ಮುಂಜಾವದಲಿ ಹಸಿರು ಹುಲ್ಲು ಮಕಮಲ್ಲಿನಲಿ ಪಾರಿಜಾತವು ಹೂವ ಸುರಿಸಿದಂತೆ... ನಾವು ಆಡುವ ಮಾತು ಹೀಗಿರಲಿ ಗೆಳೆಯಾ...
Thursday, September 9, 2010
ವಿಚಿತ್ರ ಬಂಧಗಳು
ಈ ಬೆಂಗಳೂರಿಗೆ ವಲಸೆ ಬಂದ ಮೇಲೆ ನನ್ನ ಡ್ರೆಸ್ಗಳನ್ನ ಹೊಲಿಸೋದೇ ದೊಡ್ಡ ಸಮಸ್ಯೆಯಾಗಿಬಿಟ್ಟಿದೆ. ಇಲ್ಲೇನೂ ದರ್ಜಿಗಳ ಕೊರತೆಯಿಲ್ಲ ಬಿಡಿ. ಗಲ್ಲಿ ಗಲ್ಲಿಗಳಲ್ಲಿ ರಾಶಿ ತುಂಬಿಕೊಂಡಿರುವ ಮತ್ತೆಲ್ಲ ಅಂಗಡಿಗಳೊಂದಿಗೆ ಟೈಲರ್ಸ್ ಶಾಪ್ಗಳೂ ಹೇರಳವಾಗಿ ಕಾಣಸಿಗುತ್ತವೆ. ನಮ್ಮ ಮನೆ ಹತ್ತಿರವೇ ಕನಿಷ್ಟ ೪-೫ ಜನ ಆದರೂ ಲೇಡೀಸ್ ಟೈಲರ್ಸ್ಗಳಿದ್ದಾರೆ. ಸಮಸ್ಯೆ ಅದಲ್ಲ. ನಾನು ಖಾಯಂ ಬಟ್ಟೆ ಹೊಲಿಸುವ ನನ್ನೂರಿನ ದರ್ಜಿ ಇಲ್ಲಿಲ್ಲದಿರುವುದೇ ದೊಡ್ಡ ಸಮಸ್ಯೆ! ಊರಲ್ಲಿಯೂ ಹಲವಾರು ಜನ ದರ್ಜಿಗಳಿದ್ದರೂ, ಅವರಲ್ಲಿ ಕೆಲವರು ಇವನಿಗಿಂತ ಚೆನ್ನಾಗಿ, ಕಡಿಮೆ ದರದಲ್ಲಿ ಹೊಲಿದು ಕೊಡುವವರಾದರೂ ನನ್ನ ಮಟ್ಟಿಗೆ ಇವನೊಬ್ಬನೇ ಟೈಲರ್. ಹಾಗಂತ ಅವ ಮಹಾನ್ ಫ್ಯಾಶನ್ ಡಿಸೈನರ್ ಏನೂ ಅಲ್ಲ. ಮಾಮೂಲಿ ಎಲ್ಲ ಲೇಡೀಸ್ ಟೈಲರ್ಸ್ಗಳಂತೆ ಬಟ್ಟೆಗಳನ್ನು ನಾವು ಹೇಳಿದ ರೀತಿಯಲ್ಲಿ ಹೊಲಿದು ಕೊಡುತ್ತಾನೆ ಅಷ್ಟೆ. ಅವನ ಅಂಗಡಿಯಲ್ಲಿ ಥಳ ಥಳ ಹೊಳೆಯುವ ಟೈಲ್ಸ್ಗಳೋ, ಫಳ ಫಳ ಮಿಂಚುವ ಗೋಡೆಗಳೋ, ಕಣ್ಸೆಳೆಯುವ ಭಿತ್ತಿ ಚಿತ್ರಗಳೋ ಒಂದೂ ಇಲ್ಲ. ಅದೊಂದು ಯಕಶ್ಚಿತ್ ಅಂಗಡಿ. ಟ್ರಾಯಲ್ ರೂಮ್, ಮಣ್ಣು-ಮಸಿ ಅಂತೆಲ್ಲ ದೊಡ್ಡ ದೊಡ್ಡ ಬೋಟಿಕ್ಗಳಲ್ಲಿರುವ ಆಕರ್ಷಣೆಗಳೊಂದೂ ಅಲ್ಲಿಲ್ಲ. ರೇಟ್ ಕೂಡ ಅಂಥಾ ಕಮ್ಮಿ ಅಂತೇನಿಲ್ಲ. ಅಥವಾ ನಾನು ಅವನ ಅಂಗಡಿಯ ಖಾಯಂ ಗಿರಾಕಿ ಅಂತ ಅವನೇನು ನಂಗೋಸ್ಕರ ನಯಾಪೈಸೆಯೂ ಕಡಿಮೆ ಮಾಡೋದಿಲ್ಲ ಪುಣ್ಯಾತ್ಮ! ಹೋಗಲಿ ಅಂದರೆ, ಬಟ್ಟೆ ತೀರಾ ಬೇಗ ಹೊಲಿದು ಕೊಡೋದೂ ಇಲ್ಲ ಅವನು. ಸೀಸನ್ ಟೈಮಲ್ಲಂತೂ ಒಂದು ಡ್ರೆಸ್ ಹೊಲಿದು ಕೊಡಲಿಕ್ಕೂ ಅವನಿಗೆ ಮಿನಿಮಮ್ ಮೂರು ವಾರ ಬೇಕು. ಸ್ವಲ್ಪ ಬೇಗ ಕೊಡಲಿಕ್ಕೆ ಆಗುತ್ತಾ ಅಂತ ನಾನು ಹೆದರಿ ಹೆದರಿ ಕೇಳಿದರೆ ಕಣ್ಣೆಲ್ಲ ಕೆಂಪು ಮಾಡಿಕೊಂಡು ಬಯ್ಯೋದಕ್ಕೂ ರೆಡಿ ಆಸಾಮಿ! ಇಷ್ಟೆಲ್ಲ ಆದರೂ ನನ್ನ ಬಟ್ಟೆಗಳನ್ನ ಹೊಲಿಯುವುದಕ್ಕೆ ಅವನೇ ಬೇಕು ನನಗೆ. ಅವನಲ್ಲಿಗೇ ಯಾಕೆ ಹೋಗಬೇಕು, ಬೇರೆ ಕಡೆ ಯಾಕೆ ಹೋಗಬಾರದು ಅನ್ನುವುದಕ್ಕೆ ನನ್ನ ಬಳಿ ಯಾವ ಸೂಕ್ತ ಕಾರಣಗಳಿಲ್ಲದಿದ್ದರೂ ಅವನ ಅಂಗಡಿಯ ಬಗ್ಗೆ ನನ್ನ ಗೆಳತಿಯರಲ್ಲೆಲ್ಲಾ ಶಿಫಾರಸು ಮಾಡುತ್ತೇನೆ. ಅವನು ಹೊಲಿದದ್ದು ಎಲ್ಲೋ ಸ್ವಲ್ಪ ಎಡವಟ್ಟಾಗಿದೆ ಅಂತ ಮನಸಿನ ಮೂಲೆಯಲ್ಲೆಲ್ಲೋ ನನಗೇ ಅನಿಸಿದರೂ ‘ಹೇ ಇಲ್ಲ ತುಂಬ ಚೆನ್ನಾಗಿದೆ. ಇದು ಹೊಸ ಫ್ಯಾಷನ್ ಅಲ್ವಾ?’ ಅಂತ ನನಗೆ ನಾನೇ ಸಮಾಧಾನ ಮಾಡಿಕೊಳ್ಳುತ್ತ ಅದೇ ಅಭಿಪ್ರಾಯವನ್ನು ನನ್ನ ಡ್ರೆಸ್ ಬಗ್ಗೆ ಕಮೆಂಟ್ ಮಾಡಿದವರ ಮೇಲೂ ಹೇರಿ ಬಾಯಿ ಮುಚ್ಚಿಸಿ ಬಿಡುತ್ತೇನೆ. ಅವನ ಅಂಗಡಿಗೆ ಹೋದರೆ ಕನಿಷ್ಟ ಪಕ್ಷ ಒಂದು ಸೌಜನ್ಯದ ನಗೆಯನ್ನಾದರೂ ಬೀರದ ಅವನನ್ನ ನಾನು ಈ ಪರಿ ಹಚ್ಚಿಕೊಂಡಿರುವುದನ್ನ ಎಣಿಸಿಕೊಂಡರೆ ನನಗೇ ಆಶ್ಚರ್ಯ ಅನಿಸುತ್ತೆ.
ಇವರಿಬ್ಬರೇ ಅಂತಲ್ಲ. ಬೆಂಗಳೂರಿಗೆ ಬಂದು ಮಿಸ್ ಮಾಡಿಕೊಳ್ಳುತ್ತಿರೋದು ಇಂಥಾ ಹಲವರನ್ನ. ಅವರೇನೂ ನನ್ನ ಸಹಪಾಠಿಗಳಲ್ಲ, ಒಡನಾಡಿಗಳಲ್ಲ, ಸಂಬಂಧಿಗಳಲ್ಲ. ಅಸಲಿಗೆ ನನ್ನ ಅವರೊಂದಿಗಿನ ಕೆಲಸದ ಹೊರತಾಗಿ ನನಗೆ ಅವರ ಹೆಸರನ್ನೂ ಒಳಗೊಂಡಂತೆ ಅವರ ಬಗೆಗಿನ ಯಾವ ವೈಯಕ್ತಿಕ ವಿವರಗಳೂ ಗೊತ್ತಿಲ್ಲ. ಹೀಗಿದ್ದೂ ಅವರೊಂದಿಗೆ ಅದೆಂಥಾ ವಿಚಿತ್ರ ಬಂಧ ಏರ್ಪಟ್ಟು ಬಿಟ್ಟಿದೆ ಅಂದರೆ ಅವರನ್ನ ಆಗಾಗ ನೆನಪು ಮಾಡಿಕೊಳ್ಳುವಷ್ಟು. ನನ್ನ ಪ್ರೈಮರಿ ಶಾಲೆಯ ಪಕ್ಕ ಚಾಕ್ಲೇಟ್, ಬೋಟಿ, ನಾಕಾಣೆಯ ಹುಳ ಹಿಡಿದ ಉಪ್ಪಿನಕಾಯಿ ಪ್ಯಾಕೆಟ್ ಇತ್ಯಾದಿಗಳನ್ನು ಮಾರುತ್ತಿದ್ದ, ಸಾಯಿಬಾಬಾ ಥರ ಕೂದಲಿದ್ದ ವಾಸಣ್ಣ, ಪದೇ ಪದೇ ಕಿತ್ತೋಗುವ ನನ್ನ ಚಪ್ಪಲಿಗಳನ್ನು ಹೊಲಿಸುತ್ತಿದ್ದ ಅಂಗಡಿಯಾತ, ಕಾಲೇಜಿನ ಫಿಸಿಕ್ಸ್ ಲ್ಯಾಬಲ್ಲಿ ಸದಾ ನನ್ನ ಸಹಾಯಕ್ಕೆ ಬರುತ್ತಿದ್ದ ಲ್ಯಾಬ್ ಅಟೆಂಡರ್, ಹೆಚ್ಚು ಮಾತೇ ಆಡದೆ ಒಟ್ಟಿಗೆ ಕ್ಲೀನಿಂಗ್ ಕೆಲಸ ಮಾಡುತ್ತಿದ್ದ ಕುಳ್ಳ-ಕುಳ್ಳಿ ದಂಪತಿ ಜೋಡಿ, ಫ್ಯಾನ್ಸಿ ಸ್ಟೋರಿನ ಸಿಡುಕು ಮೂತಿಯ ಹುಡುಗಿ, ನನ್ನೂರಿನ ಎಸಿ ಬಸ್ಸಿನ (ಎಸಿ ಅಂದ್ರೆ ವಜ್ರ ಬಸ್ ಅಲ್ಲ. ಈ ಬಸ್ಸಿನ ಕಿಟಕಿಗಳಿಗೆ ಗ್ಲಾಸ್ಗಳೇ ಇರುವುದಿಲ್ಲ. ಚೆನ್ನಾಗಿ ಗಾಳಿಯಾಡಿ ತಂಪಾಗುತ್ತದಾದ್ದರಿಂದ ಎಸಿ ಬಸ್ ಎಂಬ ಅಡ್ಡ ಹೆಸರು. ಈ ಬಸ್ಸಲ್ಲಿ ಹೋಗೋ ಸುಖವೇ ಬೇರೆ. ಆದರೆ ಮಳೆಗಾಲದಲ್ಲಿ ಹೊರಗಿನ ನೀರು ಒಳಬರದಂತೆ ಗಬ್ಬು ನಾತ ಬೀರುವ ಕರ್ಟನ್ ಏರಿಸಿಕೊಂಡಿರುತ್ತವೆ) ಸದಾ ನಗುತ್ತಿರುವ ಚೆಲುವ ಕಂಡಕ್ಟರ್, ಪರಿಚಯದ ನಗು ಬೀರುವ ಆಟೋ ಡ್ರೈವರ್, ಅಪರಿಮಿತ ಜೀವನೋತ್ಸಾಹ ತುಂಬಿಕೊಂಡು ಲಿಫ್ಟ್ಗೆ ಬಂದ ಎಲ್ಲರನ್ನೂ ಪ್ರೀತಿಯಿಂದ ಮಾತಾಡಿಸುವ ಕಾಲೇಜಿನ ಲಿಫ್ಟ್ಮ್ಯಾನ್ ಇವರೆಲ್ಲ ನನ್ನನ್ನ ಕಾರಣವಿಲ್ಲದೆ ಕಾಡುತ್ತಾರೆ.
