Showing posts with label ನ್ಯಾನೋ ಕತೆ. Show all posts
Showing posts with label ನ್ಯಾನೋ ಕತೆ. Show all posts

Saturday, October 30, 2021

ಪುಟ್ಟ ಪುಟ್ಟ ಕತೆಗಳು




ಅವಳು ಅಂಗಳದಲ್ಲಿ ಬಿಡಿಸುತ್ತಿದ್ದ ಅಂದದ ರಂಗೋಲಿಯನ್ನು ನೋಡುತ್ತಿದ್ದವನಿಗೆ, ಚುಕ್ಕಿಗಳ ಮೇಲೆ ರಂಗೋಲಿಯ ಗೆರೆಗಳು ಹೇಗೆ ಸುಂದರವಾಗಿ ಅರಳುತ್ತವೆಯೋ ಅದೇ ರೀತಿ ಹಣದ ಆಧಾರದ ಮೇಲೆ ನಮ್ಮ ಜೀವನ ರೇಖೆ ಸಾಗುತ್ತದೆ ಅನಿಸಿತು. ಅದನ್ನೇ ಅವಳಿಗೂ ಹೇಳಿದ. "ಆದರೆ ಚುಕ್ಕಿಗಳೇನು ಅನಿವಾರ್ಯವಲ್ಲ. ನಾನಿವತ್ತು ಚುಕ್ಕಿಗಳನ್ನೇ ಇಟ್ಟಿಲ್ಲ. ಬರಿಯ ಎಳೆಗಳಿಂದಲೇ ರಂಗೋಲಿ ಬರೆದೆ. ನೀವು ಗಮನಿಸಲೇ ಇಲ್ಲವೆ?!" ಅನ್ನುತ್ತ ಅವಳು ನಕ್ಕುಬಿಟ್ಟಳು.



***


ಅದೇನೋ ಗಡಿಬಿಡಿಯ ಕೆಲಸ ಮಾಡುತ್ತಿದ್ದವಳ ಫೋನ್ ರಿಂಗಾಯ್ತು. ಫೋನಲ್ಲಿ ಅಮ್ಮನ ಹೆಸರು ಕಂಡಿದ್ದೇ ಯಾಕೋ ಪಿತ್ತ ನೆತ್ತಿಗೇರಿ "ಅಮ್ಮ, ಸಿಕ್ಕಾಪಟ್ಟೆ ಕೆಲಸ ಇದೆ ನಂಗೆ. ನೀನು 'ಮಗೂಗೆ ಸ್ವರ್ಣಪ್ರಾಶನ ಮಾಡಿಸು, ಪುಷ್ಯ ನಕ್ಷತ್ರ ಇವತ್ತು' ಅಂತ ನೆನಪು ಮಾಡಿಸೋಕೆ ಫೋನ್ ಮಾಡಿದ್ದಾಗಿದ್ರೆ ಫೋನ್ ಇಟ್ಟು ಬಿಡು. ನೆನಪಿದೆ ನಂಗೆ, ಕರ್ಕೊಂಡು ಹೋಗ್ತೀನಿ ಆಮೇಲೆ. ನನ್ನ ಮಗನ ಕಾಳಜಿ ಮಾಡೋಕೆ ನನಗೆ ಗೊತ್ತು..." ಅಂತ ಒಂದೇ ಉಸಿರಿಗೆ ಬಡಬಡಿಸಿದಳು. ಅಮ್ಮ ಆ ಕಡೆಯಿಂದ ತಣ್ಣಗೆ ಅಂದರು, "ಇಲ್ಲ ಕಣೇ. ದಿನಾ ತಲೆನೋವು, ಡಾಕ್ಟರ್ ಹತ್ತಿರ ಹೋಗ್ಬೇಕು ಅಂತಿದ್ಯಲ್ಲ ನೀನು? ಹೋಗಿದ್ಯಾ ಅಂತ ಕೇಳೋಕೆ ಫೋನ್ ಮಾಡಿದೆ...".

