. ಅಮ್ಮನ ಮಾತು, ಅಪ್ಪನ ಉತ್ತರ ಎರಡೂ ನೆನಪಾಯ್ತು. ನನಗೂ ಅಪ್ಪ ಹೇಳಿದ ಹಾಗೆ ಭ್ರಮೆ ಅಂದುಕೊಂಡು ಸುಮ್ಮನಾದೆ. ರಾತ್ರಿಯಿಡೀ ಮಂಪರಲ್ಲೇ ತುರಿಸಿಕೊಂಡು ತುರಿಸಿಕೊಂಡು ಸಾಕಾಗಿ ‘ಹಾಳು ಸೊಳ್ಳೆಗಳು’ ಅಂತ ಸರಿಯಾಗಿ ಶಾಪ ಹಾಕಿದರೂ ಬೆಳಗಾಗೋ ಹೊತ್ತಿಗೆ ಚೆನ್ನಾಗೇ ಗೊರಕೆ ಹೊಡೀತಿದ್ದೆ. ಕ್ಲೀನರ್ ನಮ್ಮೂರ ಹೆಸರು ಕರೆದು ‘ಇಳಿಯೋರಿದ್ದೀರಾ?’ ಅಂತ ಅರಚಿಕೊಂಡಾಗಲೇ ಎಚ್ಚರಾಗಿದ್ದು. ಭಾರೀ ಬೇಗ ಊರು ತಲುಪಿಸಿದ ಡ್ರೈವರ್‍‍ಗೆ ಡಬಲ್ ಥ್ಯಾಂಕ್ಸ್ ಹೇಳಿ ಮನೆಗೆ ಹೋಗಿ ಬಿದ್ದುಕೊಂಡೆ.


ನಿದ್ದೆಗಣ್ಣಲ್ಲಿ ಎದುರಲ್ಲೇ ಇದ್ದ ಬ್ಯಾಗಿಂದ ಏನೋ ಹರಿದುಕೊಂಡು ಬರುತ್ತಿದ್ದ ಹಾಗನಿಸಿತು. ಒಂದಿದ್ದಿದ್ದು ಎರಡಾಯ್ತು, ನಾಲ್ಕಾಯ್ತು, ಹತ್ತಾಯ್ತು... ಪುಟ್ಟ ಜಿರಳೆಗಳಂತಿವೆ ಎಲ್ಲ... ಅಷ್ಟೇ! ... ಅಮ್ಮನ ವಿವರಣೆಗಳೆಲ್ಲ ನೆನಪಿಗೆ ಬಂದು ನಿದ್ದೆಯೆಲ್ಲ ಹಾರಿಹೋಯ್ತು... ಅವಸಾನಗೊಂಡಿದೆ ಅಂತ ನಾನು ಭ್ರಮಿಸಿಕೊಂಡಿದ್ದ ತಿಗಣೆ ಸಂತಾನ ಮನೆಗಳನ್ನು ಬಿಟ್ಟು ಬಸ್ಸಲ್ಲೇ ಮನೆ ಮಾಡಿಕೊಂಡು ಈಗ ಸಧ್ಯಕ್ಕೆ ನನ್ನ ಬ್ಯಾಗನ್ನೇ ಮನೆ ಮಾಡಿಕೊಂಡಿದೆ ಅಂತ ಜ್ಞಾನೋದಯ ಆಯ್ತು! ಒಂದೊಂದನ್ನೇ ನಿರ್ದಾಕ್ಷಿಣ್ಯವಾಗಿ ಹೊರಗೆಸೆದು ಆಮೇಲೆ ಬ್ಯಾಗಿಗೆ ಬಿಸಿ ಬಿಸಿ ಕುದಿವ ನೀರಲ್ಲಿ ಸೋಪ್‍ವಾಟರಲ್ಲಿ ಅಭ್ಯಂಜನ ಮಾಡಿಸಿ ನಿಟ್ಟುಸಿರು ಬಿಟ್ಟೆ!