ನನ್ನಮ್ಮನ ಪ್ರಕಾರ ಅವಳ ತವರೂರಲ್ಲಿರುವ ಅಕ್ಕಸಾಲಿಯನ್ನು ಬಿಟ್ಟು ಉಳಿದೆಲ್ಲರೂ ಚಿನ್ನದ ತೂಕದಲ್ಲಿ ಮೋಸ ಮಾಡುವವರು. ಇವನಾದರೆ ಅಗತ್ಯವಿದ್ದಷ್ಟು ಮಾತ್ರ ಬೇರೆ ಲೋಹ ಮಿಶ್ರ ಮಾಡುತ್ತಾನೆ. ಕೈಯಲ್ಲೇ ಮಾಡುವ ಆಭರಣಗಳಾದ್ದರಿಂದ ಡಿಸೈನ್ ಅಷ್ಟೇನೂ ಚೆನ್ನಾಗಿಲ್ಲದಿದ್ದರೂ ಅದೆಲ್ಲ ಅಪ್ಪಟ ಚಿನ್ನ ಅವಳ ಪಾಲಿಗೆ. ಅವಳ ಮದುವೆ ಸಮಯದಲ್ಲಿ ಅವನಿಂದ ಮಾಡಿಸಿಕೊಂಡ ಬಳೆಗಳನ್ನು ಅಳಿಸಿ ಬೇರೆ ಹೊಸ ಫ್ಯಾಷನ್ದು ಬೇರೆ ಕಡೆ ಮಾಡಿಸಿಕೋ ಅಂತ ನಾವೇನಾದ್ರೂ ಹೇಳಿದ್ರೆ ‘ಮಾಧವನ ಅಂಗಡಿಯಲ್ಲಿ ಮಾಡಿಸಿದ್ದಿದು. ಬೇರೆ ಕಡೆ ಮಾಡಿಸೋಕೆ ಕೊಟ್ರೆ ಅವ್ರೇ ಒಳ್ಳೆ ಚಿನ್ನ ಎಲ್ಲ ಇಟ್ಟುಕೊಂಡು ಬಿಡ್ತಾರೆ. ನಾನು ಮಾಡಿಸುದಾದ್ರೂ ಅವನತ್ರವೇ ಮಾಡಿಸುತ್ತೇನೆ’ ಅಂತೆಲ್ಲ ಕತೆ ಹೊಡೆಯುತ್ತಾಳೆ.
ಪ್ರಾಯಶಃ ನಾವು ಹೆಣ್ಣುಮಕ್ಕಳೇ ಹೀಗೆ. ಕಾರಣವಿಲ್ಲದೆ ನಮ್ಮ ಮನಸ್ಸನ್ನು ಯಾರೋ ತಟ್ಟಿಬಿಡುತ್ತಾರೆ. ಸುಖಾಸುಮ್ಮನೆ ಕಾಡುತ್ತಾರೆ. ಯಾವುದೋ ಬಳೆ ಅಂಗಡಿಯಾತನನ್ನ ನೆಚ್ಚಿಕೊಂಡು ಬಿಟ್ಟರೆ ಮತ್ತೆ ಆ ಅಂಗಡಿ ಬಿಟ್ಟು ಬೇರೆಯದನ್ನು ಸುಮ್ಮನೆ ಕುತೂಹಲಕ್ಕಾದರೂ ಹೊಕ್ಕಬೇಕು ಅನಿಸುವುದಿಲ್ಲ. ಅಪ್ಪಿತಪ್ಪಿ ಹೋದರೂ ಎಲ್ಲವನ್ನೂ ಹೋಲಿಸುತ್ತಾ, ‘ಇಲ್ಲ, ಇದೇ ರೇಟಿಗೆ ಇದಕ್ಕಿಂತ ಚೆನ್ನಾಗಿರೋ ಬಳೆ ಅಲ್ಲಿ ಸಿಗುತ್ತೆ.’ ‘ಅಲ್ಲಿ ಸಿಗೋ ಕ್ವಾಲಿಟಿ ಇಲ್ಲೆಲ್ಲಿ ಸಿಕ್ಕೀತು?’ ಅಂತೆಲ್ಲ ನಮಗೆ ನಾವೇ ಕಾರಣಗಳನ್ನು ಸೃಷ್ಟಿಸಿಕೊಂಡು ಇಡೀ ಭೂಲೋಕದಲ್ಲೇ ಅಂಥದೊಂದು ಶ್ರೇಷ್ಠ ಅಂಗಡಿ ಬೇರೆಲ್ಲೂ ಇಲ್ಲ ಎನ್ನುವ ಭ್ರಮೆಯಲ್ಲೇ ಬದುಕುತ್ತೇವೆ. ನನ್ನ ಗೆಳತಿಯೊಬ್ಬಳು ಒಳ್ಳೆಯ ಗುಣಮಟ್ಟದ ಬುಕ್ಗಳು ಎಂಬ ಕಾರಣಕ್ಕೆ ನೋಟ್ಬುಕ್ಗಳನ್ನ ತೆಗೆದುಕೊಳ್ಳಲಿಕ್ಕೆಂದೇ ೩೫ ಕಿ.ಮೀ. ದೂರ ಜಾಸ್ತಿ ಕ್ರಮಿಸುತ್ತಿದ್ದಾಗ ಅವಳನ್ನ ಇನ್ನಿಲ್ಲವೆಂಬಂತೆ ಆಡಿಕೊಂಡು ನಕ್ಕಿದ್ದೆವು. ಈಗ ನಾನು ಡ್ರೆಸ್ ಹೊಲಿಸಲಿಕ್ಕೆಂದೇ ೪೫೦ ಕಿ.ಮೀ.ಗಳಷ್ಟು ದೂರದ ನನ್ನೂರಿಗೆ ಬಟ್ಟೆಗಳನ್ನು ಇಲ್ಲಿಂದ ಹೊತ್ತೊಯ್ಯುವಾಗ ಭ್ರಮೆ ಅನಿಸುವುದೇ ಇಲ್ಲ!!
ಊರಿನ ನೆಚ್ಚಿನ ವ್ಯಕ್ತಿಗಳು ಇಲ್ಲಿಲ್ಲ ಎಂಬ ತಳಮಳ ಇದ್ದರೂ, ಈ ಐದಾರು ತಿಂಗಳಲ್ಲಿ ಬೆಂಗಳೂರಲ್ಲೂ ನೆಚ್ಚಿನ ವ್ಯಕ್ತಿಗಳು ಹುಟ್ಟಿಕೊಂಡು ಬಿಟ್ಟಿದ್ದಾರೆ. ಪ್ರತೀ ಮಂಗಳವಾರ ಬರುವ ಇಸ್ತ್ರಿಯ ಅಜ್ಜ ಒಂದು ಮಂಗಳವಾರ ಬರದಿದ್ದರೆ ಸಾಕು, ಮನಸ್ಸು ಚಡಪಡಿಸಿಬಿಡುತ್ತದೆ. ಎಡೆಬಿಡದೆ ಸಿಗರೇಟು ಸೇದುವ ಅವನಿಗೆ ಏನಾದರೂ ಆಯಿತೇನೋ, ಹುಷಾರಿಲ್ಲವೇನೋ ಅಂತ ಸಣ್ಣ ಗಾಬರಿಯೂ ಹುಟ್ಟಿಬಿಡುತ್ತದೆ. ಮಠದ ಬಳಿ ಹೂಮಾರುತ್ತಿರುವ, ಬಾಯ್ತುಂಬ ಮಾತನಾಡುವ ಹೆಂಗಸಿನ ಬಳಿಯಲ್ಲದೆ ಬೇರೆ ಯಾರ ಬಳಿಯಲ್ಲೂ ಸುಮ್ಮನಾದರೂ ಹೂ ಕೊಳ್ಳಬೇಕು ಅನಿಸುವುದಿಲ್ಲ. ‘ನಮ್ಮ ಏರಿಯಾದಲ್ಲಿ ಅರ್ಧ ಮೊಳ ಹೂಗೆ ೧೦ ರೂ. ಏನ್ ಕೇಳ್ತೀರಿ?’ ಅಂತ ಯಾರಾದ್ರೂ ಗೊಣಗುತ್ತಿದ್ದರೆ ‘ನಮ್ಮ ಕಡೆ ಹಾಗಿಲ್ಲಪ್ಪ. ಒಂದೊಳ್ಳೆ ಹೆಂಗ್ಸಿದೆ. ಸೀಸನ್ ಟೈಮಲ್ಲಿ ಸ್ವಲ್ಪ ಜಾಸ್ತಿ ಅನ್ನೋದು ಬಿಟ್ರೆ ಬೇರೆ ಟೈಮಲ್ಲಿ ಸಂಪಿಗೆ ಹೂ ಫ್ರೀ ಕೊಡ್ತಾಳೆ ಅವ್ಳು’ ಎಂಬ ಶಿಫಾರಸು ಬೇರೆ ಮಾಡ್ತೇನೆ!
ಗುರುತು ಪರಿಚಯವೇ ಇರದ ನನ್ನ ಇವರೆಲ್ಲರ ನಡುವಿನ ಆ ವಿಚಿತ್ರ ಬಂಧ ಯಾವುದಿರಬಹುದು ಎಂಬ ಗೊಂದಲಕ್ಕೆ ಬೀಳುತ್ತೇನೆ ಒಮ್ಮೊಮ್ಮೆ. ತೀರ ಹತ್ತಿರದ ಸಂಬಂಧಿಗಳನ್ನೇ ಕೆಲವೊಮ್ಮೆ ನಂಬಬೇಕು, ನೆಚ್ಚಿಕೊಳ್ಳಬೇಕು ಅನಿಸುವುದಿಲ್ಲ. ವರ್ಷಾನುಗಟ್ಟಲೆ ಪರಿಚಯ ಇದ್ದರೂ ಸುಮಧುರ ಬಾಂಧವ್ಯ ಬೆಳೆಯುವುದಿಲ್ಲ. ಅಂಥಾದ್ದರಲ್ಲಿ ಕೇವಲ ವ್ಯಾವಹಾರಿಕ ಸಂಬಂಧ ಮಾತ್ರ ಇರುವವರು ಒಂದೇ ಸಲದ ಪರಿಚಯ ಮಾತ್ರಕ್ಕೆ ನಮ್ಮ ನಂಬಿಕಸ್ಥರೆನಿಸಿಕೊಂಡು ಬಿಡುತ್ತಾರಲ್ಲ, ಸರಿಯಾಗಿ ಅವರ ವೈಯಕ್ತಿಕ ವಿವರಗಳನ್ನೂ ತಿಳಿದುಕೊಳ್ಳದೆ, ಎಲ್ಲ ಸದ್ಗುಣಗಳನ್ನು ಅವರಿಗೆ ನಾವೇ ಆರೋಪಿಸಿ ನಮ್ಮ ಆಪ್ತರೆನ್ನುವಂತೆ ಬಿಂಬಿಸಿಕೊಂಡು ಬಿಡುತ್ತೀವಲ್ಲ! ನನ್ನಮ್ಮ ಹೇಳುವ ಹಾಗೆ ಪೂರ್ವ ಜನ್ಮದಲ್ಲಿ ಅವರಿಗೂ ನಮಗೂ ಹತ್ತಿರದ ಸಂಬಂಧವೇನಾದ್ರೂ ಇರುತ್ತಾ?!
Sunday, June 20, 2010
ನನ್ನ ಎಂ.ಎ. ಪದವಿ ಮತ್ತು ಅಪ್ಪನ ಕವನ
ಮಗುವೊಂದು ಬುವಿಗಿಳಿಯುವಾಗ ತನ್ನ ಜೊತೆಗೆ ಲೋಡುಗಟ್ಟಲೆ ಸಂಭ್ರಮ, ಉಲ್ಲಾಸ, ಜೀವನೋತ್ಸಾಹ ಎಲ್ಲವನ್ನೂ ಹೊತ್ತುಕೊಂಡೇ ಬರುತ್ತದೆ ಅನಿಸುತ್ತೆ. ತಾನತ್ತರೂ, ನಕ್ಕರೂ ನೋಡುವವರಿಗೆ ಸಂತೋಷವನ್ನೇ ಕೊಡುವ ಆ ಪುಟ್ಟ ಜೀವಿ ಮನೆಯವರಿಗೆಲ್ಲ ಜವಾಬ್ದಾರಿಯನ್ನೂ ತನ್ನಿಂತಾನೇ ಹಂಚಿಬಿಡುವ ಪರಿಯೇ ಸೋಜಿಗ.
ಮಗು ಹುಟ್ಟುವ ಮೊದಲು, ಹುಟ್ಟಿದ ನಂತರ ಅಪ್ಪ ಅಮ್ಮ ಅದೇನೇನು ಕನಸು ಕಾಣುತ್ತಾರೆ, ಮಗು ಬೆಳೆಯುವವರೆಗೆ ಅದೆಷ್ಟು ಕಷ್ಟ ಪಡುತ್ತಾರೆ ಎಂಬುದನ್ನೊಮ್ಮೆ ಅರ್ಥಮಾಡಿಕೊಂಡರೆ ಸಾಕು, ಅಪ್ಪ ಅಮ್ಮನನ್ನು ಚಿಲ್ಲರೆ ಕಾರಣಗಳಿಗೋಸ್ಕರ ದೂರುವ ಮಕ್ಕಳಿಗೆ ತಾವೆಂತ ತಪ್ಪು ಮಾಡುತ್ತಿದ್ದೇವೆ ಎನ್ನುವುದು ಅರಿವಾಗಬಹುದು. 'ಅಮ್ಮ ಮನೆಯನ್ನು ಕ್ಲೀನಾಗಿ ಇಡ್ತಿಲ್ಲ, ಅಡಿಗೆ ಬೇಗ ಮುಗಿಸ್ಲಿಲ್ಲ, ಸೂಕ್ಷ್ಮಗಳೇ ಗೊತ್ತಾಗೋಲ್ಲ, ಅತಿಯಾಗಿ ಮಾತಾಡ್ತಾಳೆ' ಅನ್ನೋ ಕ್ಷುಲ್ಲಕ ಕಾರಣಗಳಾಗಲಿ ಅಥವಾ ಅದೆಂಥ ದೊಡ್ಡ ತಪ್ಪೇ ಆಗಿರಲಿ, ಅವಳನುಭವಿಸೋ ಹೆರಿಗೆ ನೋವು, ನಿದ್ದೆ ಇಲ್ಲದ ರಾತ್ರಿಗಳಷ್ಟೇ ಸಾಕು, ಅವಳನ್ನ ಧಾರಾಳವಾಗಿ ಕ್ಷಮಿಸಿಬಿಡೋದಕ್ಕೆ. ಮಗುವಿಗೆ ಸದ್ಬುದ್ಧಿ, ಸನ್ನಡತೆ, ಶಿಸ್ತು ಕಲಿಸುವಲ್ಲಿ ಅಪ್ಪ ತೋರುವ ತಾಳ್ಮೆಯೊಂದೇ ಸಾಕು, ಮಾಡಲೇಬೇಕಾದ ಇಂಪಾರ್ಟೆಂಟ್ ಕೆಲಸವನ್ನ ಅವರು ವಯಸ್ಸಿನ ಕಾರಣದಿಂದಾಗಿ ಮರೆತುಬಿಟ್ಟ ಅಪರಾಧವನ್ನ ಕ್ಷಮಿಸೋಕೆ. ಬೆಳೆದ ಮೇಲಾದರೂ ಅಷ್ಟೆ, ಅಪ್ಪ ಅಮ್ಮ ಮಕ್ಕಳಿಗೆ ಒಂಥರಾ ಒತ್ತಡವನ್ನ ಕಳೆದುಕೊಳ್ಳಲು ಇರೋ ಸ್ಟ್ರೆಸ್ ಬಸ್ಟರ್ಸ್! ಎಲ್ಲೇ ಏನೇ ಲೋಪವಾದರೂ ಅಪ್ಪ ಅಮ್ಮನ ಮೇಲೆ ಕೂಗಾಡಿಬಿಟ್ಟರೆ ಮುಗೀತು, ಟೆನ್ಷನ್ ಮಂಗಮಾಯ! ಅವರೋ, ಸ್ವಲ್ಪ ಹೊತ್ತು ಬೇಜಾರು ಮಾಡಿಕೊಂಡರೂ ಪಾಪ, ಆಮೇಲೆ ತಾವೇ ಮಾತಾಡಿಸುತ್ತಾರೆ, 'ಏನಾಯ್ತು?' ಅಂತ ಕೇಳುತ್ತ. ಅಷ್ಟಕ್ಕೂ ಅವರದೆಷ್ಟೇ ದೊಡ್ಡವರಾದರೂ, ಅಸಡ್ಡೆ ತೋರಿದರೂ ಅಪ್ಪ ಅಮ್ಮನಿಗೆ ಮಕ್ಕಳು ಪ್ರೀತಿಯ ಮಕ್ಕಳೇ. 'ರಸ್ತೆ ದಾಟೋವಾಗ ಜಾಗ್ರತೆ' 'ಯಾಕಿಷ್ಟು ಲೇಟಾಗಿ ಮನೆಗೆ ಬರ್ತೀಯ?', 'ಬೈಕ್ ಸ್ಪೀಡಾಗಿ ಓಡಿಸ್ಬೇಡ', ಅಂತೆಲ್ಲ ಪ್ರತಿನಿತ್ಯವೆಂಬಂತೆ ಅವರು ಚೊರೆ ಮಾಡುವಾಗ 'ಯಾಕಿಷ್ಟು ಕಟ್ಟಿ ಹಾಕೋಕೆ ಪ್ರಯತ್ನ ಮಾಡ್ತಿದ್ದಾರಿವರು? ನಾನೇನು ಚಿಕ್ಕ ಮಗೂನಾ?' ಅನಿಸಿದರೂ ಇವೆಲ್ಲ ಸ್ವಾತಂತ್ರ್ಯ ಹರಣದ ಪ್ರಯತ್ನ ಅಲ್ಲ, ಬದಲಿಗೆ ಅವರಿಗೆ ನಮ್ಮ ಮೇಲಿರೋ ಅಪ್ಪಟ ಕಾಳಜಿಯಿಂದ ಹೇಳ್ತಿರೋದು ಅಂತ ಅರ್ಥ ಆಗೋದು ಸ್ವತಃ ಅಪ್ಪ ಅಮ್ಮ ಆದ್ಮೇಲೇ ಇರಬೇಕು.