***


"ನಿಮಗೆ ಗಾಂಧೀಜಿ ಇಷ್ಟವೋ, ಭಗತ್ ಸಿಂಗನೋ?". ಬಹಳ ಕಷ್ಟದ ಪ್ರಶ್ನೆ. ನಾನೆಂದೆ, "ನಿಮಗೆ ಆನೆಪಟಾಕಿ ಇಷ್ಟವೋ, ನಕ್ಷತ್ರ ಕಡ್ಡಿಯೋ?"

***


ಅದ್ಯಾರು ಯಾಕೆ ಗಂಟು ಹಾಕಿದರೋ? ನನ್ನದೂ, ನನ್ನ ಹೆಂಡತಿಯದೂ ಎಲ್ಲದರಲ್ಲೂ ಪರಸ್ಪರ ವಿರುದ್ಧ ದಿಕ್ಕು. ನಾನು ಕಾಫಿಯಾದರೆ ಅವಳು ಟೀ. ಅವಳಿಗೆ ಸಿಹಿ ಇಷ್ಟ, ನನಗೋ ಖಾರವೇ ಪ್ರಧಾನ. ಅವಳದು ಆಧುನಿಕ ವಿಚಾರಧಾರೆಯಾದರೆ ನಾನಿನ್ನೂ ಅವಳಿಗೆ ಹೋಲಿಸಿದರೆ ಹಳೆಯ ಕಾಲದವನೇ. ಆಕೆ ನನ್ನಷ್ಟು ಓದಿಕೊಂಡಿರದಿದ್ದರೂ ಗೊತ್ತಿರುವುದನ್ನು ಅದ್ಭುತವಾಗಿ ಪ್ರಸ್ತುತ ಪಡಿಸುತ್ತಾಳೆ. ನನಗೋ ಅದ್ಭುತವೆನಿಸುವ ವಿಷಯಗಳೆಷ್ಟೋ ಗೊತ್ತಿದ್ದರೂ ಅದರ ಬಗ್ಗೆ ಚೆನ್ನಾಗಿ ಹೇಳಲಾರೆ. ಆದರೆ ಆಕೆ ಅದು ಹೇಗೋ ನನ್ನ ಬಾಯಿ ಬಿಡಿಸಿ ನನ್ನ ವಿಚಾರಗಳನ್ನೇ ಪೋಣಿಸಿ ಬರೆದ ಕಾದಂಬರಿ ಎಲ್ಲರ ಮೆಚ್ಚುಗೆಗೂ ಪಾತ್ರವಾಗಿ ನಮ್ಮಿಬ್ಬರ ಮೇಲೆ ಪ್ರಶಂಸೆಯ ಸುರಿಮಳೆಯೇ ಹರಿಯಿತು. ಯಾಕೆ ನಮ್ಮಿಬ್ಬರನ್ನು ಒಂದುಗೂಡಿಸಿರಬಹುದು ಅನ್ನುವ ಪ್ರಶ್ನೆಗೆ ಹೀಗೆ ಉತ್ತರ ಸಿಕ್ಕ ಮೇಲೆ ನಮ್ಮ ಬದುಕು ಸುಂದರ ಪ್ರೇಮಕಾವ್ಯವಾಯ್ತು.