‘ನಾನೂ ತಿಗಣೆ ನೋಡಿದೆ’ ಅಂತ ನನ್ನ ಗೆಳತಿಯ ಬಳಿ ಕಥೆ ಹೊಡೆದಾಗ ಅವಳು ಈ ಬಗ್ಗೆ ರೀಸರ್ಚನ್ನೇ ಮಾಡಿರೋದಾಗಿ ಹೇಳಿದಳು! ಇಂಥಾ ಕಂಪೆನಿಗಳ, ಇಂಥಾ ಕಲರಿನ, ಈ ನಂಬರಿನ ಬಸ್ಸುಗಳಲ್ಲೆಲ್ಲ ತಿಗಣೆ ಪರಿವಾರ ಇದೆ ಅಂತ ಸಂಪೂರ್ಣ ಮಾಹಿತಿ ನೀಡಿದಳು. ವಿಶೇಷ ಅಂದ್ರೆ ಬರೀ ಸೀಟುಗಳಲ್ಲಿ ಮಾತ್ರ ಇರೋದಂತೆ ತಿಗಣೆಗಳು, ಸ್ಲೀಪರ್‍‍ಗಳಲ್ಲಿ ಇಲ್ಲವಂತೆ. ‘ಬಹುಶಃ ಕೂತಿರೋರ ಮೇಲೆ ತಿಗಣೆಗಳಿಗೆ ತುಂಬಾ ಪ್ರೀತಿ ಇರ್ಬೇಕು’ ಅಂದೆ. ‘ಅಲ್ಲ ಮಾರಾಯ್ತಿ, ಸ್ಲೀಪರ್‍‍ಗಳ ಮೇಲೆ ಬಿಸಿಲು ಬೀಳುತ್ತೆ ಚೆನ್ನಾಗಿ. ಅದರೆ ಸೀಟುಗಳ ಮೇಲೆ ಸ್ಲೀಪರ್ ಬರೋದ್ರಿಂದ ಜಾಸ್ತಿ ಬಿಸಿಲು ಬೀಳಲ್ಲ. ಅದ್ಕೇ ಇರ್ಬೋದು’ ಅಂದಳು. ಏನೋ... ಸಧ್ಯಕ್ಕಂತೂ ಅವಳ ಮಾಹಿತಿಯ ಮೇರೆಗೇ ಬಸ್ ಸೀಟ್ ರಿಸರ್ವ್ ಮಾಡಿಸೋದಾಗಿದೆ. ಆದರೆ ಬಸ್ಸಿನ ಕಲರ್, ನಂಬರ್‍‍ಗಳೆಲ್ಲ ಬಸ್ಸು ಹತ್ತುವಾಗಲೇ ಗೊತ್ತಾಗುವವುಗಳಾದ್ದರಿಂದ ತಿಗಣೆಗಳಿಂದ ಸೇವೆ ಮಾಡಿಸಿಕೊಳ್ಳುವ ಭಾಗ್ಯ ಕೆಲವು ಬಾರಿಯಾದರೂ ಸಿಕ್ಕೇ ಸಿಗುತ್ತದೆ. ಆಗೆಲ್ಲ ಅವಳೇ ಹೇಳಿದ ಮುಂಜಾಗರೂಕತಾ ಕ್ರಮಗಳನ್ನ (ಕಾಲಿಗೆ ಎಣ್ಣೆ ಹಚ್ಚಿಕೊಳ್ಳೋದು ಇತ್ಯಾದಿ) ತೆಗೆದುಕೊಂಡಿರಬೇಕಾಗುತ್ತದೆ. ಮೊನ್ನೆಯೂ ಬೆಂಗಳೂರಿಂದ ಬರುವಾಗ ತಿಗಣೆಗಳ ವಿಶೇಷ ಪ್ರೀತಿ, ಮಮತೆ ಪ್ರಾಪ್ತವಾಯ್ತು. ಇಳೀಬೇಕಾದರೆ, ‘ಅಣ್ಣಾ! ನಾನು ಕೂತಿರೋ ಸೀಟಲ್ಲಿ ಕೋಟ್ಯಂತರ ತಿಗಣೆಗಳು ಮಕ್ಳೂ ಮರಿಗಳ ಸಮೇತ ಇವೆ. ಸ್ವಲ್ಪ ಚೆನ್ನಾಗಿ ಯೋಗಕ್ಷೇಮ ವಿಚಾರಿಸ್ಕೊಳ್ಳಿ ಪಾಪ’ ಅಂತ ಕ್ಲೀನರ್‍‍ಗೆ ಹೇಳಿ ಬಂದೆ. ಏನು ವಿಚಾರಿಸ್ಕೋತಾರೋ ನೋಡ್ಬೇಕು.