ಖಂಡಿತ ಹೌದು, ನನಗೂ ಮಗ ಹುಟ್ಟಿದ್ಮೇಲೆಯೇ ಇವೆಲ್ಲ ಅರ್ಥ ಆಗ್ತಿರೋದು ;-) ಮಗು ಸಂತೋಷ, ಜವಾಬ್ದಾರಿಗಳ ಜೊತೆಗೇ ಒಳ್ಳೆ ಬುದ್ಧಿಯನ್ನೂ ಕೊಡುತ್ತೆ! ಹುಟ್ಟಿದ ಎರಡು ತಿಂಗಳಲ್ಲೇ ನನಗಿಷ್ಟು ಅರಿವು ಮೂಡಿಸಿದ ಪುಟ್ಟ 'ಪ್ರಣವ'ನಿಗೆ ತಿಂಗಳು ತುಂಬಿದ ಸಂದರ್ಭದಲ್ಲಿ ನಮ್ಮಪ್ಪ ಅವನಿಗೆ ಉಡುಗೊರೆಯಾಗಿ ನೀಡಿದ ಕವನವನ್ನ ಇಲ್ಲಿ ಪೋಸ್ಟ್ ಮಾಡ್ತಿದ್ದೀನಿ.
ಪುಟ್ಟ ಕಂದಗೆ ಶುಭ ಹರಕೆ
ನಮ್ಮ ಮನೆಯ ಸೂರಿನಲ್ಲಿ
ಅರಳಿದಂಥ ಪುಷ್ಪವೇ
ದಿನವೂ ಮೊಗದಿ ನಗೆಯ ಚೆಲ್ಲಿ
ವರವ ಕೊಡುವ ದೈವವೇ!
ನಿನ್ನ ಆಟ, ಚೆಲುವ ನೋಟ
ನೋಡಲದು ವಿಚಿತ್ರವೇ
ಮಲಗಿದಲ್ಲೆ ಗಮನ ಸೆಳೆದು
ಕಿಸಿದುಬಿಡುವೆಯಲ್ಲವೆ?
ಕೈಯನೇಕೆ ಹಾರಿಸುತಿಹೆ?
ಜಯದ ಹುರುಪು ನಿನ್ನದೆ?
ಅಳುವೆಯೊಮ್ಮೆ, ನಗುವೆಯೊಮ್ಮೆ
ಮನದ ಒಳಗೆ ಏನಿದೆ?
ಊಟ-ಗೀಟ ಏನೂ ಬೇಡ
ಎದೆಯ ಹಾಲು ಶ್ರೇಷ್ಠವೆ?
ಒಮ್ಮೆ ಅತ್ತುಬಿಟ್ಟರಾಯ್ತು
ಮಮ್ಮು ಸಿಗುವುದಲ್ಲವೆ?
ರಚ್ಚೆ-ಗಿಚ್ಚೆ ಮಾಡಿಕೊಂಡು
ಮಿಣ್ಣಗಿರುವೆಯೇತಕೆ?
ಅಮ್ಮ ನೋಡಿಬಿಡುವಳೆಂದೆ?
ಏಕೆ ನಿನಗೆ ನಾಚಿಕೆ?
ನೀನು ಬಂದು ತಿಂಗಳೊಳಗೆ
ನಮಗೆ ಶಿಸ್ತು ಕಲಿಸಿದೆ
ಮನೆಯ ಒಳಗೂ ಹೊರಗೂ ಏನೋ
ಬೆಳಕು ಮೂಡಿ ಹರಿದಿದೆ!
ಪುಟ್ಟ ಕಂದ, ನಿನಗೆ ನಿತ್ಯ
ನಮ್ಮ ಹರಕೆ ಮಾಲಿಕೆ
ಜೋಜೋ ಲಾಲೀ... ಹಾಡು ಕೇಳು,
ಸುಖವ ತರಲಿ ನಾಳೆಗೆ
- ನ.ಭ.ನೆಂಪು
ಎಲ್ಲರಿಗೂ ಅಪ್ಪಂದಿರ ದಿನದ ಹಾರ್ದಿಕ ಶುಭಾಶಯಗಳು
Thursday, November 6, 2008
ಕಾಯಕವೇ ಕೈಲಾಸ
Monday, September 8, 2008
ಕೆಮ್ಮಿನ ಕೊರೆತ
ಇಷ್ಟಾಗುವಾಗ ಕೆಮ್ಮಿ ಕೆಮ್ಮಿ ನನ್ನ ಸ್ವರ ಅಕ್ಷರಶಃ ಬಿದ್ದುಹೋಯಿತು! ಮಾತಾಡಹೋದರೆ ಪಾತಾಳದಾಳದಿಂದ ಸ್ವರ ಬರುತ್ತಿದೆಯೇನೋ ಅನಿಸುತ್ತಿತ್ತು. ಕಲೀಗೊಬ್ಬ `ಅರೇ! ಡಿಟ್ಟೋ ರಾಣಿ ಮುಖರ್ಜಿ ಥರಾ ಆಗಿದೆ ನಿನ್ನ ವಾಯಿಸ್' ಅಂತ ಕಾಲೆಳೆಯೋಕೆ ಶುರು ಮಾಡಿದ. ಅವನ ಹೋಲಿಕೆಗೆ ಖುಶಿಯಾಯಿತಾದರೂ, ಇನ್ನೊಬ್ಬಳು `ನೋಡು, ಸ್ವರ ಬಿದ್ದು ಹೋದಾಗಲೂ ತುಂಬ ಮಾತಾಡ್ತಾ ಇದ್ರೆ ಆ ವಾಯಿಸ್ಸೇ ಪರ್ಮನೆಂಟ್ ಆಗುತ್ತಂತೆ!' ಅಂತ ಹೆದರಿಸಿದಾಗ ಸ್ವಲ್ಪ ಸಮಯ ಮಾತಾಡದೇ ಸುಮ್ಮನಿರೋದಕ್ಕೆ ವ್ಯರ್ಥ ಪ್ರಯತ್ನ ಮಾಡಿ ಕೈಬಿಟ್ಟೆ.
ಇವಿಷ್ಟು ಸಾಲದು ಅಂತ ಸಿಕ್ಕಾಪಟ್ಟೆ ಕಿವಿ ನೋವು, ಕಣ್ಣುರಿ ಎಲ್ಲ ಪ್ರಾರಂಭವಾಯಿತು. ಏನೋ ಸೀರಿಯಸ್ ಪ್ರಾಬ್ಲೆಮ್ ಇರಬಹುದು ಅಂತ ಪುಕುಪುಕು ಶುರುವಾಗಿ ಕಿವಿ-ಮೂಗು-ಗಂಟಲು ತಜ್ಞರ ಹತ್ತಿರ ಕೇಳಿದರೆ ವಾಸಿಯೇನೋ ಅನಿಸಿ ಅವರ ಬಳಿ ಹೋದೆ. `ಮೂಗಿನದ್ದೇನೂ ಸಮಸ್ಯೆ ಇಲ್ಲ. ಕಿವಿ ಮತ್ತು ಗಂಟಲು ನೋವು' ಅಂತ ನಾನಂದರೆ ಅವರು ನನ್ನ ಮೂಗನ್ನೂ ಪರೀಕ್ಷಿಸಿ `ಏನಿದು ನಿಮ್ಮ ಮೂಗು ಹೀಗಿದೆ? ಮಧ್ಯದ ಗೋಡೆ ಎಡ ಬದಿ ಜಾಸ್ತಿ ವಾಲಿಕೊಂಡಿದೆ?' ಅಂದರು. ನಾನೇನನ್ನಲಿ? ಮ್ಯಾನುಫ್ಯಾಕ್ಚರಿಂಗ್ ಡಿಫೆಕ್ಟ್ ಅಂತ ಹೇಳಿ ಮರ್ಯಾದೆ ಕಳಕೊಳ್ಳೋದು ಯಾಕೆ ಸುಮ್ಮನೆ ಅಂತ ಅನಿಸಿದ್ದರಿಂದ ಏನೂ ಹೇಳದೆ ಸುಮ್ಮನೆ ಹಲ್ಕಿರಿದೆ. `ಮೂಗಿನಿಂದಲೇ ನಿಮಗೆ ಸಮಸ್ಯೆ ಆಗ್ತಿರೋದು. ಅಲ್ಲಿಂದ ವೆಂಟಿಲೇಷನ್ ಸರಿಯಾಗಿ ಆಗ್ತಿಲ್ಲ. ತೀರಾ ಪ್ರಾಬ್ಲೆಮ್ ಆದರೆ ಒಂದು ಸಣ್ಣ ಆಪರೇಶನ್ ಮಾಡೋಣ. ಸಧ್ಯಕ್ಕೆ ಈ ಮಾತ್ರೆ ತಗೊಳ್ಳಿ. ಮತ್ತೆ ಎಸಿ ಆದಷ್ಟು ಅವಾಯಿಡ್ ಮಾಡಿ' ಅಂದರು. ಎಸಿ ಅವಾಯಿಡ್ ಮಾಡುವ ದಾರಿ ನನಗ್ಯಾವುದೂ ತೋಚಲಿಲ್ಲ. ಆದರೆ ಮೂಗಿಗೆ `ಪ್ಲಾಸ್ಟಿಕ್ ಇಲ್ಲದ ಸರ್ಜರಿ' ಮಾಡಿಸಿಕೊಂಡು ನಾನೂ ಮೈಕೆಲ್ ಜಾಕ್ಸನ್, ಶ್ರೀದೇವಿ ಸಾಲಿಗೆ ಸೇರುವ ಕನಸು ಕಾಣುತ್ತಾ ಬಿಲ್ ತೆತ್ತು ಹೊರ ಬಂದೆ.
ಅವರ ಮಾತ್ರೆಗಳ ಪ್ರಭಾವ ನಿಮಗೆ ಹೇಳಲೇಬೇಕು. ತಗೊಳ್ತಾ ಇದ್ದಿದ್ದು ಬೆಳಿಗ್ಗೆ ಮತ್ತು ರಾತ್ರಿ ಕೇವಲ ಅರ್ಧ ಮಾತ್ರೆ ಮಾತ್ರ. ಏನು ಪರಿಣಾಮ ಬೀರಿತು ಅಂತೀರಿ? ಹಗಲಿನಲ್ಲೂ ಪೊಗದಸ್ತಾದ ನಿದ್ದೆ ತರಿಸಿತು! ಸಾಲದ್ದಕ್ಕೆ ನನ್ನ ಜೀರ್ಣಾಂಗವ್ಯೂಹವನ್ನೂ ಸಂಪೂರ್ಣವಾಗಿ ಹದಗೆಡಿಸಿತು!! ಮತ್ತೆ ಕೆಮ್ಮು?? ಅದು ಇದ್ಯಾವುದಕ್ಕೂ ಹೆದರದೆ, `ನೀನಂದ್ರೆ ನಂಗೆ ತುಂಬಾ ಇಷ್ಟ ಕಣೇ' ಅನ್ನುತ್ತ ನನ್ನ ಅಮರಪ್ರೇಮಿಯೇನೋ ಎಂಬಂತೆ ಗಟ್ಟಿಯಾಗಿ ಅಂಟಿಕೊಂಡು ಕುಳಿತುಬಿಟ್ಟಿತ್ತು.