***


ಮುದ್ದು ಮಾಡಿ, ಯಾಮಾರಿಸಿ, ಹೆದರಿಸಿ ಬೆದರಿಸಿ ಎಷ್ಟು ಕತೆ ಹೇಳಿದರೂ ೩ ವರ್ಷದ ಮಗ ಊಟ ಮಾಡುತ್ತಿಲ್ಲ. ಅವಳ ಸಿಟ್ಟು ತಾರಕಕ್ಕೇರಿ ನಾಲ್ಕೇಟು ಬಿಗಿದವಳು, ಅವ ಸೂರು ಕಿತ್ತುಹೋಗುವ ಹಾಗೆ ಕಿರುಚಿಕೊಂಡ ತಪ್ಪಿಗೆ ಮೇಲೆರಡು ಹೇರಿ ದುಸುಮುಸು ಅನ್ನುತ್ತ ರೂಮಿಗೆ ಬಂದುಬಿಟ್ಟಳು. ೨ ನಿಮಿಷ ತನ್ನಷ್ಟಕ್ಕೆ ಅತ್ತ ಅವ ಅಮ್ಮನೇ ಹೊಡೆದಿದ್ದು ಅಂತ ಗೊತ್ತಿದ್ದರೂ "ಅಮ್ಮಾ.... ಎತ್ಕೋ.... ನಾ ಮಮ್ಮಮ್ ಮಾತೀನಿ" ಅನ್ನುತ್ತ ಮತ್ತೆ ಅಮ್ಮನ ಬಳಿಯೇ ಬಂದಾಗ ಅವಳ ಹೃದಯ ಅವನ ಅಳುಗಣ್ಣಿನಷ್ಟೇ ಪರಿಶುದ್ಧವಾಗಿಬಿಟ್ಟಿತು.

***


"ಬೆಳಿಗ್ಗೆ ಬೇಗ ಎಬ್ಬಿಸಿ 'ತಡವಾಗುತ್ತೆ, ಬೇಗ ಎದ್ದು ತಿಂಡಿ ಮಾಡಿಕೊಡೇ' ಅಂದರೆ 'ರಾತ್ರಿಯೆಲ್ಲ ಆಫೀಸ್ ಕೆಲಸ ಮಾಡಿ ಲೇಟಾಗಿ ಮಲಗಿದ್ದೀನಿ. ಕರುಣೆನೇ ಇಲ್ದೆ ದೂಡಿ ದೂಡಿ ಎಬ್ಬಿಸ್ತೀರ, ನಿದ್ದೆ ಮಾಡೋಕೇ ಬಿಡಲ್ಲ' ಅಂತ ದಿನವೆಲ್ಲ ಗೊಣಗಾಡುತ್ತೀಯ. ಹಾಗಂತ ಹೋಗ್ಲಿ ಪಾಪ ಮಲಕ್ಕೊಳ್ಲಿ ಅಂತ ತಿಂಡಿ ತಿನ್ನದೇ ಹೋದರೆ 'ಯಾಕೆ ನನ್ನ ಬೇಗ ಎಬ್ಬಿಸಿಲ್ಲ? ತಿಂಡಿ ಮಾಡ್ಕೊಡ್ತಿರ್ಲಿಲ್ವಾ?' ಅಂತ ಅದಕ್ಕೂ ನನ್ನನ್ನೇ ಬಯ್ಯುತ್ತೀಯ. ಹಾಗೆ ಮಾಡಿದರೂ ತಪ್ಪು, ಹೀಗೆ ಮಾಡಿದರೂ ತಪ್ಪು ಅಂದರೆ ಬಡಪಾಯಿ ನಾನೇನು ಮಾಡಬೇಕು ನೀನೇ ಹೇಳು..." ಅವನು ಅಲವತ್ತುಕೊಂಡ. ಅವಳಿಗೂ ಹೌದಲ್ಲವೆ ಅನಿಸಿ ನಗು ಬಂದು ಲಲ್ಲೆಗರೆಯುತ್ತ ಹೇಳಿದಳು, "ನಾನೇನು ಮಾಡಲಿ ಹೇಳಿ? ನೀವು ಬೆಳಗಿನ ಸುಖನಿದ್ದೆಯಿಂದ ಎಬ್ಬಿಸಿದಾಗ ಕಷ್ಟವಾಗೋದು ನಿಜ. ಆದರೆ ನೀವಿನ್ನೂ ಹಸಿದುಕೊಂಡಿದ್ದೀರಿ ಅಂತ ಗೊತ್ತಾದಾಗ ನನ್ನ ಹೊಟ್ಟೆಯಲ್ಲೂ ಸಂಕಟವಾಗುತ್ತೆ..."