ಇನ್ನೊಬ್ಬ ಗೆಳತಿ, ‘ಪೀಜಿಯಲ್ಲಿ ನಮ್ಮ ಬಂಕರುಗಳಲ್ಲಿ ಬೆಡ್‍ಬಗ್ಸೂ’ ಅಂತ ಅಲವತ್ತುಕೊಳ್ಳುತ್ತಿದ್ದಳು. ಹಾಸಿಗೆಯನ್ನ ಬಿಸಿಲಿಗಿಟ್ಟು, ಮಂಚವನ್ನೇ ಬಿಸಿಲಿಗಿಟ್ಟರೂ ಹೋಗಲಿಲ್ಲವಂತೆ. ಆಮೇಲೆ ಇವರೇ ಕೂತು ಮಂಚಕ್ಕೆ ಪೆಯಿಂಟ್ ಮಾಡಿ ತಿಗಣೆಗಳಿಂದ ಮುಕ್ತರಾದರಂತೆ! ‘ಹೇಗೂ ಎಕ್ಸ್‍ಪೀರಿಯನ್ಸ್ ಇದೆಯಲ್ಲ. ರಾತ್ರಿ ಬಸ್ಸುಗಳ ಸೀಟುಗಳಿಗೆ ಬಣ್ಣ ಹಚ್ಚೋ ಕಾಂಟ್ರಾಕ್ಟ್ ತಗೋ. ಒಳ್ಳೆ ಲಾಭ ಮಾಡ್ಬೋದು. ನಮ್ಮಂಥೋರಿಗೂ ಉಪಕಾರ ಆಗುತ್ತೆ’ ಅಂತ ನಾನು ಪುಕ್ಕಟೆ ಸಲಹೆ ಕೊಟ್ಟು ಉಗಿಸಿಕೊಂಡೆ.


ಏನೇ ಇರಲಿ. ಅಳಿವಿನ ಅಂಚಿನಲ್ಲಿರೋ(?) ಸಂತತಿಯನ್ನ ಸಾಕಿ ಸಲಹುತ್ತಿರುವ ರಾತ್ರಿ ಬಸ್ಸುಗಳ ಮಾಲೀಕರನ್ನ ಮೆಚ್ಚಲೇಬೇಕು ಅಲ್ವೇ? ನೀವೇನಂತೀರಿ? :-)

Friday, May 30, 2008

ವನಸುಮ

‘ವನಸುಮದೊಳೆನ್ನ ಜೀವನವು ವಿಕಸಿಸುವಂತೆ ಮನವನನುಗೊಳಿಸು ಗುರುವೆ, ಹೇ ದೇವಾ...’

ಚಿಕ್ಕಂದಿನಿಂದ ಅಪ್ಪನ ಕಂಠದಿಂದ ಸದಾ ಕೇಳಿಸಿಕೊಳ್ಳುತ್ತಿದ್ದ ಹಾಡಿದು. ಅಪ್ಪ ಯಕ್ಷಗಾನ ಕಲೆಯಲ್ಲಿ ವಿಶೇಷ ಆಸಕ್ತಿ ಹೊಂದಿದ್ದವರಾಗಿದ್ದರಿಂದ, ವೇಷಗಾರಿಕೆ, ಭಾಗವತಿಕೆ, ಮದ್ದಲೆ ಅಂತ ಆ ಕ್ಷೇತ್ರದಲ್ಲಿ ಸ್ವಲ್ಪ ಮಟ್ಟಿಗೆ ಕೈಯಾಡಿಸಿದವರೂ ಆಗಿದ್ದರಿಂದ ಅವರು ಹಾಡುವ ಹಾಡುಗಳೆಲ್ಲ ಭಾಗವತರ ಪದಗಳಂತೆ ಇರುತ್ತವೆ ಅಂತ ನಾನು ಸದಾ ಅವರನ್ನು ಛೇಡಿಸುವುದಿದೆ. ಕೆಲವೊಮ್ಮೆ ಅವರು ಸುಮ್ಮನೆ ಶಾಸ್ತ್ರೀಯ ಹಾಡುಗಳನ್ನೋ, ಅಪ್ಪಟ ಸಿನಿಮಾ ಹಾಡುಗಳನ್ನೋ ಹಾಡುತ್ತಿದ್ದರೂ ಅದು ಯಕ್ಷಗಾನದ್ದೇ ಪದವೇನೋ ಅನ್ನಿಸುವುದಿದೆ ನನಗೆ! ಹಾಗೇ ಈ ಹಾಡನ್ನೂ ನಾನು ಬಹುಕಾಲ ಯಾವುದೋ ಯಕ್ಷಗಾನದ ಪದ ಅಂತಲೇ ಅಂದುಕೊಂಡಿದ್ದೆ.