ಅವತ್ತು ನಮ್ಮ ಟೀಮ್ ಲೀಡರ್ `ಏನ್ರೀ? ನೀವು ಒಳ್ಳೆ ಮಾಧುರಿ ದೀಕ್ಷಿತ್ ಥರ ಆಗಿಬಿಟಿದ್ದೀರಿ?!' ಅಂದಾಗ ಖುಷಿಯಿಂದ ತೀರಾ ಉಬ್ಬಿಹೋಗಿ `ಯಾಕೆ ಸರ್?' ಅಂತ ಕೇಳಿದೆ. `ಅಲ್ಲ ಮತ್ತೆ? `ಹಮ್ ಆಪ್ಕೆ ಹೇ ಕೌನ್' ನಲ್ಲಿ ಮಾಧುರಿ ನಿಮ್ಮ ಹಾಗೇ ಅಲ್ವಾ ಕೆಮ್ಮುತ್ತಾ ಇದ್ದಿದ್ದು?' ಅಂತ ಅವರಂದಾಗ ಪಿಚ್ಚೆನಿಸಿದರೂ ಈ ನೆವದಲ್ಲಾದರೂ ನಾನು ಮಾಧುರಿ ದೀಕ್ಷಿತ್ ಆದ್ನಲ್ಲಾ ಅಂತ ಖುಶಿಯೇ ಆಯಿತು. ನಾನೆಲ್ಲಿ? ಅವಳೆಲ್ಲಿ?!
ಈ ವೇಳೆಗೆ ನಾನು ಮತ್ತು ನನ್ನ ಕೆಮ್ಮು ಇಬ್ಬರೂ ಸಿಕ್ಕಾಪಟ್ಟೆ ಜನಪ್ರಿಯವಾಗಿಬಿಟ್ಟಿದ್ದೆವು. ತಲೆಗೊಂದೊಂದು ಉಪಾಯ ಸಿಗುತ್ತಿತ್ತು, ಕೆಮ್ಮು ದೂರ ಮಾಡೋಕೆ. ಅನುಸರಿಸೋಕೆ ಸಾಧ್ಯವಾಗಿದ್ದನ್ನೆಲ್ಲ ಅನುಸರಿಸಿದ್ದೂ ಆಯಿತು. ಕೆಮ್ಮು ಕ್ಯಾರೇ ಅನ್ನಲಿಲ್ಲ. ಎಸಿ ತೊಂದರೆಗಳಿಗೆ ರಾಮಬಾಣ ಅನಿಸಿಕೊಂಡ ಅದೆಂಥದೋ ಆಯುರ್ವೇದದ ಹುಡಿ ಮತ್ತು ಪಿಪ್ಪಲ್ಯಾಸವ ಕಷಾಯ ತಕ್ಕ ಮಟ್ಟಿಗೆ ಕೆಮ್ಮು ನೀಗುತ್ತಿತ್ತು. ಆದರೆ ಅದರ ಪ್ರಭಾವ ಇರುತ್ತಿದ್ದುದು ಸ್ವಲ್ಪ ಸಮಯ ಮಾತ್ರ. ಕೆಮ್ಮು ಸ್ವಲ್ಪ ಹೊತ್ತು ರೆಸ್ಟ್ ತೆಗೆದುಕೊಂಡಂತೆ ಮಾಡಿ ಮತ್ತೆ ಪುನಃ `ನಿನ್ನ ತುಂಬ ಮಿಸ್ ಮಾಡಿಕೊಂಡೆ ಕಣೇ' ಎಂಬಂತೆ ನನಗೆ ಜೋತುಬೀಳುತ್ತಿತ್ತು.
ನಾನು ಹೋದಲ್ಲೆಲ್ಲ ಕೆಮ್ಮು ನನಗೆ ವಿಐಪಿ ಟ್ರೀಟ್ಮೆಂಟ್ ಕೊಡಿಸುತ್ತಿತ್ತಾದರೂ ನನ್ನ ಪಾಡಿಗೆ ನಾನು ಗುನುಗಿಕೊಳ್ಳಲಾಗದಂತೆ, ಸರಿಯಾಗಿ ಮಾತಾಡಲೂ ಆಗದಂತೆ ಮಾಡಿ ಸ್ವಾನುಕಂಪಕ್ಕೆ ದೂಡಿಬಿಟ್ಟಿತು. ತೆಪ್ಪಗೆ ಕುಳಿತು, ಕಷ್ಟ ಪಟ್ಟು `ಕಣ್ಣನು ಮುಚ್ಚಬಹುದು ಚಂದಮಾಮ? ಕನಸನು ಬಚ್ಚಿಡಬಹುದೆ ಚಂದಮಾಮ...' ಅಂತ ಪಾತಾಳದಾಳದಿಂದ ಬರುವ ಸ್ವರದಲ್ಲಿ ಗೊಣಗುತ್ತಿರಬೇಕಾದರೆ ಹಾಡಿನೊಂದಿಗೇ ನಾಗಾಭರಣರ `ನೀಲಾ' ನೆನಪಾದಳು. ಮಾತು ಬಾರದ (ಎಲ್ಲರಿಂದ ಪಾತಿ ಅಂತ ಕರೆಸಿಕೊಳ್ಳಲ್ಪಡುವ) ಪಾರ್ವತಿ ದೊಡ್ಡಮ್ಮನೂ ನೆನಪಾದರು. ಅವರಂತವರೆಲ್ಲ ತಮ್ಮ ಅಸಹಾಯಕತೆಯನ್ನು ಮೆಟ್ಟಿ ನಿಂತಿರುವಾಗ ನಾನೊಂದು ಯಕಶ್ಚಿತ್ ಕೆಮ್ಮಿಗೆ ಹೆದರುವುದೇ ಅಂತ ನಾಚಿಕೆಯಾಗಿ `ಛೀ ತೊಲಗಾಚೆ' ಅಂದೆ. ಅಷ್ಟಂದಿದ್ದೇ ಕೆಮ್ಮಿಗೆ ಸಿಕ್ಕಾಪಟ್ಟೆ ಅವಮಾನವಾಗಿ ಹೊರಡುವ ಸನ್ನಾಹದಲ್ಲಿದೆ! ಈಗೀಗ ತೀರಾ ನನ್ನ ನೆನಪಾದಾಗ ಮಾತ್ರ ಬರುತ್ತದಷ್ಟೇ!
ಇಷ್ಟು ಸಾಹಸ ಪಟ್ಟು (!?) ಕೆಮ್ಮನ್ನು ಓಡಿಸಿ ನನ್ನ ಸ್ವರ ಹುಡುಕಿಕೊಂಡೆನಲ್ಲ ಅಂತ ಖುಷಿಯೇನೋ ಇದೆ ತುಂಬಾ. ಒಂದೇ ಒಂದು ಬೇಜಾರು ಅಂದರೆ ಈಗ ಯಾರೂ ನನ್ನ ಮಾಧುರಿ ದೀಕ್ಷಿತ್ಗೆ, ರಾಣಿ ಮುಖರ್ಜಿಗೆ ಹೋಲಿಸುತ್ತಿಲ್ಲವಲ್ಲಾ ಅಂತ :-)
Monday, July 7, 2008
ಚವಣೆ ಪುರಾಣ!!
ಆವತ್ತು ಬೆಳಿಗ್ಗೆ ಅಮ್ಮ ಬೆಂಗಳೂರಿಗೆ ಬಂದಿಳಿದವಳು, ‘ಬಸ್ಸಲ್ಲಿ ಚವಣೆ (ಅರ್ಥಾತ್ ತಿಗಣೆ) ಇತ್ತೇನೋ... ರಾತ್ರಿಯೆಲ್ಲ ಏನೋ ಕಚ್ತಿತ್ತು. ತುರಿಸ್ಕೊಂಡು ಸಾಕಾಯ್ತು’ ಅನ್ನುತ್ತಿದ್ದಳು. ಅದಕ್ಕೆ ಅಪ್ಪಯ್ಯ, ‘ಚವಣೆಯಾ? ಮತ್ತೆಂತದಾ? ನೀನು ಕಿಟಕಿ ಚೂರು ಓಪನ್ ಮಾಡಿ ಕೂತ್ಕಂಡಿದ್ಯಲ್ಲ, ಸೊಳ್ಳೆ ಗಿಳ್ಳೆ ಬಂದಿಪ್ಕೂ ಸಾಕ್. ಚವಣೆ ಎಲ್ಲ ಈಗ ಎಲ್ಲಿತ್ತ್? ಅದ್ರ ಸಂತತಿಯೇ ನಾಶ ಆಯಿತ್ತೇನೋ! ನಿಂಗೆ ಭ್ರಮೆ, ಬಸ್ಸಲ್ಲಿ ಚವಣೆ ಇತ್ತಂತ’ ಅಂತ ಅಮ್ಮನ ಕಾಲೆಳೆದರು. ಅಷ್ಟರಲ್ಲಿ ನಾನು ‘ಚವಣೆ ಅಂದ್ರೆ ಹ್ಯಾಂಗಿರ್ತ್ತಮ್ಮ?’ ಅಂತ ಯಾವತ್ತಿನ ನನ್ನ ಅಜ್ಞಾನದ ಪ್ರದರ್ಶನ ಮಾಡಿಕೊಂಡೆ. ಅಮ್ಮ, ‘ಚವಣೆ ಸಾ ಕಾಣ್ಲಿಲ್ಯಾ ಮಾರಾಯ್ತಿ ನೀನು? ನೆಂಪಿನ ನಮ್ಮ ಮನೇಲಿ ಆ ಪಾಟಿ ಇದ್ದಿತ್ತಲ್ಲ?!’ ಅಂತ ಛೇಡಿಸಿ, ಚವಣೆಯ ಗುಣಲಕ್ಷಣಗಳನ್ನೆಲ್ಲ ಕಣ್ಣಿಗೆ ಕಟ್ಟುವ ಹಾಗೆ ಹೇಳಿ, ನೆಂಪಿನ ಮನೆಯಲ್ಲಿನ ಹಾಸಿಗೆ, ಹೊದೆಸ್ತ್ರ (ಹೊದೆಯುವ ವಸ್ತ್ರ), ತಲ್ದಿಂಬು(ತಲೆದಿಂಬು)ಗಳಲ್ಲಿ ಸಾಮ್ರಾಜ್ಯ ಕಟ್ಟಿಕೊಂಡಿರುತ್ತಿದ್ದ ತಿಗಣೆಗಳು, ರಾತ್ರಿಯೆಲ್ಲ ಮನೆಯವರ ರಕ್ತಹೀರುತ್ತಾ, ಒಂದೊಮ್ಮೆ ಬಿಸಿಲಿಗೆ ಹಾಕಿದ ಕೂಡಲೇ ಬುಳಬುಳನೆ ಪರಿವಾರ ಸಮೇತ ಹೊರಬರುತ್ತಿದ್ದುದನ್ನೆಲ್ಲ ನನ್ನ ಮೈಮೇಲೆ ಮುಳ್ಳೇಳುವ ಹಾಗೆ ವರ್ಣಿಸಿದಳು! ಮನೆಯೊಳಗೆ ಒಂದು ಸೇರಿಕೊಂಡರೂ ಸಾಕು, ತನ್ನ ಸಂತಾನವನ್ನು ಲಕ್ಷಗಟ್ಟಲೆ ವೃದ್ಧಿಗೊಳಿಸಿಕೊಳ್ಳುವ ಸಾಮರ್ಥ್ಯ ಇರುವಂಥದ್ದು ಅಂತ ಹೆದರಿಸಿದಳು. ಈ ವರ್ಣನೆಗಳನ್ನೆಲ್ಲ ಕೇಳಿದ ಮೇಲೆ ನನಗೆ ‘ಛೇ! ಇಂತ ಸಂತತಿ ನನ್ನ ಕಣ್ಣಿಗೆ ಬೀಳುವ ಮೊದಲೇ ಅವಸಾನ ಕಾಣಬಾರದಿತ್ತು’ ಅಂತ ಅದೇನೋ ಒಂಥರಾ ಬೇಜಾರಾಯ್ತು! ಯಾಕೋ ಕರ್ವಾಲೋ ಕೂಡ ನೆನಪಾಗಿಬಿಟ್ಟರು! ಅಷ್ಟೆಲ್ಲ ಫೀಲಿಂಗ್ ಮಾಡಿಕೊಂಡದ್ದೇ ತಪ್ಪಾಗಿಹೋಯ್ತು ಬಿಡಿ.
ಚಿಕ್ಕಂದಿನಿಂದಲೂ ನನಗೆ ರಾತ್ರಿ ಬಸ್ಸಿನಲ್ಲಿ ಬೆಂಗಳೂರಿಗೆ ಹೋಗೋದೆಂದರೆ ಇಷ್ಟ. ಬೆಂಗಳೂರಿಗೆ ಹೊರಡುವ ಒಂದು ವಾರ ಮೊದಲೇ ಶುರುವಾಗುವ ಪ್ಯಾಕಿಂಗ್, ಆ ಕತ್ತಲ ಪ್ರಯಾಣ, ಕೆಎಸ್ಸಾರ್ಟಿಸಿಯ ಹಸಿರು ಬಣ್ಣದ, ಕಲ್ಲಿನಷ್ಟು ಮೃದುವಾದ ಸೀಟುಗಳು, ಒಂದೇ ಸೀಟಿನಲ್ಲಿ ಇಬ್ಬರು ಕೂತು ವಿಂಡೋ ಸೀಟಿಗಾಗಿ ಬಡಿದಾಡೋದು, ದಾರಿಯುದ್ದಕ್ಕೂ ಕಂಗೊಳಿಸುವ ರಸ್ತೆ ದೀಪಗಳು, ದಾರಿ ಮಧ್ಯ ಬಸ್ಸು ನಿಲ್ಲಿಸಿದಾಗ ಅಪ್ಪಯ್ಯ ತಂದು ಕೊಡುವ ಹಾಲು, ಬ್ರೆಡ್ಡು, ಅರೆ ನಿದ್ದೆ, ಮಂಪರು, ರಾತ್ರಿ ಕಳೆದು ಬೆಳಕಾಗುವುದರೊಳಗೆ ಮಾಯಾನಗರಿಯನ್ನು ತಲುಪಿಸುತ್ತಿದ್ದ ಮ್ಯಾಜಿಕ್ ಬಸ್ಸು, ಪ್ರಯಾಣದ ಮರುದಿನದ ಹಗಲಿನ ಸಿಹಿನಿದ್ದೆ ಎಲ್ಲ ತುಂಬ ಖುಷಿ ಕೊಡುತ್ತಿತ್ತು. ಈ ಎಲ್ಲ ಸಂಭ್ರಮದಲ್ಲಿ ಆ ಬಸ್ಸಲ್ಲಿ ತಿಗಣೆಯೇನು, ಹೆಗ್ಗಣವೇ ಇದ್ದಿದ್ದರೂ ನನಗಂತೂ ಗೊತ್ತಾಗುತ್ತಿರಲಿಲ್ಲ.