***

Thursday, November 24, 2011

ಪುಟ್ಟ ಪುಟ್ಟ ಕತೆಗಳು

ತಿಂಗಳ ಹಿಂದಷ್ಟೇ ಅಜ್ಜನನ್ನ ಕಳೆದುಕೊಂಡ ಅಜ್ಜಿಯ ಬೋಳುಹಣೆ ನೋಡಲಾಗದೆ ಪುಟ್ಟ ಕಪ್ಪು ಸ್ಟಿಕ್ಕರ್ ಅವರ ಹಣೆಗಿಟ್ಟ ಮೊಮ್ಮಗಳು 'ಆಹಾ, ಈಗ ಚೆಂದ ಕಾಣ್ತಾರೆ ಅಜ್ಜಿ' ಎಂದು ಸಂಭ್ರಮಿಸುತ್ತಿರಬೇಕಾದರೆ ಅಜ್ಜಿಯ ಕಂಗಳಿಂದ ಜಾರುತ್ತಿದ್ದ ಹನಿಯೊಂದಕ್ಕೆ "ತಾನು ಹುಟ್ಟಿದ್ದೇಕೆ? ಪುಟ್ಟಿಯ ಖುಷಿ ಕಂಡ ಆನಂದಕ್ಕೋ ಅಥವಾ ಇನ್ನೆಂದೂ ಹಣೆ ತುಂಬ ದೊಡ್ಡ ಕುಂಕುಮ ಇಡಲಾಗದ ಅಜ್ಜಿಯ ದುಃಖಕ್ಕೋ?" ಅನ್ನೋ ಗೊಂದಲ.

**********

"ನನ್ಮಗ್ಳು ಹುಟ್ಟಿದ್ವರ್ಷ ಜೀವನ ನಡೆಸೋಕೆ ಕೈಲಿ ಮಚ್ಚು ಹಿಡೀಬೇಕಾಯ್ತು. ಈಗವಳಿಗೆ ಹತ್ನೇ ಕ್ಲಾಸು ಓದಿಸ್ತಿದ್ದೀನಿ" - ರಸ್ತೆಬದಿಯಲ್ಲಿ ಎಳನೀರು ಮಾರುವ ಹೆಂಗಸು ಹೆಮ್ಮೆಯಿಂದ ಹೇಳಿದ್ದು "ಕೈ ಜೋಪಾನಾಮ್ಮ" ಅಂತ ಕಾಳಜಿ ತೋರಿದ ತಾತಪ್ಪನಿಗೆ.