‘ಜನಕೆ ಸಂತಸವೀವ ಘನನು ನಾನೆಂದೆಂಬ ಎಣಿಕೆ ತೋರದೆ ಜಗದ ಪೊಗಳಿಕೆಗೆ ಬಾಯ್ಬಿಡದೆ...’

ಅನ್ನುತ್ತ ಅಪ್ಪ ಆವತ್ತೊಮ್ಮೆ ಭಾವಪೂರ್ಣವಾಗಿ ಹಾಡಿಕೊಳ್ಳುತ್ತಿರಬೇಕಾದರೆ ಆ ಸಾಲುಗಳು ನನ್ನನ್ನು ಬಹುವಾಗಿ ಆಕರ್ಷಿಸಿಬಿಟ್ಟುವು. "ಯಾವ ಯಕ್ಷಗಾನದ ಹಾಡಪ್ಪಯ್ಯ ಇದು? ಒಂಥರಾ ಚೆನ್ನಾಗಿತ್ತು?" ಅಂತಲೇ ಕೇಳಿದೆನಿರಬೇಕು! ಅಪ್ಪಯ್ಯ ನಗುತ್ತ, "ಅಲ್ಲ ಮಾರಾಯ್ತಿ. ಇದು ಯಕ್ಷಗಾನದ್ದಲ್ಲ. ನನ್ನ ಚಿಕ್ಕಂದಿನಲ್ಲಿ ನನ್ನನ್ನು ತುಂಬ ಪ್ರಭಾವಿಸಿದ ಪದ್ಯ" ಅನ್ನುತ್ತ ಕವನದ ಪೂರ್ಣ ಪಾಠ ಒಪ್ಪಿಸಿ, ಅದರ ಅರ್ಥವನ್ನೂ ವಿವರಿಸಿದರು.

ವನಸುಮದೊಲೆನ್ನ ಜೀ-
ವನವು ವಿಕಸಿಸುವಂತೆ
ಮನವನನುಗೊಳಿಸು ಗುರುವೆ, ಹೇ ದೇವಾ

ಜನಕೆ ಸಂತಸವೀವ
ಘನನು ನಾನೆಂದೆಂಬ
ಎಣಿಕೆ ತೋರದೆ ಜಗದ ಪೊಗಳಿಕೆಗೆ ಬಾಯ್ ಬಿಡದೆ

ಕಾನನದಿ ಮಲ್ಲಿಗೆಯು
ಮೌನದಿಂ ಬಿರಿದು ನಿಜ
ಸೌರಭವ ಸೂಸಿ ನಲವಿಂ
ತಾನೆಲೆಯ ಪಿಂತಿರ್ದು
ದೀನತೆಯ ತೋರಿ ಅಭಿ-
ಮಾನವನು ತೊರೆದು ಕೃತಕೃತ್ಯತೆಯ ಪಡೆವಂತೆ

ಉಪಕಾರಿ ನಾನು ಎ-
ನ್ನುಪಕೃತಿಯು ಜಗಕೆಂಬ
ವಿಪರೀತ ಮತಿಯನುಳಿದು
ವಿಪುಲಾಶ್ರಯವನೀವ
ಸುಫಲ ಸುಮಭರಿತ ಪಾ-
ದಪದಂತೆ ನೈಜಮಾದೊಳ್ವಿನಿಂ ಬಾಳ್ವವೊಲು