ಆಗೆಲ್ಲ ಸಾಮಾನುಗಳನ್ನು ಸೀಟಿನ ಮೇಲಿರುತ್ತಿದ್ದ ‘ನಾಗವಂದಿಗೆ’ಯ (ಅದಕ್ಕೆ ನಿಜವಾಗಲೂ ಏನನ್ನುತ್ತಾರೋ, ನನಗಂತೂ ತಿಳಿಯದು! ನಮ್ಮೂರ ಕಡೆ ತಮಾಷೆಗಾಗಿ ಈ ಪದವೇ ಬಳಕೆಯಾಗುತ್ತದೆ) ಮೇಲೆ ತುರುಕಿ ‘ದುಡ್ಡಿನ ಚೀಲ’ಗಳನ್ನು ಮಾತ್ರ ಕೈಲಿ ಹಿಡಿದುಕೊಂಡು ಹಾಯಾಗಿರುತ್ತಿದ್ದೆವು. ಈಗಿನ ಪ್ರೈವೇಟು ಬಸ್ಸುಗಳಲ್ಲಿ ಈ ನಾಗವಂದಿಗೆಗಳೆಲ್ಲ ಸ್ಲೀಪರ್ಗಳಾಗಿ ಮಾರ್ಪಟ್ಟಿವೆ! ಮಲಗಿದವರು ಕೆಳಬೀಳದ ಹಾಗೆ ದಪ್ಪ ದಪ್ಪ ಸರಳುಗಳೇನೋ ಇವೆ. ಆದರೆ ನನ್ನಂಥವರಿಗೆ ನಿದ್ದೆ ಮಂಪರಲ್ಲಿ ಬಸ್ಸಿನ ತೂರಾಟಕ್ಕೆ ಈ ಸರಳುಗಳ ಸ್ಕ್ರೂ ಸಡಿಲಾಗಿ ಈ ಜೀವ ಇನ್ನೇನು ಕೆಳಬಿದ್ದು ಹಲ್ಲು ಮುರಿದರೇನು ಗತಿ ಅನ್ನುವ ವಿಚಿತ್ರ ಭಯ! ಜೊತೆಗೆ, ಸೀಸನ್ ಟೈಮಲ್ಲಿ ಈ ಸ್ಲೀಪರ್ಗಳು ಸಿಕ್ಕಾಪಟ್ಟೆ ರೇಟ್ ಏರಿಸಿಕೊಂಡು ಪಕ್ಕಾ ಫೋರ್ಟ್ವೆಂಟಿಗಳಾಗೋದರಿಂದ ನಾನು ಸೀಟುಗಳನ್ನ ಪ್ರಿಫರ್ ಮಾಡೋದೇ ಹೆಚ್ಚು.
ಆವತ್ತೂ ಅಷ್ಟೇ, ಗಡಿಬಿಡಿಯಲ್ಲಿ ಸೀಟ್ ರಿಸರ್ವ್ ಮಾಡಿಸಿ ಊರಿಗೆ ಹೊರಟೆ. ಬಸ್ಸು ಹತ್ತಿ ನೋಡಿದರೆ ನನ್ನಿಷ್ಟದ ವಿಂಡೋ ಸೀಟ್ ಆಗಿರಲಿಲ್ಲ. ಪಾಲಿಗೆ ಬಂದಿದ್ದು ಪಂಚಾಮೃತ ಅಂತಂದುಕೊಂಡು ಸುಮ್ಮನೆ ಕಿವಿಗೆ ಇಯರ್ಫೋನ್ ಸಿಕ್ಕಿಸಿಕೊಂಡು, ಬ್ಯಾಗನ್ನ ಕಾಲ ಮೇಲಿಟ್ಟುಕೊಂಡು ನನ್ನ ಸೀಟಲ್ಲಿ ಕೂತಿದ್ದೆ. ಅಲ್ಲೀವರೆಗೆ ಎಲ್ಲ ಸರಿಯಿತ್ತು ನೋಡಿ. ಮುಂದೊಂದು ಗಂಟೆ ಬಿಟ್ಟು ಬಸ್ ಹತ್ತಿದ ಪಕ್ಕದ ಸೀಟಿನ ಆಂಟಿ ಅದೇನು ಕಾರಣವೋ ನನ್ನ ಬಳಿ ‘ನೀನು ವಿಂಡೋ ಸೀಟಲ್ಲಿ ಕೂತ್ಕೋತಿಯಾಮ್ಮ?’ ಅಂತ ಕೇಳಿದ್ದೇ ತಡ, ನನಗೆ ಸ್ವರ್ಗಕ್ಕೆ ಮೂರೇ ಗೇಣು ಅನ್ನಿಸೋಷ್ಟು ಖುಷಿಯಾಗಿ ಈಚೆ ಬಂದೆ! ಆಮೇಲೆ ಎಲ್ಲ ಶುರುವಾಗಿದ್ದು.
ಪಿಟೀಲಿನಲ್ಲಿ ಅದ್ಭುತವಾಗಿ ಮೂಡಿಬರುತ್ತಿದ್ದ ಗೋರಖ್ ಕಲ್ಯಾಣ ರಾಗಕ್ಕೆ ಮನಸೋಲುತ್ತಿದ್ದ ಹಾಗೆ ಅದೇನೋ ತುರಿಕೆಯಾಗೋಕೆ ಶುರುವಾಯ್ತು. ಜೊತೆಗೆ ಕಾಲ ಮೇಲೆ, ಬೆನ್ನ ಮೇಲೆಲ್ಲ ಏನೋ ಹರಿಯುತ್ತಿದ್ದ ಹಾಗೆ ಬೇರೆ ಅನಿಸಿತು. ಸಂಗೀತಕ್ಕೆ ರೋಮಾಂಚನವಾಗುತ್ತಿದೆ ಅಂದುಕೊಂಡೆ! ಆದರೆ ಮಲಗೋಣ ಅಂದುಕೊಂಡು ಹಾಡು ನಿಲ್ಲಿಸಿದರೂ ಸ್ವಲ್ಪ ಹೊತ್ತು ಬಿಟ್ಟು ಮತ್ತೆ ನವೆಯಾಗೋಕೆ ತೊಡಗಿತು. ಅಮ್ಮನ ಮಾತು, ಅಪ್ಪನ ಉತ್ತರ ಎರಡೂ ನೆನಪಾಯ್ತು. ನನಗೂ ಅಪ್ಪ ಹೇಳಿದ ಹಾಗೆ ಭ್ರಮೆ ಅಂದುಕೊಂಡು ಸುಮ್ಮನಾದೆ. ರಾತ್ರಿಯಿಡೀ ಮಂಪರಲ್ಲೇ ತುರಿಸಿಕೊಂಡು ತುರಿಸಿಕೊಂಡು ಸಾಕಾಗಿ ‘ಹಾಳು ಸೊಳ್ಳೆಗಳು’ ಅಂತ ಸರಿಯಾಗಿ ಶಾಪ ಹಾಕಿದರೂ ಬೆಳಗಾಗೋ ಹೊತ್ತಿಗೆ ಚೆನ್ನಾಗೇ ಗೊರಕೆ ಹೊಡೀತಿದ್ದೆ. ಕ್ಲೀನರ್ ನಮ್ಮೂರ ಹೆಸರು ಕರೆದು ‘ಇಳಿಯೋರಿದ್ದೀರಾ?’ ಅಂತ ಅರಚಿಕೊಂಡಾಗಲೇ ಎಚ್ಚರಾಗಿದ್ದು. ಭಾರೀ ಬೇಗ ಊರು ತಲುಪಿಸಿದ ಡ್ರೈವರ್ಗೆ ಡಬಲ್ ಥ್ಯಾಂಕ್ಸ್ ಹೇಳಿ ಮನೆಗೆ ಹೋಗಿ ಬಿದ್ದುಕೊಂಡೆ.
ನಿದ್ದೆಗಣ್ಣಲ್ಲಿ ಎದುರಲ್ಲೇ ಇದ್ದ ಬ್ಯಾಗಿಂದ ಏನೋ ಹರಿದುಕೊಂಡು ಬರುತ್ತಿದ್ದ ಹಾಗನಿಸಿತು. ಒಂದಿದ್ದಿದ್ದು ಎರಡಾಯ್ತು, ನಾಲ್ಕಾಯ್ತು, ಹತ್ತಾಯ್ತು... ಪುಟ್ಟ ಜಿರಳೆಗಳಂತಿವೆ ಎಲ್ಲ... ಅಷ್ಟೇ! ... ಅಮ್ಮನ ವಿವರಣೆಗಳೆಲ್ಲ ನೆನಪಿಗೆ ಬಂದು ನಿದ್ದೆಯೆಲ್ಲ ಹಾರಿಹೋಯ್ತು... ಅವಸಾನಗೊಂಡಿದೆ ಅಂತ ನಾನು ಭ್ರಮಿಸಿಕೊಂಡಿದ್ದ ತಿಗಣೆ ಸಂತಾನ ಮನೆಗಳನ್ನು ಬಿಟ್ಟು ಬಸ್ಸಲ್ಲೇ ಮನೆ ಮಾಡಿಕೊಂಡು ಈಗ ಸಧ್ಯಕ್ಕೆ ನನ್ನ ಬ್ಯಾಗನ್ನೇ ಮನೆ ಮಾಡಿಕೊಂಡಿದೆ ಅಂತ ಜ್ಞಾನೋದಯ ಆಯ್ತು! ಒಂದೊಂದನ್ನೇ ನಿರ್ದಾಕ್ಷಿಣ್ಯವಾಗಿ ಹೊರಗೆಸೆದು ಆಮೇಲೆ ಬ್ಯಾಗಿಗೆ ಬಿಸಿ ಬಿಸಿ ಕುದಿವ ನೀರಲ್ಲಿ ಸೋಪ್ವಾಟರಲ್ಲಿ ಅಭ್ಯಂಜನ ಮಾಡಿಸಿ ನಿಟ್ಟುಸಿರು ಬಿಟ್ಟೆ!
‘ನಾನೂ ತಿಗಣೆ ನೋಡಿದೆ’ ಅಂತ ನನ್ನ ಗೆಳತಿಯ ಬಳಿ ಕಥೆ ಹೊಡೆದಾಗ ಅವಳು ಈ ಬಗ್ಗೆ ರೀಸರ್ಚನ್ನೇ ಮಾಡಿರೋದಾಗಿ ಹೇಳಿದಳು! ಇಂಥಾ ಕಂಪೆನಿಗಳ, ಇಂಥಾ ಕಲರಿನ, ಈ ನಂಬರಿನ ಬಸ್ಸುಗಳಲ್ಲೆಲ್ಲ ತಿಗಣೆ ಪರಿವಾರ ಇದೆ ಅಂತ ಸಂಪೂರ್ಣ ಮಾಹಿತಿ ನೀಡಿದಳು. ವಿಶೇಷ ಅಂದ್ರೆ ಬರೀ ಸೀಟುಗಳಲ್ಲಿ ಮಾತ್ರ ಇರೋದಂತೆ ತಿಗಣೆಗಳು, ಸ್ಲೀಪರ್ಗಳಲ್ಲಿ ಇಲ್ಲವಂತೆ. ‘ಬಹುಶಃ ಕೂತಿರೋರ ಮೇಲೆ ತಿಗಣೆಗಳಿಗೆ ತುಂಬಾ ಪ್ರೀತಿ ಇರ್ಬೇಕು’ ಅಂದೆ. ‘ಅಲ್ಲ ಮಾರಾಯ್ತಿ, ಸ್ಲೀಪರ್ಗಳ ಮೇಲೆ ಬಿಸಿಲು ಬೀಳುತ್ತೆ ಚೆನ್ನಾಗಿ. ಅದರೆ ಸೀಟುಗಳ ಮೇಲೆ ಸ್ಲೀಪರ್ ಬರೋದ್ರಿಂದ ಜಾಸ್ತಿ ಬಿಸಿಲು ಬೀಳಲ್ಲ. ಅದ್ಕೇ ಇರ್ಬೋದು’ ಅಂದಳು. ಏನೋ... ಸಧ್ಯಕ್ಕಂತೂ ಅವಳ ಮಾಹಿತಿಯ ಮೇರೆಗೇ ಬಸ್ ಸೀಟ್ ರಿಸರ್ವ್ ಮಾಡಿಸೋದಾಗಿದೆ. ಆದರೆ ಬಸ್ಸಿನ ಕಲರ್, ನಂಬರ್ಗಳೆಲ್ಲ ಬಸ್ಸು ಹತ್ತುವಾಗಲೇ ಗೊತ್ತಾಗುವವುಗಳಾದ್ದರಿಂದ ತಿಗಣೆಗಳಿಂದ ಸೇವೆ ಮಾಡಿಸಿಕೊಳ್ಳುವ ಭಾಗ್ಯ ಕೆಲವು ಬಾರಿಯಾದರೂ ಸಿಕ್ಕೇ ಸಿಗುತ್ತದೆ. ಆಗೆಲ್ಲ ಅವಳೇ ಹೇಳಿದ ಮುಂಜಾಗರೂಕತಾ ಕ್ರಮಗಳನ್ನ (ಕಾಲಿಗೆ ಎಣ್ಣೆ ಹಚ್ಚಿಕೊಳ್ಳೋದು ಇತ್ಯಾದಿ) ತೆಗೆದುಕೊಂಡಿರಬೇಕಾಗುತ್ತದೆ. ಮೊನ್ನೆಯೂ ಬೆಂಗಳೂರಿಂದ ಬರುವಾಗ ತಿಗಣೆಗಳ ವಿಶೇಷ ಪ್ರೀತಿ, ಮಮತೆ ಪ್ರಾಪ್ತವಾಯ್ತು. ಇಳೀಬೇಕಾದರೆ, ‘ಅಣ್ಣಾ! ನಾನು ಕೂತಿರೋ ಸೀಟಲ್ಲಿ ಕೋಟ್ಯಂತರ ತಿಗಣೆಗಳು ಮಕ್ಳೂ ಮರಿಗಳ ಸಮೇತ ಇವೆ. ಸ್ವಲ್ಪ ಚೆನ್ನಾಗಿ ಯೋಗಕ್ಷೇಮ ವಿಚಾರಿಸ್ಕೊಳ್ಳಿ ಪಾಪ’ ಅಂತ ಕ್ಲೀನರ್ಗೆ ಹೇಳಿ ಬಂದೆ. ಏನು ವಿಚಾರಿಸ್ಕೋತಾರೋ ನೋಡ್ಬೇಕು.