**********

ಚಲಿಸುತ್ತಿದ್ದ ಕಾರಿನ ಬಾಗಿಲು ಅಚಾನಕ್ ಆಗಿ ಓಪನ್ ಆಗಿ ಸ್ಕೂಟರಲ್ಲಿ ಬರುತ್ತಿದ್ದ ಮಧ್ಯವಯಸ್ಕ ಗಂಡ ಹೆಂಡತಿಗೆ ಡಿಕ್ಕಿ ಹೊಡೆದ ಪರಿಣಾಮ ಹೆಂಡತಿ ಕೆಳಬಿದ್ದರು. ಮಂಡಿಗೆ ಪೆಟ್ಟಾಗಿ ಏಳಲಾಗದೆ ಬಿದ್ದಿದ್ದ ಹೆಂಡತಿಯನ್ನು ಎಬ್ಬಿಸ ಹೋದ ಗಂಡನನ್ನು ಬಿಡದೆ ತಡೆಯುತ್ತಾ ಆಕೆ ಕಾರಿನಲ್ಲಿದ್ದವರ ಬಳಿ ಕೂಗಿ ಅಂದಳು "ನನ್ನ ಗಂಡನ್ನ ನನ್ನ ಎತ್ತೋಕೆ ಬಿಡ್ಬೇಡಿ ಸಾರ್! ನೀವೇ ಯಾರಾದ್ರು ಬನ್ನಿ". ಕಾರಿನಲ್ಲಿದ್ದವರೆಲ್ಲ 'ಇದೇನಪ್ಪ ವರಸೆ! ಗಂಡ ಹೆಂಡತಿ ಜಗಳ ಮಾಡಿಕೊಂಡು ಬಂದಿದಾರೇನೋ' ಅಂದುಕೊಳ್ಳುತ್ತಿರುವಾಗಲೇ ಆಕೆ ಮತ್ತೆ ಅಂದಳು "ನಿಮ್ಮ ದಮ್ಮಯ್ಯ.. ನನ್ನ ಗಂಡನ್ನ ನನ್ನ ಎತ್ತೋಕೆ ಬಿಡ್ಬೇಡಿ ಸಾರ್.. ಆತ ಹಾರ್ಟ್ ಪೇಷೆಂಟ್!". ಈ ಮಾತು ಕೇಳಿದ್ದೇ ದಡಬಡನೆ ಕಾರಿಂದ ಇಳಿದು ಆ ಮಹಿಳೆಯನ್ನು ಎತ್ತ ಬಂದ ಸಿದ್ದುಗೆ ತನ್ನ ಹೊಸ ಸಂಗಾತಿ ನೆನಪಾಗಿ ಕಿವಿಯಲ್ಲಿ ಒಂದೇ ಹಾಡು ರಿಂಗಣಿಸುತ್ತಿತ್ತು ... 'ಆ..ದರ್ರು ಪ್ರೇಮಕ್ಕೆ ಮೈಲೇಜು ಕಮ್ಮಿ.. ಸೆಲ್.....ಫೋನು ಬಂದ್ಮೇಲೆ ಹಿಂಗಾಯ್ತು ಸ್ವಾಮಿ....'

**********

"ಅಯೋಧ್ಯೆ ತೀರ್ಪು ಹಿನ್ನೆಲೆಯಲ್ಲಿ ನಿಷೇಧಾಜ್ಞೆ, ಶಾಲಾ ಕಾಲೇಜುಗಳಿಗೆ ರಜೆ, ಹಲವಾರು ಕಾರ್ಪೋರೇಟ್ ಕಂಪನಿಗಳಿಗೂ ಮುನ್ನೆಚ್ಚರಿಕಾ ಕ್ರಮವಾಗಿ ರಜೆ..." ಎಲ್ಲ ಟಿ.ವಿ. ಚಾನೆಲ್^ಗಳಲ್ಲೂ ಇದೇ ವರದಿಗಳನ್ನ ಕೇಳಿ ಗೊಣಗಿಕೊಂಡೆ, "ಎಲ್ಲ ಕಡೆ ರಜೆ ಕೊಟ್ರೂ ನಮ್ಮ ಕಂಪೆನಿಗೆ ಕೊಡೋದೇ ಇಲ್ಲ. ಏನಾದ್ರು ಗಲಾಟೆ ಆದ್ರೆ ಕೊಡ್ಬೋದೋ ಏನೋ!!"
ರಾಕ್ಷಸ ಬೇರೆಲ್ಲೋ, ಗಲಾಟೆಗಳಾಗುವಲ್ಲಿ ಮಾತ್ರ ಇರುವುದಲ್ಲ. ಸ್ವಾರ್ಥಕ್ಕೋಸ್ಕರ ಕೆಟ್ಟದ್ದನ್ನೇ ಅಪೇಕ್ಷಿಸುವ ನನ್ನಂಥವರ ಮನದೊಳಗೂ ಇದ್ದಾನಲ್ಲ.