ತಮ್ಮ ಹರೆಯದಲ್ಲಿ ಅಪ್ಪ ಅವರಮ್ಮನ ಮನೆಗೆ ಕಾಡುದಾರಿಯಲ್ಲಿ ಮೈಲುಗಟ್ಟಲೆ ಒಬ್ಬರೇ ನಡೆದುಕೊಂಡು ಹೋಗಬೇಕಾದಾಗ ಈ ಹಾಡನ್ನು ಗಟ್ಟಿಯಾಗಿ ಹಾಡಿಕೊಳ್ಳುತ್ತಿದ್ದರಂತೆ. ಈ ಹಾಡಿನ ‘ವನಸುಮ’ದಂತೆ ತಾನಾಗಬೇಕು, ತನ್ನಿಂದಾದಷ್ಟು ಕೆಲಸಗಳನ್ನು ಮಾಡಿ ನಿರಹಂಕಾರಿಯಾಗಿರಬೇಕು, ಉಪಕಾರ ಮಾಡಲಾಗದಿದ್ದರೆ ಬೇರೆಯವರಿಗೆ ಅಪಕಾರವನ್ನಾದರೂ ಮಾಡದಂತಿದ್ದು ದೀನನಾಗಿರಬೇಕು ಅನ್ನುವ ಮನೋಧರ್ಮವನ್ನು ರೂಪಿಸುತ್ತಿದ್ದ ಹಾಡು, ಅಪ್ಪನ ಕಂಚಿನ ಕಂಠದಿಂದಾಗಿ ಕಾಡುಪ್ರಾಣಿಗಳನ್ನೂ ದೂರವಿಡುತ್ತಿತ್ತಂತೆ! ಅಧ್ಯಾತ್ಮದಂಥ ಕ್ಲಿಷ್ಟ ವಿಷಯಗಳನ್ನೂ ಸರಳವಾಗಿ ವಿವರಿಸಬಲ್ಲ ಡಿ. ವಿ. ಗುಂಡಪ್ಪನಂಥವರು ಮಾತ್ರ ಇಂಥ ಅದ್ಭುತ ಹಾಡುಗಳನ್ನು ಬರೆಯಬಹುದು ಅಂತ ಷರಾ ಕೂಡ ಕೊಟ್ಟರು ಅಪ್ಪ. ನಾನೂ ನನ್ನದೇ ರಾಗದಲ್ಲಿ ಹಾಡಿಕೊಂಡು ಆ ದೀನಭಾವವನ್ನು ಅನುಭವಿಸಿದೆ.

ವಿಶೇಷ ಅಂದರೆ, ಅಪ್ಪ ಕಲಿಯುವಾಗ ೬ ನೇ ತರಗತಿಯಲ್ಲೂ, ಕಲಿಸುವಾಗ ೮ರಲ್ಲೂ ಪಠ್ಯಸಾಹಿತ್ಯವಾಗಿದ್ದ ಈ ಹಾಡು ನಾನು ಕಲಿಯುವಾಗ ಯಾವ ತರಗತಿಯಲ್ಲೂ ಇರಲೇ ಇಲ್ಲ. ಸಣ್ಣ ವಿಷಯವನ್ನೂ ಜಾಹೀರಾತು ಕೊಟ್ಟುಕೊಂಡೇ ಜಗತ್ತಿಗೆ ತಿಳಿಸಲು ಹವಣಿಸುವ ಪ್ರಚಾರಯುಗದ ನಮ್ಮ ಪೀಳಿಗೆಗೆ ಈ ಹಾಡು ಅರ್ಥವಾಗಲಾರದು ಅಂತಲೋ, ಪ್ರತ್ಯುಪಕಾರದ ನಿರೀಕ್ಷೆಯಲ್ಲೇ ಉಪಕಾರ ಮಾಡುವ ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಇಂಥ ಹಾಡು ಅಪ್ರಸ್ತುತ ಅಂತಲೋ ತೆಗೆದುಹಾಕಿರಬಹುದು ಪ್ರಾಯಶಃ.