ಇನ್ನೊಬ್ಬ ಗೆಳತಿ, ‘ಪೀಜಿಯಲ್ಲಿ ನಮ್ಮ ಬಂಕರುಗಳಲ್ಲಿ ಬೆಡ್ಬಗ್ಸೂ’ ಅಂತ ಅಲವತ್ತುಕೊಳ್ಳುತ್ತಿದ್ದಳು. ಹಾಸಿಗೆಯನ್ನ ಬಿಸಿಲಿಗಿಟ್ಟು, ಮಂಚವನ್ನೇ ಬಿಸಿಲಿಗಿಟ್ಟರೂ ಹೋಗಲಿಲ್ಲವಂತೆ. ಆಮೇಲೆ ಇವರೇ ಕೂತು ಮಂಚಕ್ಕೆ ಪೆಯಿಂಟ್ ಮಾಡಿ ತಿಗಣೆಗಳಿಂದ ಮುಕ್ತರಾದರಂತೆ! ‘ಹೇಗೂ ಎಕ್ಸ್ಪೀರಿಯನ್ಸ್ ಇದೆಯಲ್ಲ. ರಾತ್ರಿ ಬಸ್ಸುಗಳ ಸೀಟುಗಳಿಗೆ ಬಣ್ಣ ಹಚ್ಚೋ ಕಾಂಟ್ರಾಕ್ಟ್ ತಗೋ. ಒಳ್ಳೆ ಲಾಭ ಮಾಡ್ಬೋದು. ನಮ್ಮಂಥೋರಿಗೂ ಉಪಕಾರ ಆಗುತ್ತೆ’ ಅಂತ ನಾನು ಪುಕ್ಕಟೆ ಸಲಹೆ ಕೊಟ್ಟು ಉಗಿಸಿಕೊಂಡೆ.
ಏನೇ ಇರಲಿ. ಅಳಿವಿನ ಅಂಚಿನಲ್ಲಿರೋ(?) ಸಂತತಿಯನ್ನ ಸಾಕಿ ಸಲಹುತ್ತಿರುವ ರಾತ್ರಿ ಬಸ್ಸುಗಳ ಮಾಲೀಕರನ್ನ ಮೆಚ್ಚಲೇಬೇಕು ಅಲ್ವೇ? ನೀವೇನಂತೀರಿ? :-)
Friday, May 30, 2008
ವನಸುಮ
ಚಿಕ್ಕಂದಿನಿಂದ ಅಪ್ಪನ ಕಂಠದಿಂದ ಸದಾ ಕೇಳಿಸಿಕೊಳ್ಳುತ್ತಿದ್ದ ಹಾಡಿದು. ಅಪ್ಪ ಯಕ್ಷಗಾನ ಕಲೆಯಲ್ಲಿ ವಿಶೇಷ ಆಸಕ್ತಿ ಹೊಂದಿದ್ದವರಾಗಿದ್ದರಿಂದ, ವೇಷಗಾರಿಕೆ, ಭಾಗವತಿಕೆ, ಮದ್ದಲೆ ಅಂತ ಆ ಕ್ಷೇತ್ರದಲ್ಲಿ ಸ್ವಲ್ಪ ಮಟ್ಟಿಗೆ ಕೈಯಾಡಿಸಿದವರೂ ಆಗಿದ್ದರಿಂದ ಅವರು ಹಾಡುವ ಹಾಡುಗಳೆಲ್ಲ ಭಾಗವತರ ಪದಗಳಂತೆ ಇರುತ್ತವೆ ಅಂತ ನಾನು ಸದಾ ಅವರನ್ನು ಛೇಡಿಸುವುದಿದೆ. ಕೆಲವೊಮ್ಮೆ ಅವರು ಸುಮ್ಮನೆ ಶಾಸ್ತ್ರೀಯ ಹಾಡುಗಳನ್ನೋ, ಅಪ್ಪಟ ಸಿನಿಮಾ ಹಾಡುಗಳನ್ನೋ ಹಾಡುತ್ತಿದ್ದರೂ ಅದು ಯಕ್ಷಗಾನದ್ದೇ ಪದವೇನೋ ಅನ್ನಿಸುವುದಿದೆ ನನಗೆ! ಹಾಗೇ ಈ ಹಾಡನ್ನೂ ನಾನು ಬಹುಕಾಲ ಯಾವುದೋ ಯಕ್ಷಗಾನದ ಪದ ಅಂತಲೇ ಅಂದುಕೊಂಡಿದ್ದೆ.
‘ಜನಕೆ ಸಂತಸವೀವ ಘನನು ನಾನೆಂದೆಂಬ ಎಣಿಕೆ ತೋರದೆ ಜಗದ ಪೊಗಳಿಕೆಗೆ ಬಾಯ್ಬಿಡದೆ...’
ಅನ್ನುತ್ತ ಅಪ್ಪ ಆವತ್ತೊಮ್ಮೆ ಭಾವಪೂರ್ಣವಾಗಿ ಹಾಡಿಕೊಳ್ಳುತ್ತಿರಬೇಕಾದರೆ ಆ ಸಾಲುಗಳು ನನ್ನನ್ನು ಬಹುವಾಗಿ ಆಕರ್ಷಿಸಿಬಿಟ್ಟುವು. "ಯಾವ ಯಕ್ಷಗಾನದ ಹಾಡಪ್ಪಯ್ಯ ಇದು? ಒಂಥರಾ ಚೆನ್ನಾಗಿತ್ತು?" ಅಂತಲೇ ಕೇಳಿದೆನಿರಬೇಕು! ಅಪ್ಪಯ್ಯ ನಗುತ್ತ, "ಅಲ್ಲ ಮಾರಾಯ್ತಿ. ಇದು ಯಕ್ಷಗಾನದ್ದಲ್ಲ. ನನ್ನ ಚಿಕ್ಕಂದಿನಲ್ಲಿ ನನ್ನನ್ನು ತುಂಬ ಪ್ರಭಾವಿಸಿದ ಪದ್ಯ" ಅನ್ನುತ್ತ ಕವನದ ಪೂರ್ಣ ಪಾಠ ಒಪ್ಪಿಸಿ, ಅದರ ಅರ್ಥವನ್ನೂ ವಿವರಿಸಿದರು.
ವನಸುಮದೊಲೆನ್ನ ಜೀ-
ವನವು ವಿಕಸಿಸುವಂತೆ
ಮನವನನುಗೊಳಿಸು ಗುರುವೆ, ಹೇ ದೇವಾ
ಜನಕೆ ಸಂತಸವೀವ
ಘನನು ನಾನೆಂದೆಂಬ
ಎಣಿಕೆ ತೋರದೆ ಜಗದ ಪೊಗಳಿಕೆಗೆ ಬಾಯ್ ಬಿಡದೆ
ಕಾನನದಿ ಮಲ್ಲಿಗೆಯು
ಮೌನದಿಂ ಬಿರಿದು ನಿಜ
ಸೌರಭವ ಸೂಸಿ ನಲವಿಂ
ತಾನೆಲೆಯ ಪಿಂತಿರ್ದು
ದೀನತೆಯ ತೋರಿ ಅಭಿ-
ಮಾನವನು ತೊರೆದು ಕೃತಕೃತ್ಯತೆಯ ಪಡೆವಂತೆ
ಉಪಕಾರಿ ನಾನು ಎ-
ನ್ನುಪಕೃತಿಯು ಜಗಕೆಂಬ
ವಿಪರೀತ ಮತಿಯನುಳಿದು
ವಿಪುಲಾಶ್ರಯವನೀವ
ಸುಫಲ ಸುಮಭರಿತ ಪಾ-
ದಪದಂತೆ ನೈಜಮಾದೊಳ್ವಿನಿಂ ಬಾಳ್ವವೊಲು
ತಮ್ಮ ಹರೆಯದಲ್ಲಿ ಅಪ್ಪ ಅವರಮ್ಮನ ಮನೆಗೆ ಕಾಡುದಾರಿಯಲ್ಲಿ ಮೈಲುಗಟ್ಟಲೆ ಒಬ್ಬರೇ ನಡೆದುಕೊಂಡು ಹೋಗಬೇಕಾದಾಗ ಈ ಹಾಡನ್ನು ಗಟ್ಟಿಯಾಗಿ ಹಾಡಿಕೊಳ್ಳುತ್ತಿದ್ದರಂತೆ. ಈ ಹಾಡಿನ ‘ವನಸುಮ’ದಂತೆ ತಾನಾಗಬೇಕು, ತನ್ನಿಂದಾದಷ್ಟು ಕೆಲಸಗಳನ್ನು ಮಾಡಿ ನಿರಹಂಕಾರಿಯಾಗಿರಬೇಕು, ಉಪಕಾರ ಮಾಡಲಾಗದಿದ್ದರೆ ಬೇರೆಯವರಿಗೆ ಅಪಕಾರವನ್ನಾದರೂ ಮಾಡದಂತಿದ್ದು ದೀನನಾಗಿರಬೇಕು ಅನ್ನುವ ಮನೋಧರ್ಮವನ್ನು ರೂಪಿಸುತ್ತಿದ್ದ ಹಾಡು, ಅಪ್ಪನ ಕಂಚಿನ ಕಂಠದಿಂದಾಗಿ ಕಾಡುಪ್ರಾಣಿಗಳನ್ನೂ ದೂರವಿಡುತ್ತಿತ್ತಂತೆ! ಅಧ್ಯಾತ್ಮದಂಥ ಕ್ಲಿಷ್ಟ ವಿಷಯಗಳನ್ನೂ ಸರಳವಾಗಿ ವಿವರಿಸಬಲ್ಲ ಡಿ. ವಿ. ಗುಂಡಪ್ಪನಂಥವರು ಮಾತ್ರ ಇಂಥ ಅದ್ಭುತ ಹಾಡುಗಳನ್ನು ಬರೆಯಬಹುದು ಅಂತ ಷರಾ ಕೂಡ ಕೊಟ್ಟರು ಅಪ್ಪ. ನಾನೂ ನನ್ನದೇ ರಾಗದಲ್ಲಿ ಹಾಡಿಕೊಂಡು ಆ ದೀನಭಾವವನ್ನು ಅನುಭವಿಸಿದೆ.
ವಿಶೇಷ ಅಂದರೆ, ಅಪ್ಪ ಕಲಿಯುವಾಗ ೬ ನೇ ತರಗತಿಯಲ್ಲೂ, ಕಲಿಸುವಾಗ ೮ರಲ್ಲೂ ಪಠ್ಯಸಾಹಿತ್ಯವಾಗಿದ್ದ ಈ ಹಾಡು ನಾನು ಕಲಿಯುವಾಗ ಯಾವ ತರಗತಿಯಲ್ಲೂ ಇರಲೇ ಇಲ್ಲ. ಸಣ್ಣ ವಿಷಯವನ್ನೂ ಜಾಹೀರಾತು ಕೊಟ್ಟುಕೊಂಡೇ ಜಗತ್ತಿಗೆ ತಿಳಿಸಲು ಹವಣಿಸುವ ಪ್ರಚಾರಯುಗದ ನಮ್ಮ ಪೀಳಿಗೆಗೆ ಈ ಹಾಡು ಅರ್ಥವಾಗಲಾರದು ಅಂತಲೋ, ಪ್ರತ್ಯುಪಕಾರದ ನಿರೀಕ್ಷೆಯಲ್ಲೇ ಉಪಕಾರ ಮಾಡುವ ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಇಂಥ ಹಾಡು ಅಪ್ರಸ್ತುತ ಅಂತಲೋ ತೆಗೆದುಹಾಕಿರಬಹುದು ಪ್ರಾಯಶಃ.
Thursday, April 17, 2008
ಹೊಸ ಹಾದಿಯ ಭಯ
ಈಗ ದಿನದ ಸುಮಾರು ೭-೮ ಗಂಟೆಯಾದರೂ ನನ್ನ ಸಂಗಾತಿಯಾಗುವ ಈ ಕಂಪ್ಯೂಟರ್ ಕೇವಲ ಕೆಲವೇ ವರ್ಷಗಳ ಹಿಂದೆ ತೀರಾ ‘ಅಪರಿಚಿತ’ ಅನ್ನಿಸುತ್ತಿದ್ದುದು ಸುಳ್ಳಲ್ಲ. ‘ಇಲಿ’ ಹಿಡಿಯಲು ಒದ್ದಾಡುತ್ತಿದ್ದುದು, ಕೀಬೋರ್ಡ್ನಲ್ಲಿ ಅಕ್ಷರಗಳಿಗಾಗಿ ಹುಡುಕುತ್ತಿದ್ದುದು, ಯಾವ ಕೀ ಒತ್ತಿದರೆ ಏನಾಗುತ್ತದೋ ಅಂತ ಭಯ ಪಡುತ್ತಿದ್ದುದು, ಅದು ‘ಢಣ್’ ಅಂತ ಎರರ್ ತೋರಿಸಿದ ಕೂಡಲೆ ಸಿಕ್ಕಾಪಟ್ಟೆ ಹೆದರಿ ಎಲ್ಲ ಕ್ಲೋಸ್ ಮಾಡುತ್ತಿದ್ದುದು... ಎಲ್ಲ ಈಗ ಎಣಿಸಿಕೊಂಡರೆ ತುಂಬ ನಗು ಬರುತ್ತದೆ, ಖುಶಿಯಾಗುತ್ತದೆ. ಜೊತೆಗೆ ಸಧ್ಯ ಆ ಹಂತದಿಂದ ಇಲ್ಲಿವರೆಗಾದರೂ ಬಂದಿದ್ದೇನಲ್ಲ ಅಂತ ಒಂಥರಾ ಹೆಮ್ಮೆಯೂ ಆಗುತ್ತದೆ! ಕಂಪ್ಯೂಟರ್ ಅಂತಲ್ಲ, ಯಾವುದನ್ನೇ ಆದರೂ ಹೊಸದಾಗಿ ಕಲಿಯುವಾಗ ಉಂಟಾಗುವ ಭಯ, ಸಂದೇಹಗಳು, ನಾವು ಮಾಡುವ ‘ಸಿಲ್ಲಿ’ ತಪ್ಪುಗಳನ್ನೆಲ್ಲ ಕಲಿತಾದ ಮೇಲೆ ನೆನೆಸಿಕೊಂಡರೆ ಆಗುವ ಖುಶಿಯೇ ಬೇರೆ. ಆ ತರ ನನ್ನ ಕೆಲವು ಅನುಭವಗಳನ್ನು ಇಲ್ಲಿ ಬರೆದಿದ್ದೇನೆ. ನೀವೂ ನಿಮ್ಮದನ್ನು ಹಂಚಿಕೊಂಡರೆ ಬಡಜೀವ ತುಂಬ ಸಂತೋಷ ಪಡುತ್ತದೆ!