**********

"ಚಟ್ನಿ ಖಾರ ಇದೆಯಾ ಪುಟ್ಟೀ?, ಸಕ್ಕರೆ ಹಾಕ್ಕೊಂಡು ತಿಂತೀಯಾ ಇಡ್ಲಿಗೆ? ತರಿಸಲಾ?" ಅಪ್ಪ ಕೇಳಿದಾಗ, "ಅಯ್ಯೋ ಸ್ವಲ್ಪ ಸುಮ್ನಿರೀಪ್ಪ. ಏನೂ ಬೇಡ" ಅಂತ ರೇಗಿದ ಮಗಳು ಪಕ್ಕದಲ್ಲೇ ತನ್ನ ಪಾಡಿಗೆ ತಾನು ಇಡ್ಲಿ-ಚಟ್ನಿ ಮೆಲ್ಲುತ್ತಿದ್ದ ಗಂಡನನ್ನ ತಿವಿಯುತ್ತ, "ನಿಮಗೆ ನನ್ನ ಮೇಲೆ ಸ್ವಲ್ಪವೂ ಪ್ರೀತಿ ಇಲ್ಲ. ಮದ್ವೆ ಆಗಿ ಒಂದು ವರ್ಷ ಆದ್ರೂ, ನಮ್ಮಪ್ಪಂಗೆ ಗೊತ್ತಾಗೋ ಸೂಕ್ಷ್ಮ ನಿಮಗೆ ಗೊತ್ತಾಗಲ್ಲ?!" ಅಂದಳು. ಅವಳ ಬಡಪಾಯಿ ಗಂಡ, "ಅಬ್ಬಾ! ಜನ ಎಷ್ಟೊಂದು ಬಗೆಯಲ್ಲಿ ಪ್ರೀತಿ ತೋರಿಸುತ್ತಾರಪ್ಪಾ! ನಾನಿನ್ನೂ ಪ್ರೀತಿ ಮಾಡೋದರಲ್ಲಿ LKG-ಲಿ ಇದ್ದೀನೇನೋ" ಅಂತ ಮೆತ್ತಗೆ ಗೊಣಗಿಕೊಂಡ.