* * *
ನನಗೆ ಈ-ಮೇಲ್ ನ ಪರಿಚಯ ಮಾಡಿಸಿದ್ದು ನನ್ನ ಗೆಳತಿ. ಆಗಿನ್ನೂ ನನಗೆ ಕಂಪ್ಯೂಟರೇ ಹೊಸತು. ಅವಳು ನನ್ನನ್ನ ಸೈಬರ್ಗೆ ಕರಕೊಂಡು ಹೋಗಿ ತಾನೇ ನನ್ನ ವಿವರಗಳನ್ನೆಲ್ಲ ಎಂಟ್ರಿ ಮಾಡಿ ಈ-ಮೇಲ್ ಐಡಿಯನ್ನೂ, ಪಾಸ್ವರ್ಡನ್ನೂ ಅವಳೇ ಯೋಚಿಸಿ ನನಗೊಂದು ಯಾಹೂ ಐಡಿ ಕ್ರಿಯೇಟ್ ಮಾಡಿಕೊಟ್ಟಳು. ಅದಾದ ನಂತರ ಒಂದೆರಡು ಬಾರಿ ಅವಳೊಂದಿಗೇ ಹೋಗಿ ನನ್ನ ಎಕೌಂಟನ್ನು ತುಂಬ ಅಭಿಮಾನದಿಂದ ಓಪನ್ ಮಾಡಿ ಖಾಲಿ ಇನ್ಬಾಕ್ಸನ್ನು ನೋಡಿ ಖುಶಿಪಟ್ಟು ಬರುತ್ತಿದ್ದೆ. ಆಮೇಲೆ ನಮ್ಮ ಮನೆಗೂ ಕಂಪ್ಯೂಟರ್ ಬಂತು, ಇಂಟರ್ನೆಟ್ ಕೂಡ ಬಂತು ಕಾಲಾನುಕ್ರಮದಲ್ಲಿ. ರಾತ್ರಿ ಹೊತ್ತು ನಮ್ಮಣ್ಣ ಇಂಟರ್ನೆಟ್ ಓಪನ್ ಮಾಡಿ ಅದೇನೇನೋ ಪಟಪಟನೆ ಸರ್ಚ್ ಮಾಡುತ್ತಿದ್ದರೆ ನನಗೆ ‘ಅಬ್ಬಾ!, ಇವನಿಗೆ ಏನೆಲ್ಲ ಗೊತ್ತು... ‘ಸರ್ವಜ್ಞ ’ನೇ ಸರಿ!’ ಅನಿಸುತ್ತಿತ್ತು. ಸುಮ್ಮನೆ ಅವನ ಹಿಂದೆ ಕೂತು ಅವ ಮಾಡುತ್ತಿದ್ದುದನ್ನೆಲ್ಲ ನೋಡುತ್ತಿದ್ದೆ. ಒಮ್ಮೆ ಹೀಗೇ ಅವನ ಕೆಲಸವಾದ ಮೇಲೆ ನನ್ನ ಯಾಹೂ ಅಕೌಂಟ್ ಓಪನ್ ಮಾಡುವ ಮನಸಾಯ್ತು. ಅಣ್ಣನ ಬಳಿ ಹೇಳಿದರೆ, ‘ಆಯ್ತು, ನೋಡಿ ಶಟ್ಡೌನ್ ಮಾಡು’ ಅಂತ ಹೇಳಿ ಹೋಗಿ ಮಲಗಿಯೇ ಬಿಟ್ಟ! ಸರಿ, ಇನ್ನೇನು ಮಾಡುವುದು ಅಂತ ನಾನು ನನ್ನ ಗೆಳತಿ ಹೇಳಿದ್ದನ್ನೆಲ್ಲ ನೆನಪಿಸಿಕೊಂಡು ಹೆದರಿ ಹೆದರಿ ಇನ್ಬಾಕ್ಸ್ ಓಪನ್ ಮಾಡಿದೆ. ನೋಡಿದರೆ ಒಂದು ಮೆಸ್ಸೇಜ್ ಇದೆ! ಅಬ್ಬಾ! ಆ ಖುಶಿಯನ್ನು ಪದಗಳಲ್ಲಿ ವರ್ಣಿಸುವುದೇನು ಸಾಧ್ಯವೇ?! ನನ್ನ ಗೆಳತಿಯೇ ಅದನ್ನ ಕಳಿಸಿದ್ದು ಅಂತ ಅವಳ ಹೆಸರನ್ನೂ ತೋರಿಸುತ್ತಿದೆ ಅದು. ಸರಿ, ಏನು ಬರೆದಿದ್ದಾಳೋ ನೋಡೋಣ ಅಂತ ಅವಳ ಹೆಸರ ಮೇಲೆ ಕ್ಲಿಕ್ ಮಾಡಿದರೆ ಏನೂ ಓಪನ್ ಆಗುತ್ತಿಲ್ಲ. ಸುಮಾರು ಹೊತ್ತು ಏನೇನೋ ಮಾಡಿ ತಿಣುಕಾಡಿದರೂ ಆಗುತ್ತಿಲ್ಲ. ಮೆಸ್ಸೇಜ್ ಓದುವುದು ಹೇಗೆ ಅಂತ ಅವಳು ಹೇಳಿಕೊಟ್ಟಿದ್ದರೂ ನನಗದು ಮರೆತುಹೋಗಿತ್ತು. ಈ ಅಣ್ಣ ಬೇರೆ ಮಲಗಿದ್ದಾನೆ. ಎಬ್ಬಿಸಿ ಕೇಳಿದರೆ ‘ಇಷ್ಟೂ ಗೊತ್ತಿಲ್ಲವಾ ನಿನಗೆ?’ ಅಂತ ಕಾಲೆಳೆಯುತ್ತಾನೆ ಖಂಡಿತ. ಬೇಡ, ನಾನೇ ಏನಾದರೂ ಮಾಡಬೇಕು ಅಂತ ತೀರ್ಮಾನಿಸಿ ಮತ್ತಷ್ಟು ಒದ್ದಾಡಿದೆ. ಊಹ್ಞೂ, ಜಗ್ಗುತ್ತಿಲ್ಲ. ಅಷ್ಟರಲ್ಲಿ ಅಲ್ಲೆಲ್ಲೋ ‘ಹೆಲ್ಪ್’ ಅಂತ ಕಾಣಿಸಿತು. ಅದನ್ನ ಕ್ಲಿಕ್ ಮಾಡುವುದೋ, ಬೇಡವೋ ಅಂತ ದ್ವಂದ್ವದಲ್ಲಿ ಬಿದ್ದು, ಕೊನೆಗೆ ಆಗಿದ್ದಾಗಲಿ ಅಂತ ಒತ್ತಿದೆ. ಅದರಲ್ಲೂ ಹುಡುಕಿ ಹುಡುಕಿ ಕೊನೆಗೆ ‘click on the subject to read the message' ಅಂತ ಓದಿಕೊಂಡು ಅದರಂತೆ ಮೆಸ್ಸೇಜ್ ಓದಿದಾಗ ನನಗೆ ಜಗತ್ತನ್ನೇ ಗೆದ್ದ ಸಂತೋಷ! ಮೆಸ್ಸೇಜ್ ಇದ್ದಿದ್ದಾದರೂ ಏನು? hi manga... ಅಂತೇನೋ ಅಷ್ಟೇ! ಆದರೆ ಹೊಸತನ್ನು ನಾನೇ ಹುಡುಕಿ ಕಲಿತ ಸಂತೋಷದಲ್ಲಿ ನನಗದೆಲ್ಲ ಅಷ್ಟು ಮುಖ್ಯವಾಗಿರಲಿಲ್ಲ!
* * *
ಇನ್ನು ಅಡಿಗೆಮನೆ ವಿಷಯಕ್ಕೆ ಬಂದರೆ, ಅಬ್ಬಬ್ಬಾ! ಅಲ್ಲಿ ಸಾವಿರ ಗೊಂದಲಗಳು, ಸಂದೇಹಗಳು. ಏನು ಹಾಕಬೇಕು? ಎಷ್ಟು ಹಾಕಬೇಕು ಎಂಬ ಪ್ರಶ್ನೆಗಳ ಜೊತೆಗೆ, ಯಾವಾಗ, ಹೇಗೆ ಹಾಕಬೇಕು ಅನ್ನುವುದೂ ಕೂಡ ದೊಡ್ಡ ಕನ್ಫ್ಯೂಷನ್ ಇಲ್ಲಿ. ನನಗೆ ಮೊದ ಮೊದಲು ಬರುತ್ತಿದ್ದ ಸಂದೇಹಗಳೆಂದರೆ ಯಾವುದನ್ನೆಲ್ಲ ತೊಳೆದು ಬೇಯಲಿಕ್ಕೆ ಹಾಕಬೇಕು (ಉದಾಹರಣೆಗೆ: ಬೇಳೆ, ಅಕ್ಕಿ), ಯಾವುದನ್ನು ಹಾಗೇ ಹಾಕಬಹುದು (ಉದಾಹರಣೆಗೆ: ರವೆ, ಹೆಸರುಕಾಳು ಇತ್ಯಾದಿ) ಅಂತ. ಇದರಲ್ಲಿ ಕೆಲವು ಎರಡೂ ಕೆಟಗರಿಗಳಿಗೆ ಸೇರುತ್ತವಾದ್ದರಿಂದ (ಉದಾಹರಣೆಗೆ: ಅವಲಕ್ಕಿ) ಪಾಪ, ನನ್ನಮ್ಮ ನನಗೆ ಅರ್ಥ ಮಾಡಿಸೋಕೆ ತುಂಬ ಕಷ್ಟ ಪಟ್ಟಿದ್ದಂತೂ ಸತ್ಯ!
ಅದೂ ಅಲ್ಲದೇ, ಅವಳು ಹೇಳಿಕೊಡುವಾಗೆಲ್ಲ ಬಾರದ ಸಂದೇಹಗಳು ಅವಳ ಅನುಪಸ್ಥಿತಿಯಲ್ಲಿ ಹಾಳಾದ್ದು ಧುತ್ತಂತ ಬಂದು ಬಿಡುತ್ತವೆ. ಒಗ್ಗರಣೆಗೆ ಎಣ್ಣೆ ಹಾಕುವುದೋ, ತುಪ್ಪವೋ.. ಹುರಿದು ಅರೆಯಬೇಕೋ, ಅರೆದು ಹುರಿಯಬೇಕೋ ಅಂತೆಲ್ಲ ಗೊಂದಲಕ್ಕೆ ಬಿದ್ದು, ನನ್ನದೇ ತೀರ್ಮಾನ ಮಾಡಿ ಏನೋ ಒಂದು ಮಾಡಿ ಕೊನೆಗದು ‘ಮಾಡಿದ್ದುಣ್ಣೋ ಮಹಾರಾಯ’ ಎಂಬಂತಾದದ್ದು ಅದೆಷ್ಟು ಸಲವೋ!
ಹೊಸ ರುಚಿ ಮಾಡುವಾಗಂತೂ ಕೇಳುವುದೇ ಬೇಡ, ಆ ರೆಸಿಪಿ ನನ್ನ ಕಣ್ಣ ಮುಂದೇ ಇರಬೇಕು, ಎಲ್ಲ ರೆಡಿ ಆಗುವವರೆಗೆ. ಅದರಲ್ಲಿದ್ದ ವಿವರಣೆಗಳನ್ನೆಲ್ಲ ಚಾಚೂ ತಪ್ಪದೆ ಪಾಲಿಸಿ ತಯಾರಿಸಿದ ಮೇಲೆ ಅದನ್ನ ನನ್ನ ‘ಬಲಿಪಶುಗಳು’ ಟೇಸ್ಟ್ ಮಾಡುವಾಗ ಒಳಗೊಳಗೇ ಹೆದರಿಕೆಯಾಗುತ್ತಿರುತ್ತದೆ. ಓರೆಗಣ್ಣಿನಿಂದ ತಿನ್ನುವವರ ಮುಖವನ್ನೇ ನೋಡುತ್ತ ಹೇಗಾಗಿರಬಹುದು ಅನ್ನುವ ಕಲ್ಪನೆ ಮಾಡುತ್ತೇನೆ. ಅವರೇನಾದರೂ ನನ್ನನ್ನು ನೋಡುತ್ತ ಪೆಚ್ಚುಪೆಚ್ಚಾಗಿ ನಕ್ಕರೆ ಎಲ್ಲೋ ಏನೋ ಎಡವಟ್ಟು ಖಂಡಿತ ಆಗಿದೆ ಅಂತ ನನಗೆ ಕನ್ಫರ್ಮ್ ಆಗುತ್ತೆ!
ನನ್ನ ಗೆಳತಿಯೊಬ್ಬಳು ಪಾಪ, ಮೊದಲ ಬಾರಿ ಅನ್ನ ಮಾಡುವಾಗ, ಅಕ್ಕಿಯನ್ನ ತೊಳೆಯದೇ, ನೀರೂ ಹಾಕದೇ ಬರಿಯ ಅಕ್ಕಿಯನ್ನು ಕುಕ್ಕರ್ ಒಳಗೆ ಇಟ್ಟು ಬೇಯಿಸಿದ್ದಳಂತೆ! ಅನ್ನ(?) ಹೇಗಾಗಿದ್ದಿರಬಹುದು ಅನ್ನುವುದು ನಿಮ್ಮ ಊಹೆಗೆ ಬಿಟ್ಟದ್ದು.
* * *
ಟೂ ವೀಲರೋ, ಕಾರೋ ಕಲಿಯುವಾಗ ಖಂಡಿತ ನೀವೂ ನನ್ನ ತರ ಗೊಂದಲಕ್ಕೆ ಬಿದ್ದಿರುತ್ತೀರಿ ಅನ್ನೋದು ನನ್ನ ನಂಬಿಕೆ. ಸ್ಟಾರ್ಟ್ ಯಾವುದು, ಬ್ರೇಕ್ ಯಾವುದು, ಎಕ್ಸ್ಲರೇಟರ್ ಯಾವುದು ಅಂತೆಲ್ಲ ಅರೆದು ಕುಡಿದು, ನಾವು ಮೊದಲ ಬಾರಿ ರಸ್ತೆಯಲ್ಲಿ ಗಾಡಿ ತೆಗೆದುಕೊಂಡು ಹೋಗುವಾಗ ಅದೇನಾಗುತ್ತದೋ ಈ ಗಾಡಿಗೆ?! ಎದುರಲ್ಲಿ ತಮ್ಮ ಪಾಡಿಗೆ ಬರುತ್ತಿರುವವರನ್ನೆಲ್ಲ ತನ್ನ ಆಜನ್ಮವೈರಿಗಳೆಂದು ತೀರ್ಮಾನಿಸಿ, ಅವರನ್ನ ಗುದ್ದಿಯೇ ಸಿದ್ಧ ಅಂತ ರಸ್ತೆಯ ಈ ಬದಿ ಅಷ್ಟು ಜಾಗವಿದ್ದರೂ ರಾಂಗ್ ಸೈಡ್ಗೇ ಓಡುತ್ತಿರುತ್ತದೆ. ಗಾಡಿ ಅಷ್ಟೆಲ್ಲ ಹುಚ್ಚಾಪಟ್ಟೆ ಆಡುತ್ತಿರುವಾಗ ಅದರ ಮೇಲೆ ಆಸೀನಳಾಗಿ ಜವಾಬ್ದಾರಿ ಹೊತ್ತ ನಾನು ಸುಮ್ಮನಿರಲು ಸಾಧ್ಯವೇ? ತಕ್ಷಣಕ್ಕೆ ಹೊಳೆಯುವ ಉಪಾಯ ಬ್ರೇಕ್ ಹಾಕಿ ಗಾಡಿ ನಿಲ್ಲಿಸುವುದೊಂದೇ. ಆದರೆ ಆ ಟೆನ್ಷನಲ್ಲಿ ‘ಬ್ರೇಕ್ ಹಾಕುವಾಗ ಎಕ್ಸ್ಲರೇಟರ್ ಕೊಡಬಾರದು’ ಅಂತ ಕಲಿಸುವಾಗ ಹೇಳಿಕೊಟ್ಟ ಮೂಲ ಪಾಠ ಗಾಳಿಗೆ ತೂರಿಹೋಗಿರುತ್ತದೆ. ಪರಿಣಾಮ.......
* * *
ಇನ್ನು ಕ್ರೀಡೆಯ ವಿಷಯಕ್ಕೆ ಬಂದರೆ, ಆಡುವುದಕ್ಕಿಂತ ನೋಡುವುದು ಜಾಸ್ತಿ ಅನ್ನೋ ಜಾತಿಯವಳು ನಾನು. ನೋಡುವಾಗಲೂ ಸಂದೇಹಗಳು ಬಂದೇ ಬರುತ್ತವೆ. ಟೆನಿಸ್, ಕ್ರಿಕೆಟ್, ಎಫ್ ೧ ಇತ್ಯಾದಿಗಳ ರೂಲ್ಸುಗಳನ್ನ ನನಗೆ ಅರ್ಥ ಮಾಡಿಸಲಿಕ್ಕೆ ಸಿಕ್ಕಾಪಟ್ಟೆ ಬುದ್ಧಿ ಖರ್ಚು ಮಾಡಿದ್ದಾರೆ ನನ್ನ ಅಣ್ಣಂದಿರು. ಇಷ್ಟಾಗಿಯೂ, ಕ್ರಿಕೆಟಲ್ಲಿ LBW ಔಟನ್ನು ಅದು ಹೇಗೆ ತೀರ್ಮಾನ ಮಾಡುತ್ತಾರೋ ನನಗಿನ್ನೂ ಅರ್ಥವಾಗಿಲ್ಲ!
ಕ್ರಿಕೆಟ್ನ ನೋಬಾಲ್, ವೈಡ್ಬಾಲ್ ಇತ್ಯಾದಿಗಳ ಬಗ್ಗೆ ತೀರ ಕನ್ಫ್ಯೂಸ್ ಆಗುತ್ತಿದ್ದ ಸಮಯದಲ್ಲಿ ನನ್ನ ಪ್ರಶ್ನೆಯೊಂದು ಹೀಗಿತ್ತು: ವೈಡ್ಬಾಲ್ಗೆ ಬೋಲ್ಡ್ ಔಟ್ ಆದರೆ, ಔಟೋ ನಾಟೌಟೋ?!!! ಮಿಲಿಯನ್ ಡಾಲರ್ ಪ್ರಶ್ನೆ! ಉತ್ತರಿಸಲು ನೀವೂ ಪ್ರಯತ್ನ ಪಡಬಹುದು.
* * *
ನನ್ನ ಅಜ್ಞಾನದಿಂದಾಗುವ ತಪ್ಪುಗಳಿಂದ ಇತರರಿಗೆ ತೊಂದರೆಯಾಗಿದೆಯೇ ಅಂತ ಕೇಳ್ತೀರಾದರೆ ಅಂಥವು ತುಂಬ ಇವೆ ಬಿಡಿ! ಕೆಲವು ಸ್ಯಾಂಪಲ್ಗಳನ್ನ ನೋಡಿ:
ಒಮ್ಮೆ ಉಡುಪಿಯ ಕಲ್ಸಂಕ ಬಸ್ ಸ್ಟ್ಯಾಂಡಿನ ಬಳಿ ನಡೆದುಕೊಂಡು ಬರುತ್ತಿದ್ದಾಗ ವ್ಯಾನಲ್ಲಿ ಬರುತ್ತಿದ್ದವರು ಯಾರೋ ಗಾಡಿ ನಿಲ್ಲಿಸಿ, ಮಲ್ಪೆ ಬೀಚಿಗೆ ಹೋಗುವ ದಾರಿ ಕೇಳಿದರು. ಜೀವಮಾನದಲ್ಲಿ ನನ್ನ ಬಳಿ ರೂಟ್ ಕೇಳಿದ ಮೊದಲಿಗರಿರಬೇಕು ಅವರು! ನನ್ನ ಬಳಿ ಕೇಳದೆ, ಬರುತ್ತಿದ್ದ ದಾರಿಯಲ್ಲೇ ಸೀದಾ ೨-೩ ಕಿ.ಮೀ. ಮುಂದೆ ಹೋಗಿದ್ದರೆ ಸೀದಾ ಮಲ್ಪೆ ಬೀಚಿಗೇ ಹೋಗಿ ಬೀಳುತ್ತಿದ್ದರು ಪಾಪ, ನನ್ನ ಬಳಿ ಕೇಳಿ ಸಿಕ್ಕಿ ಹಾಕಿಕೊಂಡರು. ನನಗೆ ಆ ರಾಜಮಾರ್ಗದ ಬಗ್ಗೆ ಆವಾಗ ದೇವರಾಣೆ ಗೊತ್ತಿರಲಿಲ್ಲ. ನಾನು ಸ್ಟೈಲಾಗಿ, ಭಾರೀ ಉಪಕಾರ ಮಾಡುತ್ತಿರುವವರ ಪೋಸಿನಲ್ಲಿ ಅವರಿಗೆ ‘ರೈಟ್ ಟರ್ನ್’ ಅಂದೆ. ಅದರ ಮೂಲಕವೂ ಹೋಗಬಹುದಿತ್ತಾದರೂ ಅದು ಸುತ್ತು ಬಳಸು ದಾರಿ. ಮೇಲಾಗಿ ರಸ್ತೆ ಚೆನ್ನಾಗಿಲ್ಲದ, ಕಿಷ್ಕಿಂಧೆಯಂತ ಇಕ್ಕಟ್ಟಿನ ದಾರಿ. ೬-೭ ಕಿ.ಮೀ. ಆದರೂ ಬೇಕು ಅಲ್ಲಿಂದ ಮಲ್ಪೆಗೆ! ಆ ರಸ್ತೆಯಲ್ಲಿ ಆ ದೊಡ್ಡ ವಾಹನವನ್ನು ಅದು ಹೇಗೆ ತೆಗೆದುಕೊಂಡು ಹೋದರೋ ಪಾಪ! ಒಟ್ಟಾರೆ, ಅವರಿಗೆ ಸತ್ಯದ ಅರಿವಾಗಿದ್ದರೆ ನನ್ನ ಎಷ್ಟು ಬೈದುಕೊಂಡಿರುತ್ತಾರೋ, ಇನ್ಯಾವತ್ತೂ ಹುಡುಗಿಯರ ಬಳಿ ರೂಟ್ ಕೇಳುವ ಸಾಹಸ ಮಾಡಲಾರರು ಅಂತ ಅನಿಸಿತು ಅಮೇಲೆ ನಂಗೆ.
ಪ್ರೈಮರಿ ಸ್ಕೂಲಲ್ಲಿ ಇದ್ದಾಗ ಗೆಳತಿಯೊಬ್ಬಳು ಇನ್ನೊಬ್ಬಳ ದೂರುಗಳೊಂದಿಷ್ಟನ್ನು ನನ್ನ ಬಳಿ ಊದಿದಳು. ‘ಚಾಡಿ ಹೇಳಬಾರದು’ ಅನ್ನೋ ಕನಿಷ್ಟ ಜ್ಞಾನವೂ ಆಗ ಇಲ್ಲದಿದ್ದ ನಾನು (ಈಗ ಖಂಡಿತ ಇದೆ. ನನ್ನ ನಂಬಿ, ಪ್ಲೀಸ್) ಆ ‘ಇನ್ನೊಬ್ಬಳ’ ಬಳಿ ಹೋಗಿ ಚಾಚೂ ತಪ್ಪದೆ ವರದಿ ಒಪ್ಪಿಸಿ, ಅವರಿಬ್ಬರ ನಡುವೆ ಕಲಹಕ್ಕೆ ಕಾರಣಳಾಗಿ ‘ನಾರದ’ ಅನ್ನಿಸಿಕೊಂಡೆ.
ಇನ್ನು, ಪಿಯುಸಿಯಲ್ಲಿದ್ದಾಗ, ನನ್ನ ಗೆಳತಿಯೊಬ್ಬಳಿಗೆ ‘ಮದ್ರಾಸ್ ಐ’ (ಕೆಂಗಣ್ಣು) ಪ್ರಾರಂಭವಾಯ್ತು. ಕೆಂಗಣ್ಣು ಇರುವವರ ಕಣ್ಣನ್ನು ನೋಡಿದ ಕೂಡಲೆ ಆ ಕ್ರಿಮಿ ಅಲ್ಲಿಂದ 'ತುಪುಕ್' ಅಂತ ಹಾರಿ ನಮ್ಮ ಕಣ್ಣಿಗೆ ಬರುತ್ತದೆ ಅಂತ ನಂಬಿಕೊಂಡಿದ್ದ ನಾವು ಅವಳನ್ನು ದೂರ ಇಟ್ಟೆವು. ಪಾಪ, ದಿನವೂ ನಮ್ಮ ಜತೆಗೇ ಓಡಾಡುವ ಹುಡುಗಿ. ಎಷ್ಟೆಂದು ಒಬ್ಬಳೇ ಇದ್ದಾಳು? ನಾವು avoid ಮಾಡಿದರೂ ತಿಳಿಯದಂತೆ ನಮ್ಮೆದುರೇ ಬರತೊಡಗಿದಳು. ಅಷ್ಟರಲ್ಲಿ ನಾನು ‘ನಮ್ಮೆದುರು ಬಂದು ಹಾಗೆ ನೋಡ್ಬೇಡ ಮಾರಾಯ್ತಿ’ ಅಂತೇನೋ ಸ್ವಲ್ಪ ಖಾರವಾಗಿಯೇ ಹೇಳಿಬಿಟ್ಟೆ. ಆಗೇನೂ ಹೇಳದ ಅವಳು, ೨-೩ ದಿನ ಬಿಟ್ಟು, ‘ನಾನು ನಿನ್ನ ತುಂಬ ಹಚ್ಚಿಕೊಂಡಿದ್ದೆ. ಅವರೆಲ್ಲ ಏನು ಹೇಳಿದರೂ ನಂಗೆ ಬೇಜಾರಾಗ್ಲಿಲ್ಲ. ನೀನೂ ಹೇಳಿದಿಯಲ್ಲ ನನ್ನ ನೋಡ್ಬೇಡ ಅಂತ. ತುಂಬ ಬೇಜಾರಾಯ್ತು’ ಅನ್ನುತ್ತ ಅತ್ತೇಬಿಟ್ಟಳು. ನನಗೆ ಯಾವ ರೀತಿ ಅವಳಿಗೆ ಸಾಂತ್ವನ ಹೇಳಬೇಕೋ ತಿಳಿಯಲಿಲ್ಲ. ‘ಸಾರಿ, ಹಾಗಲ್ಲ ನಾನು ಹೇಳಿದ್ದು’ ಅಂತೇನೋ ವ್ಯರ್ಥ ಸಮಜಾಯಿಷಿ ನೀಡತೊಡಗಿದೆ. ‘ಕೆಂಗಣ್ಣಿರುವವರ ಕಣ್ಣನ್ನು ನೋಡುವುದರಿಂದ ಅದು ಹರಡುವುದಿಲ್ಲ, ಬದಲಿಗೆ ಅವರ ಕಣ್ಣು ತಾಕಿದ ವಸ್ತುಗಳನ್ನು ನಾವು ನಮ್ಮ ಕಣ್ಣಿಗೆ ತಾಕಿಸಿದರೆ ಮಾತ್ರ ಬರುವ ಸಾಧ್ಯತೆ ಇದೆ’ ಎನ್ನುವ ಸತ್ಯ ನನಗೆ ಅರಿವಾಗುವ ವೇಳೆಗೆ ನಮ್ಮಿಬ್ಬರ ಜೀವನದ ಹಾದಿಯೇ ಬದಲಿಸಿ ನಾವು ಬೇರಾಗಿದ್ದರಿಂದ ಅವಳಲ್ಲಿ ಸರಿಯಾಗಿ ಕ್ಷಮೆ ಕೇಳಲೂ ಸಾಧ್ಯವಾಗಿಲ್ಲ ಅನ್ನುವ ಕೊರಗು ನನಗಿನ್ನೂ ಇದೆ. ಪ್ರಾಯಶಃ ನನ್ನ ಅಜ್ಞಾನದಿಂದಾದ ದೊಡ್ಡ ಪ್ರಮಾದಗಳಲ್ಲಿ ಇದೊಂದು ಅನಿಸುತ್ತದೆ ನನಗೆ.
* * *
ಅದೆಲ್ಲ ಏನೇ ಇರಲಿ. ತಪ್ಪು ಮಾಡದೆ, ಸಂದೇಹಗಳಿಗೆ ಉತ್ತರ ಹುಡುಕುವ ಪ್ರಯತ್ನ ಮಾಡದೆ ಮನುಷ್ಯ ಏನೂ ಹೊಸತನ್ನು ಕಲಿಯಲಾರ ಅನ್ನುವುದು ಮಾತ್ರ ಸಾರ್ವಕಾಲಿಕ ಸತ್ಯ.