**********

ಸಣ್ಣ ಹಳ್ಳಿಯ ಪುಟ್ಟ ಅಂಗಡಿಯೊಂದರ ಮುಂದೆ ತನ್ನ ದೊಡ್ಡ ಕಾರು ನಿಲ್ಲಿಸಿದ ಸಿದ್ದು ಕಾರಿನೊಳಗಿದ್ದವರಿಗೆಲ್ಲ ಎಳನೀರು ಆರ್ಡರ್ ಮಾಡಿದ. ಅಂಗಡಿಯಾತ ತನ್ನ ಹೆಂಡತಿಯ ಬಳಿ ಆ ಮೊದಲೇ ಬಂದಿದ್ದ ಗಿರಾಕಿಗೆ ಸಾಮಾನು ಕೊಡಲು ಹೇಳಿ ಹೊರಬಂದು ಎಳನೀರು ಕೆತ್ತಿ ಕೊಡುವುದರಲ್ಲಿ ಮಗ್ನನಾದ. ಎಲ್ಲ ಮುಗಿಸಿ ಮತ್ತೆ ಅಂಗಡಿಯೊಳಕ್ಕೆ ಹೋದಾಗ ಹೆಂಡತಿ ದುಡ್ಡು ಕೊಟ್ಟು ಹೋದ ಗಿರಾಕಿಯ ಲೆಕ್ಕ ಒಪ್ಪಿಸಿದಳು. "ಅಯ್ಯೋ 10 kg ಅಕ್ಕಿಯ ಹಣ ತಗೊಂಡೇ ಇಲ್ಲವಲ್ಲ!?" ಎಂದು ಸಿಟ್ಟಿಂದ ಬೈದ ಗಂಡ ಆ ಗಿರಾಕಿ ಸಿಗುತ್ತಾನೇನೋ ನೋಡಲು ಓಡೋಡಿ ಹೊರ ಬಂದ. ಆ ಗಡಿಬಿಡಿಯಲ್ಲಿ ಅಲ್ಲೇ ಕಾಲ್ಬುಡದಲ್ಲಿ ಆಡುತ್ತಿದ್ದ ತನ್ನ ಸಣ್ಣ ಮಗನ ಪುಸ್ತಕ ಬೀಳಿಸಿದ್ದನ್ನು ಅವ ಗಮನಿಸಲಿಲ್ಲ. ಸೋತ ಮುಖ ಮಾಡಿಕೊಂಡು ವಾಪಸು ಬಂದವನ ಬಳಿ ಆ ಮಗು "ನನ್ನ ಪುಸ್ತ್ಕ ಬೀಳಿಸಿದ್ಯಾಕೆ ನೀನು?" ಅಂತ ಅಳುಮುಖ ಮಾಡಿತು. ಅದನ್ನು ಲೆಕ್ಕಿಸದೆ "ಅವನ್ನ ಕಳಿಸೋಕೆ ಮುಂಚೆ ನನ್ನತ್ರ ಕೇಳೋಕೆ ಆಗ್ಲಿಲ್ವಾ ನಿಂಗೆ?" ಅಂತ ಹೆಂಡತಿಗೆ ಗದರುತ್ತ ಒಳ ಬಂದವನ ಮುಂದೆ ಸಿದ್ದು 1000 ರೂಪಾಯಿಯ ನೋಟು ಹಿಡಿದ. ಮಗು ಮತ್ತೂ ಬಿಡದೆ ಅವನ ಹಿಂದೆಯೇ ಬಂದು "ನನ್ನ ಪುಸ್ತ್ಕ ಯಾಕೆ ಬೀಳಿಸಿದಿ ನೀನು ಹೇಳು.. ಹೇಳು... ಹೇಳೂ... " ಅನ್ನುತ್ತಾ ಅಪ್ಪನಿಗೆ ತನ್ನ ಪುಟ್ಟ ಕೈಗಳಿಂದ ಹೊಡೆಯಲು ಮುಂದಾಯ್ತು. ಈ ಎಲ್ಲ ನಾಟಕ ನೋಡುತ್ತಿದ್ದ ಸಿದ್ದು, ಸುಮಾರು 250 ರೂಪಾಯಿ ಪಂಗನಾಮ ಹಾಕಿ ಹೋದ ಗಿರಾಕಿಯ ಮೇಲಿನ ಸಿಟ್ಟು, ಹೆಂಡತಿಯ ಮೇಲಿನ ಸಿಟ್ಟು, ಅಂಗಡಿಗೆ ಬಂದ ಬೇರೆ ಗಿರಾಕಿಗಳ ಪುಕ್ಕಟೆ ಸಜೆಷನ್, ಇದರ ಜೊತೆಗೆ ತಾನು ಕೊಟ್ಟ ದೊಡ್ಡ ನೋಟಿಗೆ ಚಿಲ್ಲರೆ ಹುಡುಕಬೇಕಾದ ಟೆನ್ಷನ್ ಎಲ್ಲ ಸೇರಿಕೊಂಡು ಅಂಗಡಿಯಾತ ರಗಳೆ ಮಾಡುತ್ತಿರುವ ಮಗನಿಗೆ ಧರ್ಮದೇಟು ನೀಡೋದು ಗ್ಯಾರಂಟಿ ಅಂದುಕೊಂಡು ಮೀಸೆಯಡಿ ಮುಸಿ ನಗೋಕೆ ಶುರು ಮಾಡಿದ. ಆದರೆ ಅವನ ನಿರೀಕ್ಷೆ ಹುಸಿಯಾಗುವಂತೆ ಅಂಗಡಿಯಾತ ಪರಮ ತಾಳ್ಮೆಯಿಂದ "ನಾನು ನೋಡ್ಲಿಲ್ಲ ಪುಟ್ಟಾ ಸಾರಿ" ಅಂದಿದ್ದು ಕೇಳಿ ಸಿದ್ದುವಿನ ಕಣ್ಣು ಅರಿವಿಲ್ಲದೆ ಹನಿಗೂಡಿತು.

**********